ಕೆಲಸದಲ್ಲಿ ಏಕಾಗ್ರತೆ ಇಲ್ಲವೇ? ಹೀಗೆ ಮಾಡಿ ನೋಡಿ..

By Web DeskFirst Published Jul 2, 2019, 11:26 AM IST
Highlights

ಉದ್ಯೋಗದ ಸಮಯದಲ್ಲಿ ಗಮನ ಅಲ್ಲಿ ಕೆಂಪು ಚೂಡಿ ತೊಟ್ಟವಳ ಕಡೆ ಹರಿಯುತ್ತದೆಯೇ? ಆ ಕೆಂಪು ಬಣ್ಣ ಹಳೆಯದ್ಯಾವುದೋ ನೆನಪು ಹೊತ್ತು ತರಬಹುದು. ಆ ನೆನಪು ಮೂವಿಯಂತೆ ಉದ್ದನೆ ಹರಿಯುತ್ತಾ ಹೋಗಬಹುದು. ಅಥವಾ ನಾಳೆ ನಿಮ್ಮ ಹುಡುಗಿಯನ್ನು ಮೀಟ್ ಮಾಡಬೇಕೆಂದು ಯೋಚಿಸುತ್ತಲೇ ಕನಸಿನ ತೇರು ಓಡಲಾರಂಭಿಸಬಹುದು. ಇಲ್ಲವೇ ಕೆಲಸಕ್ಕೆ ಕೂತಾಗಲೇ ತಿನ್ನುವ, ನೀರು ಕುಡಿಯುವ ಬಯಕೆಯಾಗಬಹುದು...

ಆಗಾಗ ಕೆಲಸದ ಮಧ್ಯೆ ಏಕಾಗ್ರತೆ ತಪ್ಪುತ್ತದೆಯೇ? ಮನಸ್ಸನ್ನು ಎಷ್ಟೇ ಎಳೆದು ತಂದು ಕೂರಿಸಿದರೂ ಮತ್ತೆಲ್ಲೋ ಓಡಿ ಹೋಗುತ್ತದೆಯೇ? ಚಿಂತೆ ಬೇಡ. ನಿಮಗೆ ಮಾತ್ರವಲ್ಲ, ಬೆಸ್ಟ್ ಎಂಪ್ಲಾಯಿ ಎನಿಸಿಕೊಂಡವರಿಗೂ ಹೀಗೆ ಆಗುತ್ತದೆ. ಕೆಲವೊಮ್ಮೆ ನಮ್ಮ ಮನಸ್ಸು ದೂರ ಓಡಿರುವ ಬಗ್ಗೆ ಗಮನ ಹೋಗುವಷ್ಟರಲ್ಲಿ ಗಂಟೆಗಳೇ ವ್ಯರ್ಥವಾಗಿರುತ್ತವೆ. ಇದಕ್ಕಾಗಿ ನಮ್ಮ ಸ್ಮಾರ್ಟ್‌ಫೋನನ್ನೋ, ಸೋಷ್ಯಲ್ ಮೀಡಿಯಾವನ್ನೋ ಬಯ್ದು ನಿರಾಳರಾಗಬಹುದು. ಆದರೆ, ನಿಜವಾದ ತಪ್ಪಿತಸ್ಥರು ಬೇರೆಯೇ ಇದ್ದಾರೆ. 

ಹಾರ್ವರ್ಡ್ ಸ್ಟಡಿ

ಈ ಬಗ್ಗೆ ಅಧ್ಯಯನ ಕೈಗೊಂಡ ಹಾರ್ವರ್ಡ್ ಯೂನಿರ್ವಸಿಟಿಯ ಮನಶಾಸ್ತ್ರಜ್ಞರಾದ ಮ್ಯಾಥ್ಯೂ ಕಿಲ್ಲಿಂಗ್ಸ್‌ವರ್ತ್ ಹಾಗೂ ಡೇನಿಯಲ್ ಗಿಲ್ಬರ್ಟ್ ನಿಜವಾದ ವಿಲನ್ ನಮ್ಮ ಮನಸ್ಸೇ ಹೊರತು ಮೊಬೈಲ್ ಫೋನಾಗಲೀ, ಸುತ್ತಲಿನ ಪರಿಸರವಾಗಲೀ ಅಲ್ಲ ಎಂದಿದ್ದಾರೆ. ನಮ್ಮ ಮನಸ್ಸು ಗಮನ ಕಳೆದುಕೊಳ್ಳುವ ಸ್ಥಿತಿಯನ್ನು ಬಹುವಾಗಿ ಎಂಜಾಯ್ ಮಾಡುತ್ತದೆ. ಹೀಗಾಗಿ, ಇದೊಂದು ಸಾಮಾನ್ಯ ಸಂಗತಿಯೇ ಹೊರತು, ಸಮಸ್ಯೆಯಲ್ಲ ಎಂದು ಅವರು ವಿವರಿಸಿದ್ದಾರೆ. 

ಆಫೀಸಿನಲ್ಲಿ ಮನೆ ರೀತಿ ಇದ್ರೆ ಏನ್ ಚೆಂದ ಹೇಳಿ?

ಸುಮಾರು 2250 ಉದ್ಯೋಗಿಗಳು ಈ ಅಧ್ಯಯನದಲ್ಲಿ ಭಾಗಿಯಾಗಿದ್ದು, ಅವರೆಲ್ಲರೂ ಸರಾಸರಿ ಶೇ.47ರಷ್ಟು ತಮ್ಮ ಉದ್ಯೋಗದ ಸಮಯವನ್ನು ಮನಸ್ಸು ಅಲೆಯುವಲ್ಲಿ ತೆಗೆದುಕೊಂಡು ಹೋಗುತ್ತಾ ಎಂಜಾಯ್ ಮಾಡುವುದಾಗಿ ಹೇಳಿದ್ದಾರೆ.  ಹೌದು, ಮನಸ್ಸು ಯಾವೊಂದು ವಿಷಯದಲ್ಲೂ ಹೆಚ್ಚು ಕಾಲ ನಿಲ್ಲದೆ ಯೋಚನೆ ಬಂದತ್ತಲೆಲ್ಲ ಓಡುತ್ತಲೇ ಇರುತ್ತದೆ. ಅದು ಉದ್ಯೋಗದ ಸಮಯದಲ್ಲೂ ಹೊರತಲ್ಲ. ನೋಡುವವರ ಕಣ್ಣಿನಲ್ಲಿ ನೀವು ಅಲ್ಲಿಯೇ ಕುಳಿತು ಕೆಲಸ ಮಾಡುತ್ತಿರುವಂತಿರುತ್ತದೆ. ಆದರೂ ಮನಸ್ಸು ಮಾತ್ರ ಊರೂರು ಅಲೆಯುತ್ತಿರುತ್ತದೆ. ಅದೊಂತರಾ ಆಟೋಪೈಲಟ್ ಮೋಡ್‌ನಲ್ಲಿರುತ್ತದೆ. 

ಮನಸ್ಸು ಅಲೆದಾಡುವುದೇಕೆ?

ನಮ್ಮ ಭಾವನೆಗಳು ಮನಸ್ಸು ಓಡಲು ಕಾರಣವೇ ಹೊರತು, ಮಾಡುವ ಕೆಲಸವಲ್ಲ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಅದರಲ್ಲೂ ನಾವು ದುಃಖದಲ್ಲಿದ್ದಾಗ, ಚಿಂತೆಯಿದ್ದಾಗ, ಸಿಟ್ಟಾದಾಗ ಹೀಗೆ ನಕಾರಾತ್ಮಕ ಭಾವನೆಗಳು ಇದ್ದಾಗ ನಮ್ಮ ಗಮನ ಬೇರೆಡೆ ಹರಿಯುವ ಸಾಧ್ಯತೆಗಳು ಜಾಸ್ತಿ. ಹೀಗಾಗಿ, ನಾವು ಕೆಲಸದಲ್ಲಿ ಏಕಾಗ್ರತೆ ಸಾಧಿಸಬೇಕೆಂದರೆ ಸುತ್ತಲಿನ ಪರಿಸರ ಬದಲಿಸುವ ಬದಲು, ನಮ್ಮ ಭಾವನೆಗಳ ಕಡೆ ಗಮನ ಹರಿಸಬೇಕು. 

ಮನಸ್ಸು ಅಲೆದಾಡುವುದನ್ನು ಗುರುತಿಸಿ

ಎಷ್ಟೋ ಬಾರಿ ಹೀಗೆ ಮನಸ್ಸು ಅಲೆಯುತ್ತಿರುವುದು ನಮ್ಮ ಗಮನಕ್ಕೆ ಬರುವಾಗಲೇ ಗಂಟೆಗಳೇ ವ್ಯರ್ಥವಾಗಿರುತ್ತವೆ. ಮೀಟಿಂಗ್‌ನಲ್ಲಿ ಕುಳಿತಿದ್ದರೆ ನಾವು ವಾಪಸ್ ಬರುವ ಹೊತ್ತಿಗೆ ಅರ್ಧ ಮೀಟಿಂಗ್ ಮುಗಿದು ಹೋಗಿರುತ್ತದೆ. ಆದರೆ, ಅಲ್ಲಿ ಏನೇನು ಚರ್ಚಿಸಲಾಯಿತೆಂಬ ವಿಷಯ ಮಾತ್ರ ಒಂದು ಚೂರೂ ತಿಳಿದಿರುವುದಿಲ್ಲ. ಇದನ್ನು ಇತರರು ನೋಟಿಸ್ ಮಾಡಿದರೆ ಬಹಳ ಅವಮಾನಕಾರಿ ಎನಿಸುತ್ತದೆ. ಹೀಗಾಗಿ, ಇಂಥ ಏಕಾಗ್ರತೆ ಸಮಸ್ಯೆಯಿಂದ ಹೊರಬರಲು ಮೊದಲು ಮಾಡಬೇಕಿರುವುದು ಮನಸ್ಸು ಅಲೆಯುತ್ತಿದೆ ಎಂಬುದನ್ನು ತಕ್ಷಣ ಗುರುತಿಸುವುದು. ಈ ಬಗ್ಗೆ ಸತತ ಪ್ರಯತ್ನ ಹಾಕುವುದರಿಂದ ನಿಧಾನವಾಗಿ ಮನಸ್ಸು ಅಲೆದಾಟ ಕಡಿಮೆ ಮಾಡುತ್ತದೆ.

ಚೆನ್ನಾಗಿ ಮಾತನಾಡೋರಿಗೆ ಈ ಕೆಲಸ ಬೆಸ್ಟ್....

ವರ್ತಮಾನಕ್ಕೆ ಬನ್ನಿ

ರಿಯಾಲಿಟಿಗೆ ಬಂದರೆ ಸಾಲದು. ಮನಸ್ಸನ್ನು ಮಾಡುವ ಕೆಲಸದಲ್ಲಿ ಹಿಡಿದು ನಿಲ್ಲಿಸುವುದು ತುಂಬಾ ಮುಖ್ಯ, ಇಲ್ಲವಾದರೆ ಮತ್ತೆ ಮನಸ್ಸು ಚಿಟಿಕೆ ಹೊಡೆಯುವಷ್ಟರಲ್ಲಿ ಕೋಟಿಗಟ್ಟಲೆ ಕಿಲೋಮೀಟರ್ ದೂರ ಕ್ರಮಿಸಿಬಿಟ್ಟಿರುತ್ತದೆ. ಹಾಗಾಗಿ, ವರ್ತಮಾನದಲ್ಲಿ ಗಮನ ವಹಿಸುವ ಅಭ್ಯಾಸ ಮಾಡಬೇಕು. ಉದಾಹರಣೆಗೆ ಮನಸ್ಸು ತಿರುಗಾಡುವುದು ಕಂಡುಬಂದ ಕೂಡಲೇ, ಸುತ್ತಲಿನ ಜನರು ಏನು ಮಾಡುತ್ತಿದ್ದಾರೆ, ಮಾತನಾಡುತ್ತಿದ್ದಾರೆ ಎಂಬುದನ್ನು ಗಮನಿಸಿ. ನಿಮ್ಮ ಸುತ್ತಮುತ್ತಲೂ ಏನಿದೆ ಎಂಬುದನ್ನು ನೋಡಿಕೊಳ್ಳಿ. 
ಆ ಮೂಲಕ ಅಲ್ಲಿಯೇ ಇದ್ದು ಕೆಲಸ ಮಾಡುವಂತೆ ಮನಸ್ಸಿಗೆ ಆರ್ಡರ್ ಮಾಡಿ. ನೀವು ಹೆಡ್‌ಮಾಸ್ಟರ್‌ನಂತೆ ಅದನ್ನು ಗಮನಿಸುವುದು ಬಿಟ್ಟಿರೆಂದರೆ, ತುಂಟ ವಿದ್ಯಾರ್ಥಿಯಂತೆ ಪಕ್ಕನೆ ಮಾಯವಾಗುವ ಸ್ವಭಾವ ಮನಸ್ಸಿನದ್ದು. ಹೀಗಾಗಿ, ನಿರಂತರ ಕೋಲು ಹಿಡಿದು ನಿಂತ ಸ್ಟ್ರಿಕ್ಟ್ ಟೀಚರ್‌ನಂತೆ ಮನಸ್ಸನ್ನು ಗಮನಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಅಲ್ಲಿಯೇ ನಿಲ್ಲಿ

ಕೋರ್ಸ್ ಸಣ್ಣದು, ಭವಿಷ್ಯದ ಹಾದಿ ದೊಡ್ಡದು!

ವರ್ತಮಾನಕ್ಕೆ ಬಂದರೆ ಸಾಲದು, ಅಲ್ಲಿಯೇ ಮುಂದಿನ 20 ಸೆಕೆಂಡ್ ಕಾಲ ಫೋಕಸ್ ಮಾಡಿ. ಫೋಕಸ್ ಮಾಡುವುದನ್ನು ಅಭ್ಯಾಸ ಮಾಡಲು, ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುವಾಗ ಅದರ ಲಿರಿಕ್ಸ್, ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಎಲ್ಲವನ್ನೂ ಅಬ್ಸರ್ವ್ ಮಾಡುವುದು, ಆಹಾರ ತಿನ್ನುವಾಗ ಅದರ ರುಚಿಯನ್ನು ಸಂಪೂರ್ಣ ಸವಿಯುತ್ತಾ ಏನೇನು ಸಾಮಗ್ರಿಗಳನ್ನು ಹಾಕಿದ್ದಾರೆ ಎಂದೆಲ್ಲ ಗಮನಿಸುವುದು- ಮನಸ್ಸಿಗೆ ಇಂಥ ಎಕ್ಸರ್ಸೈಸ್ ಮಾಡಿಸಿ. ನಿಧಾನವಾಗಿ ಮಾಡುವ ಕೆಲಸದ ಬಗ್ಗೆ ಗಮನ ಹರಿಸುವುದು ಅಭ್ಯಾಸವಾಗುತ್ತದೆ. 

click me!