ಬಿಜೆಪಿ ಸಂಸದನ ಬಲಗೈ ಬಂಟ ಬರ್ಬರ ಹತ್ಯೆ, ಭೀಮಾತೀರದಲ್ಲಿ ರಕ್ತದೋಕುಳಿಗೆ ಹಂತಕರು ಮಾಡಿದ್ರು ಮಹಾ ಪ್ಲ್ಯಾನ್!

By Suvarna NewsFirst Published Mar 1, 2024, 3:32 PM IST
Highlights

ಕಲಬುರಗಿ ಬಿಜೆಪಿ ಸಂಸದ ಡಾ.ಉಮೇಶ ಜಾಧವ್ ಬಲಗೈ ಭಂಟ ಗಿರೀಶ ಚಕ್ರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಂತಕರ ಮಹಾ ಪ್ಲಾನ್ ಬಯಲಾಗಿದ್ದು, ಸುಫಾರಿ ಕೊಲೆಯ ಅನುಮಾನ ಹುಟ್ಟಿದೆ

ಕಲಬುರಗಿ (ಮಾ.1): ಕಲಬುರಗಿ ಬಿಜೆಪಿ ಸಂಸದ ಡಾ.ಉಮೇಶ ಜಾಧವ್ ಬಲಗೈ ಬಂಟ ಗಿರೀಶ ಚಕ್ರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.  ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಕೊಲೆ ಮಾಡಿ ಹಾಕಲಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಗಿರೀಶ್ ಬಾಬು ಅವರನ್ನು ದೂರ ಸಂಪರ್ಕ ಇಲಾಖೆಯ ಕಲಬುರಗಿ ವಿಭಾಗದ ಸಲಹಾ ಸಮಿತಿ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿತ್ತು. ಹೀಗಾಗಿ ಆತನ ಸ್ನೇಹಿತರು ಪಾರ್ಟಿ ಕೊಡುವುದಾಗಿ ಜಮೀನಿಗೆ ಕರೆಸಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ.

Kalaburagi: ಉಮೇಶ್ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ: ಪಾರ್ಟಿ ನೆಪದಲ್ಲಿ ಜಮೀನಿಗೆ ಕರೆಸಿ ಸ್ನೇಹಿತರಿಂದಲೇ ಮರ್ಡರ್‌

ಸಂಸದನ ಬಲಗೈ ಬಂಟನ ಹತ್ಯೆಗೆ ಸ್ಫೋಟಕ ತಿರುವು:
ಭೀಮಾ ತೀರದಲ್ಲಿ ಸಂಸದನ ಬಲಗೈ ಬಂಟನ ಹತ್ಯೆಗೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಕೊಲೆ ಮಾಡಿದ್ದು ಯಾರ್ಯಾರು ? ಕೊಲೆಗಾರರಿಗೂ ಗಿರೀಶಗೂ ಇರುವ ದ್ವೇಷವಾದ್ರೂ ಏನು ಗೊತ್ತಾ ?

ಭೀಮಾ ತೀರದಲ್ಲಿ ನಡೆದ ಹತ್ಯೆ ಹಿಂದೆ ಸುಫಾರಿ ಕೊಲೆಯ ಅನುಮಾನ ಹುಟ್ಟಿದೆ. ಈ ಕೊಲೆಯ ಪ್ರಮುಖ ಸೂತ್ರದಾರನೇ ಸಚಿನ್. ಸಚಿನ್ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ನಿವಾಸಿ. ಆದ್ರೆ ತಾಯಿಯ ತವರೂರಾದ ಸಾಗನೂರಿನಲ್ಲಿಯೇ ಅಜ್ಜಿ ಜೊತೆ ವಾಸಿಸುತ್ತಿದ್ದ. ವರ್ಷದ ಹಿಂದೆ ಕೊಲೆ ಪ್ರಕರಣವೊಂದರಲ್ಲಿ  ಸಚಿನ್ ಮಾಶಾಳ್ ಜೈಲು ಸೇರಿ ಹೊರಗಡೆ ಬಂದಿದ್ದ.

ಗಿರೀಶ BSNL ಸಲಹಾ ಸಮಿತಿ ನಿರ್ದೇಶಕನಾಗಿ ನಾಮನಿರ್ದೇಶನವಾಗಿದ್ದಕ್ಕೆ ಸಚಿನ್  ಅಭಿನಂದಿಸಿ ಸನ್ಮಾನಿಸಿದ್ದ. ಈ ಸಂದರ್ಭದಲ್ಲಿ ಜೊತೆಗಿದ್ದ ಇತರೇ ಮೂವರು ಹುಡುಗರಿಗೂ ಕೊಲೆಯಾದ ಗಿರೀಶಗೂ ಪರಿಚಯವೇ ಇಲ್ಲ. ಹತ್ಯೆ ಮಾಡಲೆಂದೇ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದ ಮೂವರು ಸ್ನೇಹಿತರನ್ನು ಸಚಿನ್  ಕರೆತಂದಿದ್ದ. ಪಾರ್ಟಿಗಾಗಿ ಜಮೀನಿನಲ್ಲಿ ಹೋಗಿ ಕುಳಿತಾಗ ಸ್ನ್ಯಾಕ್ಸ್ ತರಲು ಗಿರೀಶನ ಚಾಲಕನಿಗೆ ಸಚಿನ್  ಹೇಳಿ ಕಳುಹಿಸಿದ್ದ. ಚಾಲಕ ಪ್ರಕಾಶ ಸ್ನ್ಯಾಕ್ಸ್ ತೆಗೆದುಕೊಂಡು ವಾಪಾಸ್ ಅದೇ ಸ್ಥಳಕ್ಕೆ ಬಂದಾಗ ಅಲ್ಲಿ ಯಾರ  ಸುಳಿವು  ಕೂಡ ಇರಲಿಲ್ಲ.

ಕಲಬುರಗಿ: ಸಂಸದ ಉಮೇಶ್ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ

ಹೀಗಾಗಿ ಚಾಲಕ ಗಿರೀಶನಿಗೆ ಕರೆ ಮಾಡಿದಾಗ ಬೇರೆ ಹೊಲಕ್ಕೆ ಬಂದಿದ್ದಿವಿ ಇಲ್ಲಿಗೆ ಬಾ ಎಂದು ಸೂಚನೆ ನೀಡಿದ್ದ. ಆ ಸ್ಥಳಕ್ಕೆ ಚಾಲಕ ಹೋಗಿ ತಲುಪುವುದರೊಳಗೆ ಯುವಕರು ಗಿರೀಶ್ ನ ಹತ್ಯೆ ಮಾಡಿ ಎಲ್ಲಾ ಕೆಲಸ ಮುಗಿಸಿ ಬಿಟ್ಟಿದ್ದರು. 

ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದರು. ಸಚಿನ್ ನನ್ನು ನಂಬಿ ಇನ್ನುಳಿದ ಮೂವರು ಅಪರಿಚತರೊಂದಿಗೆ ಪಾರ್ಟಿಗೆ ತೆರಳಿದ  ಗಿರೀಶ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ.

ಗಿರೀಶ ಚಕ್ರ ಜಿಲ್ಲಾ ಪಂಚಾಯತ್‌ ಚುನಾವಣೆ ಸ್ಪರ್ಧೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದ. ಕೊಲೆಗೆ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ಇದುವರೆಗೂ ಸಚಿನ್ ಹಾಗೂ ಇತರೇ ಮೂವರು ಹುಡುಗರ ಬಗ್ಗೆ ಒಂದಿಂಚು ಸುಳಿವು ಸಿಕ್ಕಿಲ್ಲ.

click me!