ವಿಷ್ಣುವಿನ ದಶಾವತಾರ ಕಲಿಸುವ ಪಾಠಗಳು..

By Suvarna NewsFirst Published Apr 21, 2022, 12:00 PM IST
Highlights

ವಿಷ್ಣುವು ಮಾನವ ಕುಲದ ಒಳಿತಿಗಾಗಿ, ಧರ್ಮ ಸಂಸ್ಥಾಪನೆಗಾಗಿ ಅವತಾರಗಳನ್ನು ಎತ್ತಿದ್ದಾನೆ. ಪ್ರತಿಯೊಂದು ಅವತಾರದಲ್ಲೂ ಮಾನವ ಕುಲಕ್ಕೆ ಒಂದೊಂದು ಸಂದೇಶವಿದೆ. 

ಭಗವಾನ್ ವಿಷ್ಣು(Lord Vishnu)ವು ಇದುವರೆಗೂ 10 ಅವತಾರಗಳನ್ನು ತಾಳಿದ್ದು ನಮಗೆಲ್ಲ ಗೊತ್ತೇ ಇದೆ. ಪ್ರತಿ ಬಾರಿಯೂ ಭೂಮಿಯ ಮೇಲೆ ಧರ್ಮ ಸಂಸ್ಥಾಪನೆಗಾಗಿ ವಿಷ್ಣುವು ಅವತಾರವೆತ್ತುತ್ತಲೇ ಬಂದಿದ್ದಾನೆ. ವಿಷ್ಣುವಿನ ಈ 10 ಅವತಾರಗಳು ನಮಗೆ ಯಾವ ಪಾಠ ಹೇಳುತ್ತವೆ ನೋಡೋಣ.

ಮತ್ಸ್ಯ: ವಿಷ್ಣುವಿನ ಮೊದಲ ಅವತಾರವಾದ ಮತ್ಸ್ಯ ಅಂದರೆ ಮೀನು(fish) ಸೃಷ್ಟಿಯನ್ನು ಸಂಕೇತಿಸುತ್ತದೆ. 'ಮತ್ಸ್ಯನ್ಯಾಯ' ಎಂಬ ಬಂಗಾಳಿ ಪದದ ಬಗ್ಗೆ ನೀವು ಕೇಳಿರಬಹುದು. ಈ ಮತ್ಸ್ಯನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಮೀನು ಸಣ್ಣ ಮೀನನ್ನು ಕಬಳಿಸಿದರೆ ಅದನ್ನು ಅನ್ಯಾಯ ಎಂದು ಪರಿಗಣಿಸಲಾಗುವುದಿಲ್ಲ.

Latest Videos

ಕೂರ್ಮಾ: ಕೂರ್ಮಾ ಅಥವಾ ಆಮೆ(tortoise) ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಸಮತೋಲನದ ಸಂಕೇತವಾಗಿದೆ. ಜೀವನದಲ್ಲಿ ನಾವು ಮಾಡುವ ಯಾವುದೇ ಕೆಲಸದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಇದು ನಮಗೆ ಕಲಿಸುತ್ತದೆ. ನಾವು ಮಾಡುವ ಯಾವುದೇ ಕೆಲಸದಲ್ಲಿ ಅಸಮತೋಲನ ಇದ್ದರೆ, ಗುರಿ ತಲುಪಲು ಸಾಧ್ಯವಾಗುವುದಿಲ್ಲ. 

ವರಾಹ: ವರಾಹ ಅಥವಾ ಕಾಡುಹಂದಿ(wild boar) ಬಲವನ್ನು ಸಂಕೇತಿಸುತ್ತದೆ. ದುಷ್ಟ ಶಕ್ತಿಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಮತ್ತು ದುಷ್ಟ ಶಕ್ತಿಯು ಮಿತಿ ಮೀರಿದರೆ ಬಲದ ಬಳಕೆ ಅನಿವಾರ್ಯವಾಗುತ್ತದೆ. ಹಿರಣ್ಯಾಕ್ಷನು ಭೂಮಿ ತಾಯಿಯನ್ನು ಸಾಗರದೊಳಗೆ ಇರಿಸಿದಾಗ ವರಾಹನು ಆತನನ್ನು ಕೊಂದು ಭೂ ತಾಯಿಯನ್ನು ಉಳಿಸಿದನು.

ವಾಮನ: ವಿಷ್ಣುವಿನ ಈ ಅವತಾರವು ನಮಗೆ ಒಂದು ಪ್ರಮುಖ ಪಾಠವನ್ನು ಕಲಿಸುತ್ತದೆ. ಅದೆಂದರೆ ಜೀವನದಲ್ಲಿ ಎಲ್ಲವನ್ನೂ ಹೊಂದಲು ಸಾಧ್ಯವಿಲ್ಲ. ನಾವು ಮಾಡುವ ಪ್ರತಿಯೊಂದಕ್ಕೂ ಒಂದು ಮಿತಿ ಇರುತ್ತದೆ. ಹಾಗಾಗಿ ಐಹಿಕ ವಸ್ತುಗಳ ರೂಪದಲ್ಲಿ ಎಲ್ಲವನ್ನೂ ಪಡೆದಿದ್ದರೂ ನಾವು ಜಂಭ ಕೊಚ್ಚಿಕೊಳ್ಳಬಾರದು.

ನರಸಿಂಹ: ಹೆಸರೇ ಸೂಚಿಸುವಂತೆ ನರಸಿಂಹ ಅರ್ಧ ಸಿಂಹ ಮತ್ತು ಅರ್ಧ ಮನುಷ್ಯ. ಅವನು ಬುದ್ಧಿವಂತಿಕೆಯ ಸಂಕೇತ. ದೇವರು ಎಲ್ಲೆಡೆ ಇದ್ದಾನೆ ಎಂಬುದನ್ನು ನರಸಿಂಹಾವತಾರವು ತಿಳಿಸುತ್ತದೆ. ನೀವು ಮಾಡಬೇಕಾಗಿರುವುದು ನಿಮ್ಮ ಒಳಗಣ್ಣು ತೆರೆದು ನೋಡಿ ಪ್ರಾರ್ಥಿಸಿದರೆ ಆಗ ದೇವರು ನಿಮ್ಮ ಹೃದಯದಲ್ಲೇ ಇರುವುದು ತಿಳಿಯುತ್ತದೆ. 

ಸಮಾಧಿಯಾದ 130 ವರ್ಷ ಬಳಿಕ ಮುನ್ರೋ ಜೊತೆ ಮಾತನಾಡಿದ ರಾಯರು!

ಪರಶುರಾಮ: ದಮನಕಾರಿ ಕ್ಷತ್ರಿಯ ರಾಜರ ಕೈಯಿಂದ ಬ್ರಾಹ್ಮಣರನ್ನು ರಕ್ಷಿಸಲು ವಿಷ್ಣುವು ಪರಶುರಾಮನಾಗಿ ಜನಿಸಿದನು. ಒಬ್ಬ ಸಂತನು ಅಗತ್ಯ ಬಿದ್ದರೆ ದಬ್ಬಾಳಿಕೆಯ ವಿರುದ್ಧ ಸಶಸ್ತ್ರ ಪ್ರತಿರೋಧವನ್ನು ಆಶ್ರಯಿಸಬಹುದು ಎಂದು ಪರಶುರಾಮ ಅವತಾರದ ಮೂಲಕ ಭಗವಾನ್ ವಿಷ್ಣುವು ಮಾನವ ಜನಾಂಗಕ್ಕೆ ತಿಳಿಸಿದ್ದಾನೆ. ಕ್ಷತ್ರಿಯ ರಾಜರಿಂದ ಬ್ರಾಹ್ಮಣರು ಹಿಂಸೆ, ಮರಣದಂಡನೆ ಮತ್ತು ದಬ್ಬಾಳಿಕೆಗೆ ಒಳಗಾದಾಗ, ಕ್ಷತ್ರಿಯ ರಾಜ(Kshatriya king)ರ ಹಿಡಿತದಿಂದ ಬ್ರಾಹ್ಮಣರನ್ನು ರಕ್ಷಿಸಲು ವಿಷ್ಣುವು ಪರಶುರಾಮನಾಗಿ ಕಾಣಿಸಿಕೊಂಡನು.

ರಾಮ: ರಾಮನನ್ನು ಮರ್ಯಾದಾ ಪುರುಷೋತ್ತಮ ಎನ್ನುತ್ತೇವೆ. ಯುದ್ಧರಂಗದಲ್ಲಾದರೂ ಸರಿ, ಕುಟುಂಬ ಜೀವನಕ್ಕೆ ಬಂದರೂ ಸರಿ, ನೈತಿಕತೆ, ಆದರ್ಶಗಳನ್ನು ಬಿಟ್ಟು ಕೊಡಬಾರದು ಎಂಬುದನ್ನು ರಾಮನ ಅವತಾರದಲ್ಲಿ ವಿಷ್ಣುವು ತಿಳಿಸುತ್ತಾನೆ. ಆದರ್ಶಗಳನ್ನು ಮರೆಯುವುದು, ನಿಯಮ ಮುರಿಯುವುದು ಪಾಪಕ್ಕೆ ಸಮನಾಗಿದೆ. ಪ್ರತಿಯೊಬ್ಬರೂ ಒಂದಿಷ್ಟು ನೈತಿಕ ಪ್ರಜ್ಞೆಯನ್ನು ಹೊಂದಿರಬೇಕು.

ಕೃಷ್ಣ: ಅನಿವಾರ್ಯವಾದಾಗ ನಿಯಮ ಮೀರಬಹುದು ಎಂಬುದನ್ನು ಕೃಷ್ಣನ ಅವತಾರದಲ್ಲಿ ಕಲಿಯಬಹುದಾಗಿದೆ. ಕರ್ತವ್ಯ ನಿಭಾಯಿಸುವಾಗ ಗೊಂದಲಕ್ಕೊಳಗಾಗಬಾರದು. ಫಲ  ನಿರೀಕ್ಷೆಯಿಲ್ಲದೆ ಧರ್ಮಕಾರ್ಯದಲ್ಲಿ ತೊಡಗಬೇಕು. ಬದಲಾಗುವ ಪರಿಸ್ಥಿತಿಗೆ ಅನುಗುಣವಾಗಿ ನಾವೂ ನಮ್ಮನ್ನು ಬದಲಿಸಿಕೊಳ್ಳಬೇಕು ಎಂಬುದನ್ನು ಕೃಷ್ಣನ ಅವತಾರ ಹೇಳಿಕೊಡುತ್ತದೆ. 

ನಿಮ್ಮ ಮುಖದ ಮಚ್ಚೆಗಳು ನಿಮ್ಮ ಬಗ್ಗೆ ಏನು ಹೇಳ್ತಿವೆ ಗೊತ್ತಾ?

ಬುದ್ಧ: ಬೌದ್ಧ ಧರ್ಮ ಅಧ್ಯಯನ ಮಾಡಿದ ವಿದ್ವಾಂಸರ ಪ್ರಕಾರ, ಬುದ್ಧನು ವಿಷ್ಣುವಿನ ಅವತಾರವಲ್ಲ. ಈ ವಿವಾದಕ್ಕೆ ಕೈ ಹಾಕದೆ ನೋಡಿದರೆ, ಬುದ್ಧನ ಅವತಾರದಿಂದ ಜಾತಿ, ಲಿಂಗ, ಮತವನ್ನು ಬದಿಗಿಟ್ಟು ಎಲ್ಲರನ್ನೂ ಸಮಾನವಾಗಿ ಪ್ರೀತಿಸಬೇಕು ಎಂಬುದನ್ನು ಕಲಿಯಬಹುದಾಗಿದೆ. 

ಕಲ್ಕಿ:  ಭಾರತವು ಮೊಂಗಲ್, ತುರ್ಕರು ಮುಂತಾದ ಅನೇಕ ಮಧ್ಯ ಏಷ್ಯಾದ ಬುಡಕಟ್ಟುಗಳ ಆಕ್ರಮಣಕ್ಕೆ ಒಳಗಾದಾಗ ಹೊಸ ಅವತಾರ ಪರಿಕಲ್ಪನೆಯ ರಚನೆಗೆ ದಾರಿ ಮಾಡಿಕೊಟ್ಟಿತು. ಇವರ ಹಿಡಿತದಿಂದ ಜನರನ್ನು ರಕ್ಷಿಸಲು ಭಗವಾನ್ ವಿಷ್ಣುವು ಕಲ್ಕಿ ರೂಪದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಾನೆ ಎಂದು ಜನರು ಯೋಚಿಸಲು ಪ್ರಾರಂಭಿಸಿದರು. ಇದು ತೀರ್ಪಿನ ದಿನವನ್ನು ನೆನಪಿಸುತ್ತದೆ. 

click me!