ಕನ್ನಡಿಗರಿಗೆ 8 ಲಕ್ಷ ಉದ್ಯೋಗ ಕೈತಪ್ಪುತ್ತಿವೆ: ಟಿ.ಎಸ್‌. ನಾಗಾಭರಣ

By Kannadaprabha NewsFirst Published Sep 9, 2022, 4:00 AM IST
Highlights

ಬಹುಭಾಷಾ ಭಾರತದಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ ಸಿಗುತ್ತಿಲ್ಲ. ಸಂವಿಧಾನದಡಿ ಭಾಷಾವಾರು ರಾಜ್ಯಗಳ ರಚನೆಯಾದ ನಂತರ ಭಾಷೆಗೆ ಸಂಬಂಧ ಪಟ್ಟಂತೆ ಒಂದೂ ತಿದ್ದುಪಡಿ ಆಗಿಲ್ಲ: ನಾಗಾಭರಣ

ಶಿವಮೊಗ್ಗ(ಸೆ.09):  ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಸಂಸ್ಥೆಗಳು ನಡೆಸುವ ಪರೀಕ್ಷೆಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಇರುವುದರಿಂದ ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಯುವಕರಿಗೆ ಎಂಟು ಲಕ್ಷ ಉದ್ಯೋಗಗಳು ಕೈತಪ್ಪುತ್ತಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಟಿ.ಎಸ್‌. ನಾಗಾಭರಣ ಕಳವಳ ವ್ಯಕ್ತಪಡಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಒಕ್ಕೂಟ ಸರ್ಕಾರದ ಭಾಗವಾದ ಸಂಸ್ಥೆಗಳು ನಡೆಸುವ ಬ್ಯಾಂಕಿಂಗ್‌, ಎಸ್‌.ಎಸ್‌.ಸಿ., ಯು.ಪಿ.ಎಸ್‌.ಸಿ., ನೀಟ್‌ ಸೇರಿದಂತೆ ಹತ್ತಾರು ಪರೀಕ್ಷೆಗಳು ಕನ್ನಡ ಅಥವಾ ಮಾತೃಭಾಷೆಯಲ್ಲಿ ನಡೆಯುತ್ತಿಲ್ಲ. ಹಿಂದಿಯೇತರ ರಾಜ್ಯಗಳ ಯುವಕರಿಗೆ ಇದು ಲಕ್ಷಾಂತರ ಉದ್ಯೋಗಗಳಿಗೆ ಸ್ಪರ್ಧಿಸುವ, ಯಶಸ್ವಿಯಾಗುವ ಅವಕಾಶವನ್ನೇ ಕಸಿಯುತ್ತಿದೆ. ಮಾತೃಭಾಷೆಯ ಯತೇಚ್ಛ ಬಳಕೆ, ಅಭಿಮಾನ, ಹೋರಾಟ ಹಾಗೂ ಜ್ಞಾನಮೂಲಗಳ ಸೃಜಿಸುವ ಮೂಲಕ ಮಾತ್ರವೇ ಇದನ್ನು ಪರಿಹರಿಸಬಹುದು ಎಂದು ತಿಳಿಸಿದರು.

ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಿ: ನಾಗಾಭರಣ

ಬಹುಭಾಷಾ ಭಾರತದಲ್ಲಿ ಎಲ್ಲ ಭಾಷೆಗಳಿಗೂ ಸಮಾನ ಅವಕಾಶ ಸಿಗುತ್ತಿಲ್ಲ. ಸಂವಿಧಾನದಡಿ ಭಾಷಾವಾರು ರಾಜ್ಯಗಳ ರಚನೆಯಾದ ನಂತರ ಭಾಷೆಗೆ ಸಂಬಂಧ ಪಟ್ಟಂತೆ ಒಂದೂ ತಿದ್ದುಪಡಿ ಆಗಿಲ್ಲ. ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ 22 ಭಾಷೆಗಳಲ್ಲಿಯೂ ಪರೀಕ್ಷೆಗಳು, ಆಡಳಿತದ ಸುತ್ತೋಲೆಗಳು, ಆದೇಶಗಳು, ನಿಯಮಾವಳಿಗಳು, ಮಾಹಿತಿಕೋಶಗಳು ಪ್ರಕಟವಾಗುವಂತೆ ಆಭಿಯಾನ ಮಾಡಬೇಕಿದೆ. ಅದನ್ನು ಪ್ರಚುರಪಡಿಸಲು ಮೊದಲು ಬೇರಿನಲ್ಲಿ ಕನ್ನಡ ಭಾ‚ಷೆಯನ್ನು ದೃಢಗೊಳಿಸೋಣ ಮುಂದುವರಿದು ಕೇಂದ್ರದಲ್ಲಿ ಕನ್ನಡದಲ್ಲಿ ಸೇವೆ, ಆಡಳಿತ ನೀಡಲು ಒತ್ತಾಯಿಸೋಣ ಎಂದು ಹೇಳಿದರು.

ಕುಲಪತಿ ಪೊ›. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಯುರೋಪ್‌ ಖಂಡದ ದೇಶಗಳ ವಿವಿಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ಇಂಗ್ಲಿಷ್‌ ಭಾಷೆ ಬರುವುದಿಲ್ಲ. ಫ್ರೆಂಚ್‌, ಸ್ಪಾನಿಷ್‌ ಸೇರಿದಂತೆ ಅವರೆಲ್ಲರೂ ತಮ್ಮ ಮಾತೃಭಾಷೆಗಳಲ್ಲಿ ಅಧ್ಯಯನ, ಸಂಶೋಧನೆ, ಬರಹಗಳನ್ನು ಪ್ರಕಟಿಸುತ್ತಾರೆ, ಮಾತನಾಡುತ್ತಾರೆ. ಮಾತೃಭಾಷೆ ಬಳಸಲು ನಮಗೆ ಕೀಳರಿಮೆ ಬೇಡ, ಕನ್ನಡ ಭಾಷೆಯ ಸಾಹಿತ್ಯದ ಅಗಾಧ ಬೇರುಗಳು ಶಿವಮೊಗ್ಗದಲ್ಲಿವೆ. ಇಲ್ಲಿನ ವಿವಿಯಾದ ನಮ್ಮಲ್ಲಿ ಕನ್ನಡ ಬಳಸಲು, ಬೆಳೆಸಲು ಮತ್ತಷ್ಟುಸಕರಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಹೋರಾಟಗಳಲ್ಲಿ ಭಾಗವಹಿಸಲು ಸ್ಯಾಂಡಲ್‌ವುಡ್‌ನಲ್ಲಿ ನಾಯಕತ್ವ ಕೊರತೆ ಇದೆಯಾ? ಟಿ.ಎಸ್.ನಾಗಾಭರಣ ಹೇಳಿದ್ದೇನು?

ಸಭೆಯಲ್ಲಿ ವಿವಿಯ ಕುಲಪತಿ ಪೊ›. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ಪರೀಕ್ಷಾಂಗ ಕುಲಸಚಿವ ಪೊ›. ನವೀನ್‌ ಕುಮಾರ್‌, ಪ್ರಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಹೇಶ್‌, ರಕ್ಷಾ, ಕನ್ನಡ ಸಂಸ್ಕೃತಿ ಇಲಾಖೆಯ ಉಮೇಶ್‌, ಹಣಕಾಸು ಅಧಿಕಾರಿ ರಾಮಕೃಷ್ಣ ಎಸ್‌., ಪೊ›. ಜಿ. ಪ್ರಶಾಂತ್‌ನಾಯ್‌್ಕ, ಸೇರಿದಂತೆ ವಿವಿಯ ಎಲ್ಲ ವಿಭಾಗಗಳ ಅಧ್ಯಕ್ಷರು, ಹಿರಿಯ ಪ್ರಾಧ್ಯಾಪಕರುಗಳು, ಉನ್ನತ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ರಾಜ್ಯದೊಳಗಿನ ಪತ್ರಗಳಿಗೆ ಕನ್ನಡದ ಮೊಹರುಗಳು, ಲೆಟರ್‌ ಹೆಡ್‌ಗಳನ್ನು ಬಳಸಬೇಕು. ಆಡಳಿತದಲ್ಲಿ ಕನ್ನಡ ಘೋಷಣೆಗಿಂತ ಶಿಕ್ಷಣದಲ್ಲಿ ಕನ್ನಡ ಬಳಕೆ ಅತ್ಯಧಿಕವಾಗಲಿ. ಅಗತ್ಯವಿರುವೆಡೆ ಇಂಗ್ಲಿಷ್‌ನ ಜೊತೆಗೆ ಪ್ರವೇಶಾತಿ ಪ್ರಕ್ರಿಯೆಗಳಲ್ಲಿ, ಪ್ರಶ್ನೆಪತ್ರಿಕೆಗಳಲ್ಲಿ, ಪಠ್ಯಕ್ರಮ ರಚನೆಯಲ್ಲಿ, ಮೌಲ್ಯಮಾಪನ, ಅಂಕಪಟ್ಟಿಗಳ ವಿತರಣೆಯಲ್ಲಿ, ವೆಬ್‌ಸೈಟ್‌, ಆಹ್ವಾನ ಪತ್ರಿಕೆಗಳು ಸೇರಿದಂತೆ ಎಲ್ಲಡೆಯೂ ಕನ್ನಡ ಬಳಸಿ ಅಂತ ಡಾ. ಟಿ.ಎಸ್‌.ನಾಗಾಭರಣ ತಿಳಿಸಿದ್ದಾರೆ. 
 

click me!