ಬದುಕಲಿಲ್ಲ ಉನ್ನಾವ್ ಅತ್ಯಾಚಾರ ಸಂತ್ರಸ್ತೆ

By Kannadaprabha NewsFirst Published Dec 7, 2019, 7:34 AM IST
Highlights

ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾಳೆ. 

ನವದೆಹಲಿ[ಡಿ.07]: ಉನ್ನಾವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಶುಕ್ರವಾರ ತಡರಾತ್ರಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾಳೆ. ಉತ್ತರ ಪ್ರದೇಶದಉನ್ನಾವೋ ಜಿಲ್ಲೆಯಲ್ಲಿ ಐದು ಮಂದಿ ದುರುಳರು ಆಕೆಯ ಮೇಲೆ ಹಲ್ಲೆ ನಡೆಸಿ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದರು. ಶೇ.90 ರಷ್ಟು ಸುಟ್ಟಗಾಯಗಳಾಗಿದ್ದ 23 ವರ್ಷದ ಸಂತ್ರಸ್ತೆಯನ್ನು ಉತ್ತರ ಪ್ರದೇಶದ ಲಖನೌನಿಂದ ದಿಲ್ಲಿಗೆಕರೆತಂದು ಸಫ್ಧರ್ ಜಂಗ್ ಆಸ್ಪತೆಗೆ ದಾಖಲಿಸಲಾಗಿತ್ತು. 

ರಾತ್ರಿ 11.40 ಸಮಯ ದಲ್ಲಿ ಹೃದಯ ಸ್ತಂಭನದಿಂದ ಸಂತ್ರಸ್ತೆ ಸಾವಿಗೀಡಾಗಿದ್ದಾಳೆ. ಆಕೆಯನ್ನು ರಕ್ಷಿಸಲು ಯತ್ನಿಸಿದ ಪ್ರಯತ್ನ ಕೈಗೂಡಲಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಚಾಕುವಿನಿಂದ ಇರಿದು ಬೆಂಕಿ ಹಚ್ಚಿದ್ದರು: ಅತ್ಯಾಚಾರಿ ಆರೋಪಿಗಳು ಗುರುವಾರ ನಡೆಸಿದ ಪೈಶಾಚಿಕ ಕೃತ್ಯದ ಬಗ್ಗೆ ಸಂತ್ರಸ್ತೆ ಸಾವಿಗೂ ಮುನ್ನಪೊಲೀಸರಿಗೆ ಆಸ್ಪತ್ರೆಯಲ್ಲಿ ಮಾಹಿತಿ ನೀಡಿದ್ದರು. ‘ಗುರುವಾರ ರಾಯ್‌ಬರೇಲಿ ಕೋರ್ಟ್‌ನಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆ ಇತ್ತು. ಅಲ್ಲಿಗೆ ತೆರಳಲು ರೈಲು ಏರಲೆಂದು ಮುಂಜಾನೆ 4 ಗಂಟೆ ವೇಳೆಗೆ ನಾನು ಮನೆಯಿಂದ ಹೊರಟ್ಟಿದ್ದೆ. ಈ ವೇಳೆ ರಸ್ತೆಯಲ್ಲಿ ನನಗಾಗಿಯೇ ಕಾದು ನಿಂತಿದ್ದ ಐದೂ ಜನ ಮೊದಲು ನನ್ನನ್ನು ಅಡ್ಡಗಟ್ಟಿ ಮನಬಂದಂತೆ ದೂಷಣೆ ಮಾಡಿದರು.

ಹೈದರಾಬಾದ್ ಎನ್‌ಕೌಂಟರ್ ಖಂಡಿಸಿ ಪಿತ್ತ ನೆತ್ತಿಗೇರಿಸಿಕೊಂಡ ಕರ್ನಾಟಕದ ವಕೀಲ...

ಈ ವೇಳೆ ಒಬ್ಬ ನನ್ನ ಕಾಲಿಗೆ ಬಡಿಗೆಯಿಂದ ಬಲವಾಗಿ ಹೊಡೆದ. ಆ ನೋವಿನಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಬ್ಬ ಚಾಕುವಿನಿಂದ ನನ್ನ ಕುತ್ತಿಗೆ ಬಳಿ ಇರಿದ. ಇದಾದ ಬಳಿಕ ಅವರು ನನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಬೆಂಕಿ ಉರಿ ತಾಳಲಾಗದೇ ನಾನು ಆ ಸ್ಥಳದಿಂದ ಚೀರಾಡುತ್ತಾ ರಸ್ತೆಯಲ್ಲೇ ಸುಮಾರು ದೂರ ಓಡುತ್ತಾ ಹೋದೆ. ನನ್ನ ಕೂಗು ಕೇಳಿದ ಕೆಲ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಬಳಿಕ ಅವರೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು’ ಎಂದು ಸಂತ್ರಸ್ತೆ ತಿಳಿಸಿದ್ದರು. ‘ಐವರು ದಾಳಿಕೋರರ ಪೈಕಿ, ಶಿವಂ ತ್ರಿವೇದಿಎಂಬಾತ ಅತ್ಯಾಚಾರ ಪ್ರಮುಖ ಆರೋಪಿಯಾಗಿದ್ದು ಐದು ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಮತ್ತೊಬ್ಬ ಅತ್ಯಾಚಾರ ಆರೋಪಿ ಶುಭಂ ತ್ರಿವೇದಿ ಕೂಡ ದಾಳಿ ನಡೆಸಿದ ಗುಂಪಿನಲ್ಲಿದ್ದು, ಈಗ ತಲೆ ಮರೆಸಿಕೊಂಡಿದ್ದಾನೆ’ ಎಂದೂ ಸಂತ್ರಸ್ತೆ ಮಾಹಿತಿ ನೀಡಿದ್ದರು.

click me!