ನೂಪುರ್‌ ಪರ ವ್ಯಾಟ್ಸಾಪ್‌ ಸ್ಟೇಟಸ್‌ ಹಾಕಿದ 8 ವರ್ಷದ ಪುತ್ರ, ಬರ್ಬರವಾಗಿ ಹತ್ಯೆಯಾದ ತಂದೆ!

By Santosh NaikFirst Published Jun 28, 2022, 9:50 PM IST
Highlights

ರಾಜಸ್ಥಾನದ ಉದಯಪುರದಲ್ಲಿ ಎಂಟು ವರ್ಷದ ಮಗು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಮೊಬೈಲ್ ಮೂಲಕ ವ್ಯಾಟ್ಸಾಪ್‌ನಲ್ಲಿ ಸ್ಟೇಟಸ್ ಪೋಸ್ಟ್ ಮಾಡಿತ್ತು. ಆದರೆ, ಟೈಲರ್ ಆಗಿದ್ದ ತಂದೆಯೇ ಇದನ್ನು ಪೋಸ್ಟ್‌ ಮಾಡಿದ್ದಾನೆ ಎಂದು ತಿಳಿದ ಪಾತಕಿಗಳು, ಹಾಡುಹಗಲಲ್ಲೇ ಕತ್ತಿಯಿಂದ ಆತನ ಶಿರಚ್ಛೇದನವನ್ನು ಮಾಡಿ ಕ್ರೌರ್ಯ ಮೆರೆದಿದ್ದಾರೆ.

ಉದಯಪುರ (ಜೂನ್ 28): ರಾಜಸ್ಥಾನದ ಉದಯಪುರದಲ್ಲಿ (Udaipur Murder Case) ನಡೆದ ಭೀಕರ ಕೃತ್ಯ ಇಂದು ದೇಶವ್ಯಾಪಿ ಅತಂಕಕ್ಕೆ ಕಾರಣವಾಗಿದೆ. ಹಾಡುಹಗಲಲ್ಲೇ ಇಬ್ಬರು ಪಾತಕಿಗಳು ಧನ್ಮಂಡಿ ಪೊಲೀಸ್ ಠಾಣೆ (Dhanmandi police station) ವಲಯದ ಮಾಲ್ಡಾಸ್‌ ರಸ್ತೆಯಯಲ್ಲಿ ಹಿಂದೂ ಯುವಕ ಕನ್ಹಯ್ಯಲಾಲ್‌ರ (Kanhaiyalal ) ಶಿರಚ್ಛೇಧ ಮಾಡಿ ಕ್ರೌರ್ಯ ಮೆರೆದಿದ್ದಾರೆ. ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ವಿವಾದಿತ ಹೇಳಿಕೆ ನೀಡಿದ್ದ ನೂಪುರ್ ಶರ್ಮ (Nupur Sharma) ಪರವಾಗಿ ವ್ಯಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿದ್ದ ಕಾರಣಕ್ಕಾಗಿ ಈ ಬರ್ಬರ ಹತ್ಯೆ ಮಾಡಲಾಗಿದೆ.

ಮೂಲಗಳ ಪ್ರಕಾರ ಅಪ್ಪನ ಮೊಬೈಲ್‌ನ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ನೂಪುರ್‌ ಶರ್ಮ ಪರವಾದ ಪೋಸ್ಟ್‌ ಹಾಕಿದ್ದು ಅವರ 8 ವರ್ಷದ ಪುತ್ರ ಎನ್ನುವ ಮಾಹಿತಿ ಬಹಿರಂಗವಾಗಿದೆ. ಆದರೆ, ಪಾತಕಿಗಳು ಅಪ್ಪನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ರಾಜಸ್ಥಾನ ಪೊಲೀಸರು ರಾಜ್ಸಾಮಂಡ್‌ನ ಭೀಮ್‌ ಪ್ರದೇಶದಿಂದ ಆರೋಪಿಗಳಾದ ಮೊಹಮದ್ ರಿಯಾಜ್‌ ಹಾಗೂ ಮೊಹಮದ್ ಗೌಸ್‌ನನ್ನು ಬಂಧಿಸಿದ್ದಾರೆ.

ಟೈಲರ್‌ ಆಗಿದ್ದ ಕನ್ಹಯ್ಯಲಾಲ್, ವಾಟ್ಸಾಪ್‌ನಲ್ಲಿ ನೂಪುರ್‌ ಪರವಾಗಿ ಸ್ಟೇಟಸ್ ದಾಖಲಾದ ಬೆನ್ನಲ್ಲಿಯೇ ಕನ್ಹಯ್ಯಲಾಲ್‌ಗೆ ಬೆದರಿಕೆ ಕರೆ ಬರಲು ಆರಂಭವಾಗಿದ್ದವು. ಕಳೆದ 10 ದಿನಗಳಿಂದ ಇಂಥ ಬೆದರಿಕೆ ಕರೆಗಳನ್ನು ಎದುರಿಸುತ್ತಿದ್ದ ಕನ್ಹಯ್ಯಲಾಲ್ ಈ ಕುರಿತಾಗಿ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಭಯದಿಂದಾಗಿ ಕಳೆದ 6 ದಿನಗಳಿಂದ ಅವರು ಮಾಲ್ಡಾಸ್‌ ರಸ್ತೆಯಲ್ಲಿದ್ದ ತಮ್ಮ ಅಂಗಡಿಯನ್ನು ತೆರೆದಿರಲಿಲ್ಲ. ಆದರೆ, ಮಂಗಳವಾರ ಅಂಗಡಿಯನ್ನು ತೆರೆದ ಬೆನ್ನಲ್ಲಿಯೇ, ಬಟ್ಟೆ ಹೊಲಿಸಬೇಕು ಎನ್ನುವ ನೆಪದಲ್ಲಿ ಬಂದ ರಿಯಾಜ್ ಹಾಗೂ ಮೊಹಮದ್ ಗೌಸ್, ಕನ್ಹಯ್ಯಲಾಲ್ ಮೇಲೆ ಹಲ್ಲೆ ಮಾಡಿ, ಶಿರಚ್ಛೇಧ ಮಾಡಿದ್ದಾರೆ.  ಇಂಥ ಭೀಕರ ಕೃತ್ಯ ಮಾಡಿದ ಬಳಿಕ, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್‌ ಮಾಡಿರುವ ಇವರು ಈ ಕೃತ್ಯವನ್ನು ತಾವೇ ಮಾಡಿದ್ದಾಗಿ ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿ, ನೂಪುರ್ ಶರ್ಮ ಹಾಗೂ ಹಿಂದೂ ಸಮಾಜಕ್ಕೂ ಬೆದರಿಕೆ ಹಾಕಿದ್ದಾರೆ.

ಈ ಆಘಾತಕಾರಿ ಘಟನೆಯು ಉದಯಪುರದಲ್ಲಿ ಸಂಚಲನ ಮೂಡಿಸಿದೆ. ಇಂಟರ್ನೆಟ್ ಸ್ಥಗಿತಗೊಳಿಸುವ ಆದೇಶಗಳನ್ನು ನೀಡಲಾಗಿದೆ. ಮುಂದಿನ 24 ಗಂಟೆಗಳ ಕಾಲ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಮಾಹಿತಿ ಮೇರೆಗೆ ಧನ್ಮಂಡಿ ಮತ್ತು ಘಂಟಾಘರ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಶವವನ್ನು ಎಂಬಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಈ ಘಟನೆಯನ್ನು ಹಲವು ರಾಜಕಾರಣಿಗಳು ತೀವ್ರವಾಗಿ ಖಂಡಿಸಿದ್ದಾರೆ.

ಮಾಹಿತಿಯ ಪ್ರಕಾರ, ಮೃತ ಕನ್ಹಯ್ಯಾಲಾಲ್ ಅವರ ಎಂಟು ವರ್ಷದ ಮಗ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಮೊಬೈಲ್‌ನಿಂದ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ. ಇದರಿಂದ ಕೋಪಗೊಂಡ ಕೆಲವರು ಕನ್ಹಯ್ಯಲಾಲ್‌ನನ್ನು ಕತ್ತಿಯಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆಯಿಂದ ಹಿಂದೂ ಸಂಘಟನೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಯುವಕನನ್ನು ಇಬ್ಬರು ಮುಸ್ಲಿಂ ಆರೋಪಿಗಳು ಕತ್ತಿಯಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ.
 

ಉದಯ್‌ಪುರ ಹಿಂದೂ ಯುವಕನ ಹತ್ಯೆ, ಮೋದಿ ಶಾ ರತ್ತ ಕೈತೋರಿಸಿದ ರಾಜಸ್ಥಾನ ಸಿಎಂ!

ಒಂದು ತಿಂಗಳ ಕಾಲ ಸೆಕ್ಷನ್ 144:
ಕನ್ಹಯ್ಯಲಾಲ್‌ ಬರ್ಬರ ಹತ್ಯೆಯ ಬೆನ್ನಲ್ಲಿಯೇ ಉದಯಪುರದಲ್ಲಿ ಒಂದು ತಿಂಗಳ ಕಾಲ ಸೆಕ್ಷನ್ 144 ಜಾರಿ ಮಾಡಲಾಗಿದೆ. ರಾಜ್ಯಾದ್ಯಂತ ವಿಶೇಷ ಕಟ್ಟೆಚ್ಚರ ವಹಿಸುವಂತೆ ಎಲ್ಲಾ ವಿಭಾಗೀಯ ಆಯುಕ್ತರು, ಪೊಲೀಸ್ ಮಹಾನಿರೀಕ್ಷಕರು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಿಂದೂ ಯುವಕನ ತಲೆ ಕತ್ತರಿಸಿದ ಇಬ್ಬರು ಹಂತಕರ ಬಂಧನ, ಭಾರಿ ಪ್ರತಿಭಟನೆ!

ಈ ಸಭೆಯ ನಂತರ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರಾಜ್ಯದಾದ್ಯಂತ ಮುಂದಿನ 24 ಗಂಟೆಗಳ ಕಾಲ ಇಂಟರ್ನೆಟ್ ಅನ್ನು ಮುಚ್ಚಲಾಗುತ್ತದೆ. ಅಲ್ಲದೆ ಮುಂದಿನ ಒಂದು ತಿಂಗಳ ಕಾಲ ಎಲ್ಲ ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲು ನಿರ್ಧರಿಸಲಾಗಿದೆ. ಉದಯಪುರ ಜಿಲ್ಲೆಯಲ್ಲಿ 4ಕ್ಕಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಲು, ಎಲ್ಲಾ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳ ರಜೆ ರದ್ದುಪಡಿಸಲು, ಶಾಂತಿ ಸಮಿತಿ ಸಭೆಗಳನ್ನು ಆಯೋಜಿಸಲು ಮತ್ತು ಅವಶ್ಯಕತೆಗೆ ಅನುಗುಣವಾಗಿ ಕರ್ಫ್ಯೂ ವಿಧಿಸಲು ಸೂಚನೆಗಳನ್ನು ನೀಡಲಾಗಿದೆ. ವ್ಯಾಪ್ತಿಯ ಎಲ್ಲ ಪ್ರಭಾರಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನು ಕಳುಹಿಸುವಂತೆ ಸೂಚಿಸಿದ್ದಾರೆ.

Latest Videos

click me!