ಬೆಂಗಳೂರಿನಲ್ಲಿ ಶ್ರದ್ಧಾ ಮಾದರಿ ಕೇಸ್‌?: ಯುವತಿಯನ್ನು ಕೊಂದು 30ಕ್ಕೂ ಅಧಿಕ ಪೀಸ್‌ ಮಾಡಿ ಫ್ರಿಜ್‌ನಲ್ಲಿಟ್ಟ ಹಂತಕ!

By Santosh NaikFirst Published Sep 21, 2024, 4:25 PM IST
Highlights

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಯುವತಿಯನ್ನು ಕೊಂದು ಆಕೆಯ ದೇಹವನ್ನು 30ಕ್ಕೂ ಹೆಚ್ಚು ಪೀಸ್‌ಗಳನ್ನಾಗಿ ಮಾಡಿ ಫ್ರಿಜ್‌ನಲ್ಲಿ ಇಡಲಾಗಿದೆ. 10 ರಿಂದ 15 ದಿನಗಳ ಹಿಂದೆ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪ್ರೀತಿಯ ವಿಚಾರದಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬೆಂಗಳೂರು (ಸೆ.21): ದೆಹಲಿಯಲ್ಲಿ ಶ್ರದ್ಧಾ ವಾಕರ್‌ ಎನ್ನುವ ಹುಡುಗಿಯನ್ನು ಕೊಂದು ಆಕೆಯನ್ನು 36 ಪೀಸ್‌ಗಳನ್ನಾಗಿ ಮಾಡಿ ಮೆಹ್ರೌಲಿ ಅರಣ್ಯದಲ್ಲಿ ಒಂದೊಂದೆ ಪೀಸ್‌ಅನ್ನು ಎಸೆದ ದಾರುಣ ಘಟನೆ 2022ರಲ್ಲಿ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಈಗ ಬೆಂಗಳೂರಿನಲ್ಲಿಯೂ ಅಂಥದ್ದೇ ಘಟನೆ ನಡೆದಿದೆ. ಬೆಂಗಳೂರಿನ ಮಲ್ಲೇಶ್ವರದ ವೈಯಾಲಿಕಾವಲ್ ಠಾಣಾವ್ಯಾಪ್ತಿಯ ವೀರಣ್ಣ ಆಶ್ರಮ ಬಳಿ ಘಟನೆ ನಡೆದಿದೆ. 25 ರಿಂದ 26 ವರ್ಷ ವಯಸ್ಸಿನ ಯುವತಿಯನ್ನು ಕೊಲೆ ಮಾಡಿದ್ದು, ಆಕೆಯ ದೇಹವನ್ನು 30ಕ್ಕೂ ಅಧಿಕ ಪೀಸ್‌ ಮಾಡಿ ಫ್ರಿಜ್‌ನಲ್ಲಿ ಇಡಲಾಗಿದೆ. 10 ರಿಂದ 15 ದಿನಗಳ ಹಿಂದೆ ಕೊಲೆ ಮಾಡಿ ಪೀಸ್ ಪೀಸ್ ಮಾಡಿ ಫ್ರೀಜ್  ಒಳಗೆ ಇಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ವೈಯಾಲಿಕಾವಲ್ ಹಾಗೂ ಶೇಷಾದ್ರಿಪುರಂ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ವೀರಣ್ಣ ಆಶ್ರಮ ಬಳಿಯ ಮೂರು ಅಂತಸ್ತಿನ ಮನೆಯೊಂದರ ಮೊದಲನೇ ಫ್ಲೋರ್‌ನಲ್ಲಿ ಈ ಘಟನೆ ನಡೆದಿದೆ. ಪ್ರೀತಿ ವಿಚಾರಕ್ಕೆ ಕೊಲೆ ನಡೆದಿರಬಹುದು ಎನ್ನುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆಯ ಮಾಹಿತಿ (bengaluru vyalikaval Murder Update):  ಸೆಪ್ಟೆಂಬರ್ ಮೊದಲ ವಾರದಲ್ಲಿ ಕೊಲೆ ನಡೆದಿರುವ ಶಂಕೆ ಇದೆ. ಕೊಲೆಯಾದ ಮಹಿಳೆಯನ್ನು ಮಹಾಲಕ್ಷ್ಮೀ ಎಂದು ಗೊತ್ತಾಗಿದೆ. ಮಹಿಳೆಗೆ ನಾಲ್ಕು ವರ್ಷದ ಮಗು ಕೂಡ ಇದೆ. ಮಹಿಳೆಯ ಪತಿ ನೆಲಮಂಗಲದಲ್ಲಿ ವಾಸವಾಗಿದ್ದಾನೆ ಎನ್ನಲಾಗಿದ್ದು, ಗಂಡನನ್ನು ಬಿಟ್ಟು ಏಕಾಂಗಿಯಾಗಿ ವೈಯಾಲಿಕಾವಲ್‌ನಲ್ಲಿ ವಾಸವಾಗಿದ್ದಳು ಎನ್ನಲಾಗಿದೆ. ಮಗು ಗಂಡನ ಜೊತೆಯಲ್ಲಿಯೇ ವಾಸವಿತ್ತು ಎನ್ನಲಾಗಿದೆ. ಹಂತಕ ಮೃತದೇಹವನ್ನ 165 ಲೀಟರ್ ಸಿಂಗಲ್ ಡೋರ್ ಫ್ರಿಡ್ಜ್ ನಲ್ಲಿ ಕಟ್‌ ಮಾಡಿ ಇಟ್ಟಿದ್ದ ಎಂದು ಗೊತ್ತಾಗಿದೆ.

ಮೃತ ಯುವತಿಯ ಸಂಬಂಧಿಗಳು ಮನೆಗೆ ಬಂದಾಗ ಕೊಲೆ ನಡೆದಿರುವ ಘಟನೆ ಗೊತ್ತಾಗಿದೆ. ವೈಯಾಲಿಕಾವಲ್‌ನ ವಿನಾಯಕ ನಗರದಲ್ಲಿ ಘಟನೆ ನಡೆದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎರಡು ದಿನಗಳಿಂದ ಮನೆಯ ಸಮೀಪ ವಾಸನೆ ಬರುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಯುವತಿ ಹೊರರಾಜ್ಯದವಳು ಎನ್ನುವ ಪ್ರಾಥಮಿಕ ಮಾಹಿತಿ ಬಂದಿದ್ದು, ಅಕ್ಕಪಕ್ಕದ ಮನೆಯ ಸಿಸಿಟಿವಿ ಫೋಟೇಜ್‌ಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಮೂರು ತಿಂಗಳ ಹಿಂದೆ ಯುವತಿ ಈ ಮನೆಗೆ ವಾಸಕ್ಕೆ ಬಂದಿದ್ದಳು ಎನ್ನಲಾಗಿದೆ.

Latest Videos

Shraddha Murder Case: ಮೃತದೇಹ ಪೀಸ್‌ ಮಾಡಿದ ಬಳಿಕ ಆಕೆಯ ತಲೆಯನ್ನು ಫ್ರಿಡ್ಜ್‌ನಲ್ಲಿಟ್ಟು ಶ್ರದ್ಧಾ ಮುಖ ನೋಡ್ತಿದ್ದ ಪಾತಕಿ..!

ಕೊಲೆಯಾದಂತಹ ಯುವತಿಯ ತಾಯಿ ಮತ್ತು ಅಕ್ಕ ಮನೆ ಬಳಿ ಬಂದಿದ್ದಾರೆ. ಮನೆ ಬೀಗ ಒಡೆದು ಒಳಹೋದಾಗ ಕೊಲೆಯಾಗಿರೋದು ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಮನೆಯಿಂದ ವಾಸನೆ ಬರ್ತಿತ್ತು  ಹೀಗಾಗಿ ಅದೇ ಬಿಲ್ಡಿಂಗ್ ನ ಅಕ್ಕಪಕ್ಕದವರು ಇವತ್ತು ಸಂಬಧಿಕರಿಗೆ ಕರೆ ಮಾಡಿ ತಿಳಿಸಿದ್ದರು. ಮನೆ ಬೀಗ ತೆಗೆದ ಸಂದರ್ಭದಲ್ಲಿ ಶವದಿಂದ ಹುಳಗಳು ಹೊರಗೆ ಬರುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಪರಿಶೀಲನೆಯಲ್ಲಿ ಮೃತದೇಹವನ್ನ 30 ಕ್ಕೂ ಹೆಚ್ಚು ಪೀಸ್ ಗಳನ್ನಾಗಿ ಮಾಡಲಾಗಿದೆ. ಮೂರು ತಿಂಗಳ ಹಿಂದೆಷ್ಟೇ ಯುವತಿ ಇಲ್ಲಿ ಬಾಡಿಗೆಗೆ ಬಂದಿದ್ದಳು. ಆಕೆಯನ್ನ ಒಬ್ಬ ಯುವಕ ಪಿಕ್ ಅಂಡ್ ಡ್ರಾಪ್ ಮಾಡುತ್ತಿದ್ದ. ಆತನಿಂದಲೇ ಕೊಲೆಯಾಗಿರುವ ಶಂಕೆ ಇದೆ. ಜಯರಾಮ್ ಎಂಬುವವರಿಗೆ ಸೇರಿರುವ ಮನೆ ಇದಾಗಿದೆ.

Delhi Shraddha Murder Case: ಶ್ರದ್ಧಾ ಕೊಂದ ಬಳಿಕ ಮತ್ತೊಬ್ಬಳನ್ನು ಮನೆಗೆ ಕರೆತಂದಿದ್ದ ಅಫ್ತಾಬ್

ಹೆಚ್ಚುವರಿ ಪೊಲೀಸ್‌ ಆಯುಕ್ತ ಸತೀಶ್‌ ಮಾಧ್ಯಮಗಳಿಗೆ ಮಾತನಾಡಿದ್ದು, 'ವೈಯಾಲಿಕಾವಲ್‌ ಪೊಲೀಸ್‌ ಸ್ಟೇಷನ್‌ ಲಿಮಿಟ್‌ನಲ್ಲಿ ಬರುವ 1 ಬಿಎಚ್‌ಕೆ ಮನೆಯಲ್ಲಿ ದೇಹ ಸಿಕ್ಕಿದೆ. ಆಕೆಯ ಮೃತದೇಹವನ್ನ ಸಂಪೂರ್ಣವಾಗಿ ಕಟ್‌ ಮಾಡಿ, ಫ್ರಿಜ್‌ನಲ್ಲಿ ಲೋಡ್‌ ಮಾಡಿದ್ದಾರೆ. ಪ್ರಾಥಮಿಕವಾಗಿ ನೋಡಿದರೆ, ಇದು ಇಂದಾಗಿರುವ ಘಟನೆಯಲ್ಲಿ 4-5 ದಿನಗಳ ಹಿಂದೆ ಆಗಿರುವ ಸಾಧ್ಯತೆ ಇದೆ. ಸ್ಥಳಕ್ಕೆ ಸೋಕೋ ಟೀಮ್‌ ಬಂದಿದೆ, ಶ್ವಾನದಳ ಹಾಗೂ ಎಫ್‌ಎಸ್‌ಎಲ್‌ ಟೀಮ್‌ ಕೂಡ ಆಗಮಿಸಿದೆ. ಉಳಿದ ತನಿಖೆಗಳು ನಡೆಯುತ್ತಿದೆ. ಮೃತರ ಗುರುತು ಈಗಾಗಲೇ ಪತ್ತೆಯಾಗಿದೆ. ಅದರ ಮಾಹಿತಿಯನ್ನ ನೀಡಲಿದ್ದೇವೆ. ಪೊಲೀಸ್‌ನವರು ಬಂದು ಬರೀ 20 ನಿಮಿಷವಾಗಿದೆ. ಎಲ್ಲಾ ಡೀಟೇಲ್ಸ್‌ಅನ್ನು ನೀಡಲಿದ್ದೇವೆ. ಯುವತಿ ಬೇರೆ ರಾಜ್ಯದವರೇ ಆಗಿದ್ದರೂ, ಇಲ್ಲಿಯೇ ಸೆಟಲ್‌ ಆಗಿದ್ದಾರೆ' ಎಂದು ತಿಳಿಸಿದ್ದಾರೆ.

 

ಈ ಸುದ್ದಿಗೆ ಕುರಿತಾದ ಮಾಹಿತಿಗಳು ಅಪ್‌ಡೇಟ್‌ ಆಗುತ್ತಿವೆ..

ಶ್ರದ್ಧಾ ವಾಕರ್‌ ಕುರಿತಾದ ಕೇಸ್‌ನ ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

click me!