ಬಾಣಸವಾಡಿಯಲ್ಲಿ ಹವಾ ಇಡೋ ವಿಚಾರಕ್ಕೆ ರೌಡಿಶೀಟರ್ ಕೇರಂ ದಿನೇಶ್ ಕೊಲೆಗೈದ ಸ್ಪೀಡ್ ದಿಲೀಪ್ ಗ್ಯಾಂಗ್

By Sathish Kumar KHFirst Published Mar 27, 2024, 8:26 PM IST
Highlights

ಬೆಂಗಳೂರಿನ ಬಾಣಸವಾಡಿ ಏರಿಯಾದಲ್ಲಿ ಹವಾ ಮೆಂಟೇನ್‌ ಮಾಡುವ ವಿಚಾರಕ್ಕೆ ರೌಡಿಶೀಟರ್ ಕೇರಂ ದಿನೇಶ್‌ನನ್ನು, ಮತ್ತೊಬ್ಬ ರೌಡಿ ಸ್ಪೀಡ್‌ ದಿಲೀಪನ ಗ್ಯಾಂಗ್‌ನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

ಬೆಂಗಳೂರು (ಮಾ.27): ರಾಜ್ಯ ರಾಜಧಾನಿಯಲ್ಲಿ ಲಾಂಗು- ಮಚ್ಚು ಕೇವಲ ಸಿನಿಮಾಕ್ಕಷ್ಟೇ ಸೀಮಿತವಾಗಿ ನೋಡಿದ ನಮಗೆ ಈಗಲೂ ರೌಡಿಗಳಿದ್ದಾರೆ ಎಂಬ ಅರಿವೇ ಇರುವುದಿಲ್ಲ. ಆದರೆ, ಬಾಣಸವಾಡಿಯಲ್ಲಿ ಹವಾ ಮೆಂಟೇನ್‌ ಮಾಡುವುದಕ್ಕೆಂದು ಹೊಡೆದಾಡಿಕೊಳ್ಳುತ್ತಿದ್ದ ರೌಡಿ ಗ್ಯಾಂಗ್‌ಗಳ ಪೈಕಿ ರೌಡಿಶೀಟರ್ ಕೇರಂ ದಿನೇಶ್‌ನನ್ನು ವಿರೋಧಿ ಬಣ ಸ್ಪೀಡ್ ದಿಲೀಪ್ ಗ್ಯಾಂಗ್‌ನಿಂದ ಕಮ್ಮನಹಳ್ಳಿ ಓಯೋ ರೂಮಿನಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

ಬೆಂಗಳೂರಿನ ಬಾಣಸವಾಡಿ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿ ಓಯೋ ರೂಮಿನಲ್ಲಿ ಮಧ್ಯಾಹ್ನದ ವೇಳೆ ಘಟನೆ ನಡೆದಿದೆ. ದಿನೇಶ್ @ ಕೇರಂ ದಿನೇಶ್ (31) ಕೊಲೆಯಾದ ರೌಡಿಶೀಟರ್ ಆಗಿದ್ದಾನೆ. ರೌಡಿಶೀಟರ್ ಕೇರಂ ದಿನೇಶ್‌ನನ್ನು 7 ಮಂದಿಯ ಗ್ಯಾಂಗ್‌ನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬಾಣಸವಾಡಿ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ನಂತರ, ಕೊಲೆಯಾದ ರೌಡಿಶೀಟರ್‌ನ ಜೊತೆಗೆ ಬಂದಿದ್ದವರೇ ಆತನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ಸಿಕ್ಸ್‌ ಪ್ಯಾಕ್‌ ಗೆಳೆಯನ 'ಮೈನಾ' ಲವ್ ಸ್ಟೋರಿ; ವಿಶೇಷ ಚೇತನ ಹುಡುಗಿಗೆ 56 ಲಕ್ಷ ರೂ. ಪಂಗನಾಮ

ಬಾಣಸವಾಡಿ ಏರಿಯಾದಲ್ಲಿ ಹವಾ ಮೆಂಟೇನ್ ಮಾಡುವ ವಿಚಾರದಲ್ಲಿ ಕೊಲೆಯಾದ ರೌಡಿಶೀಟರ್ ಕೇರಂ ದಿನೇಶ್ ಹಾಗೂ ದಿಲೀಪ್‌ @ ಸ್ಪೀಡ್ ದಿಲೀಪ್ ಗ್ಯಾಂಗ್‌ ನಡುವೆ ಆಗಿಂದಾಗ್ಗೆ ಮಾರಾಮಾರಿ ನಡೆಯುತ್ತಿತ್ತು. ಇನ್ನು ಪೊಲೀಸರು ಕೂಡ ದಿಲೀಪ್ ಹಾಗೂ ದಿನೇಶ್ ನಡುವೆ ಗ್ಯಾಂಗ್ ವಾರ್ ನಡೆಸದೇ ಸೈಲೆಂಟ್‌ ಆಗಿರುವಂತೆ ಸೂಚನೆಯನ್ನೂ ನೀಡಲಾಗಿತ್ತು. ಆದರೆ, ಏರಿಯಾದಲ್ಲಿ ಹಿಡಿತ ಸಾಧಿಸಲು ಇಬ್ಬರು ಟೀಂ ಕಟ್ಟಿದ್ದರು. ಆದರೆ, ಕೇರಂ ದಿನೇಶನ ಜೊತೆಗಿದ್ದ ಹಳೆಯ ಸ್ನೇಹಿತರು, ಸ್ಪೀಡ್‌ ದಿಲೀಪನ ಗ್ಯಾಂಗ್‌ಗೆ ಸೇರಿದ್ದರು. ಆದರೆ, ಈ ಬಗ್ಗೆ ಮಾಹಿತಿ ಇಲ್ಲದೇ ತನ್ನ ಸ್ನೇಹಿತರೆಂದು ಜೊತೆಗೆ ಕರೆದುಕೊಂಡು ಹೋಗಿದ್ದ ಕೇರಂ ದಿನೇಶನ ಕೊಲೆಗೆ ಸ್ಕೆಚ್ ಹಾಕಿದ್ದರು. ತಮ್ಮ ಯೋಜನೆಯಂತೆ ಬುಧವಾರ ಮಧ್ಯಾಹ್ನ ಆತನ ಜೊತೆಗಿದ್ದ ಸ್ನೇಹಿತರೇ ಲಾಂಗು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿ ಆಗಿದ್ದಾರೆ.

ಇನ್ನು ರೌಡಿಶೀಟರ್ ದಿನೇಶ್‌ನ ಜೊತೆಗಿದ್ದ ಸ್ನೇಹಿತರು ಓಯೋ ರೂಮಿಗೆ ಕೊಡಲು ಕ್ಯಾಶ್ ಹಣವಿಲ್ಲವೆಂದು ಎಟಿಎಂ ಕಾರ್ಡ್ ಕೊಡುವ ಬಗ್ಗೆ ರಿಸೆಪ್ಷನಿಷ್ಟ್ ಜೊತೆ  ಮಾತು ಕತೆ ನಡೆಸುತ್ತಿದ್ದರು. ಈ ವೇಳೆ ಓಯೊ ಲಾಡ್ಜ್‌ನ ಸೋಫಾದಲ್ಲಿ ದಿನೇಶ್ ಕೂತಿದ್ದನು. ಆಗ ಗಲಾಟೆ ಮಾಡುತ್ತಿದ್ದ ಸ್ನೇಹಿತರು ಏಕಾಏಕಿ ಮಚ್ಚು ಲಾಂಗುಗಳಿಂದ ದಿನೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಕೇವಲ 3 ನಿಮಿಷದಲ್ಲಿ ಕೊಂದು ಪರಾರಿಯಾಗಿರುವ ಘಟನೆ ನಡೆದಿದೆ.

ಬಿಬಿಎಂಪಿ ಚೀಫ್ ಇಂಜಿನಿಯರ್ ಮನೆ ಸೇರಿ ಏಕಕಾಲಕ್ಕೆ ರಾಜ್ಯದ 60 ಕಡೆ ಲೋಕಾಯುಕ್ತ ದಾಳಿ!

ಇನ್ನು ಕೊಲೆಯಾದ ರೌಡಿಶೀಟರ್ ದಿನೇಶ್ ಡಿ.ಜೆ.ಹಳ್ಳಿಯ ಆನಂದಪುರ ನಿವಾಸಿಯಾಗಿದ್ದನು. ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್‌ ಠಾಣೆ, ಡಿ.ಜೆ. ಹಳ್ಳಿ ಪೊಲೀಸ್‌ ಠಾಣೆಗಳಲ್ಲಿ ದಿನೇಶ್‌ನ ವಿರುದ್ದ ರೌಡಿ ಶೀಟ್ ಇತ್ತು. ಈತನ ಸಹಚರರೇ ಹಳೆ ದ್ವೇಷದಿಂದ  ಕೊಲೆ ಮಾಡಿದ್ದಾರೆ. ಇನ್ನು ಏರಿಯಾದಲ್ಲಿ ಹವಾ ಮೆಂಟೇನ್‌ ಮಾಡುವುದಕ್ಕೆ ಮುಂದಾಗಿ, ಬರ್ಬರವಾಗಿ ಜೀವವನ್ನೇ ಕಳೆದುಕೊಂಡು ಹೆಣವಾಗಿ ಮಲಗಿದ್ದಾನೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ವೇಳೆ ಗಲಾಟೆ ಮಾಡದಂತೆ ಎಲ್ಲ ರೌಡಿಶೀಟರ್‌ಗಳಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ಘಟನೆ ನಡೆದಿರುವುದು ಪೊಲೀಸರಿಗೆ ತಲೆ ನೋವಾಗಿದೆ.

click me!