ಬ್ಯಾಂಕ್ ಉದ್ಯೋಗಿಗಳು ಗ್ರಾಹಕರೊಂದಿಗೆ ಕನ್ನಡದಲ್ಲೇ ಮಾತನಾಡ್ಬೇಕು; ಶೀಘ್ರದಲ್ಲಿ ಜಾರಿಯಾಗಲಿದೆ ನಿಯಮ

By Suvarna NewsFirst Published Sep 8, 2023, 6:04 PM IST
Highlights

ಬ್ಯಾಂಕ್ ಗಳಲ್ಲಿ ಬೇರೆ ರಾಜ್ಯದವರೇ ತುಂಬಿ ಹೋಗಿದ್ದು,ಕನ್ನಡದಲ್ಲಿ ವ್ಯವಹರಿಸುತ್ತಿಲ್ಲ ಎಂಬ ಗ್ರಾಹಕರ ಆರೋಪ ಇಂದು ನಿನ್ನೆಯದ್ದಲ್ಲ. ಹೀಗಿರುವಾಗ ಕರ್ನಾಟಕದಲ್ಲಿ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರ ಜೊತೆಗೆ ಕನ್ನಡದಲ್ಲೇ ವ್ಯವಹರಿಸಬೇಕು ಎಂಬ ನಿಯಮ ಶೀಘ್ರದಲ್ಲೇ ಜಾರಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 

ಬೆಂಗಳೂರು (ಸೆ.8): ಕರ್ನಾಟಕದಲ್ಲಿ ಬ್ಯಾಂಕ್ ಉದ್ಯೋಗಿಗಳು ಕನ್ನಡ ಕಲಿಯಬೇಕು ಹಾಗೂ ಗ್ರಾಹಕರ ಜೊತೆಗೆ ಕನ್ನಡದಲ್ಲಿ ವ್ಯವಹರಿಸಬೇಕು ಎಂಬ ನಿಯಮ ಶೀಘ್ರದಲ್ಲೇ  ಜಾರಿಯಾಗಲಿದೆ. ಪರಭಾಷೆಯ ಬ್ಯಾಂಕ್ ಉದ್ಯೋಗಿಗಳು ಹಾಗೂ ಗ್ರಾಹಕರ ನಡುವೆ ಭಾಷೆಗೆ ಸಂಬಂಧಿಸಿ ವಾಗ್ವಾದಗಳು ನಡೆಯುತ್ತಿರುವ ಮಧ್ಯದಲ್ಲಿ ಇಂಥದೊಂದು ನಿಯಮ ಜಾರಿಯಾಗುವ ಸೂಚನೆ ಸಿಕ್ಕಿದೆ. ಈ ಸಂಬಂಧ ಈ ಹಿಂದಿನ ಬಿಜೆಪಿ ಸರ್ಕಾರ ಈ ವರ್ಷದ ಮಾರ್ಚ್ ನಲ್ಲಿ ವಿಧಾನಸಭೆಯಲ್ಲಿ ಕಾನೂನುವೊಂದಕ್ಕೆ ಅನುಮೋದನೆ ನೀಡಿತ್ತು. ಇದು ಇನ್ನಷ್ಟೇ ಅನುಷ್ಠಾನಗೊಳ್ಳಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಕಾರ್ಯದರ್ಶಿ ಸಂತೋಷ್ ಹಂಗಲ್ ಮಾಹಿತಿ ನೀಡಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ ಪ್ರಕಾರ 100ಕ್ಕಿಂತ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಬ್ಯಾಂಕ್ ಗಳು ಹಾಗೂ ಖಾಸಗಿ ಕೈಗಾರಿಕೆಗಳು ತಮ್ಮ ಗ್ರಾಹಕರ ಜೊತೆಗೆ ಸುಲಭವಾಗಿ ಸಂಭಾಷಣೆ ನಡೆಸಲು ನೆರವಾಗುವಂತೆ 'ಕನ್ನಡ ಘಟಕಗಳನ್ನು' ಸ್ಥಾಪಿಸಬೇಕು. ಹಾಗೆಯೇ ಉದ್ಯೋಗಿಗಳಿಗೆ ಕನ್ನಡ ಕಲಿಸಲು 'ಕನ್ನಡ ಕಲಿಕಾ ಘಟಕ' ಸ್ಥಾಪಿಸಬೇಕು. ಇನ್ನು ಕಾಯ್ದೆ ಪ್ರಕಾರ ಕಲಿಕಾ ಸಿಬ್ಬಂದಿ ಹಾಗೂ ಅಧ್ಯಯನ ಸಾಮಗ್ರಿಗಳ ವೆಚ್ಚವನ್ನು ಬ್ಯಾಂಕ್ ನೋಡಿಕೊಳ್ಳಬೇಕು.

ಇನ್ನು ಈ ಕಾಯ್ದೆ ಬಗ್ಗೆ ಕೂಡ ಕೆಲವರು ಅಸಮಾಧಾನ ಹೊಂದಿದ್ದಾರೆ. ಈ ಕಾಯ್ದೆಯೊಂದೇ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಏಕೆಂದರೆ ಇದು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಅನ್ವಯಿಸೋದಿಲ್ಲ ಎನ್ನುತ್ತಾರೆ ಕೆಡಿಎ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು. 'ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಬೇಕೆಂದರೆ ಸಂಸತ್ತಿನಲ್ಲಿ ಈ ಸಂಬಂಧ ಸ್ಪಷ್ಟವಾದ ನಿಯಮಗಳು ರೂಪುಗೊಳ್ಳಬೇಕು. ಅಲ್ಲದೆ, ದಂಡ ಆಗೂ ಅನುಷ್ಠಾನಕ್ಕೆ ಸಮಯಾವಧಿ ಕೂಡ ನಿಗದಿಪಡಿಸಬೇಕು' ಎನ್ಉತ್ತಾರೆ ಆಮ್ ಆದ್ಮಿ ಪಕ್ದ (ಎಎಪಿ) ರಾಜ್ಯಾಧ್ಯಕ್ಷರು.

ಸಾಲದ ಮೇಲೆ ಬ್ಯಾಂಕ್ ದಂಡ ರೂಪದಲ್ಲಿ ಹೆಚ್ಚುವರಿ ಬಡ್ಡಿ ವಿಧಿಸುವಂತಿಲ್ಲ; ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ RBI

ಬ್ಯಾಂಕ್ ಉದ್ಯೋಗಿಗಳು ಕನ್ನಡ ಕಲಿಯಬೇಕು ಎಂಬುದು ಕೆಡಿಎ ದೀರ್ಘಕಾಲದ ಬೇಡಿಕೆಯಾಗಿದೆ. ಭಾಷಾ ತೊಡಕಿನಿಂದ ಗ್ರಾಮೀಣ ಭಾಗದ ಗ್ರಾಹಕರಿಗೆ ಬ್ಯಾಂಕ್ ಜೊತೆಗೆ ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಉದ್ಯೋಗಿಗಳು ಹಾಗೂ ಗ್ರಾಹಕರ ನಡುವೆ ಅನೇಕ ಬಾರಿ ಇದು ವಾಗ್ವಾದಕ್ಕೂ ಕಾರಣವಾಗುತ್ತಿದೆ. ಏಕೆಂದರೆ ಭಾಷಾ ತೊಡಕಿನಿಂದ ಇಬ್ಬರಿಗೂ ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಇನ್ನು ಗ್ರಾಹಕರಿಗೆ ಚಲನ್, ಅರ್ಜಿ ನಮೂನೆಗಳು ಹಾಗೂ ಬ್ಯಾಂಕಿಂಗ್ ದಾಖಲೆಗಳು ಯಾವುವೂ ಕನ್ನಡದಲ್ಲಿರದ ಕಾರಣ ಅರ್ಥೈಸಿಕೊಳ್ಳಲು ಕೂಡ ಕಷ್ಟವಾಗುತ್ತದೆ. 

ಈ ವರ್ಷದ ನವೆಂಬರ್ 1ಕ್ಕೆ ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷಗಳು ಪೂರ್ಣಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ, ಹೊರರಾಜ್ಯದವರು ಹಾಗೂ ಹೊರರಾಷ್ಟ್ರದ ನಾಗರಿಕರಿಗೆ ಕನ್ನಡ ಕಲಿಕಾ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯಿರೋದಾಗಿ ತಿಳಿಸಿದೆ.

ಗ್ರಾಹಕರ ಸೇವೆಗೆ ವೀಡಿಯೋ ಕರೆ: ಈ ಬ್ಯಾಂಕಲ್ಲಿ ಇನ್ಮುಂದೆ ದಿನದ 24 ಗಂಟೆ/ 365 ದಿನವೂ ಸೇವೆ

ಇನ್ನು ಕನ್ನಡ ಭಾಷೆ ಅಭಿವೃದ್ಧಿ ವಿಚಾರವಾಗಿ ಎಲ್ಲ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತವೆ ಎಂಬುದು ಹೊಸ ವಿಚಾರವೇನಲ್ಲ. ಎಲ್ಲ ಪಕ್ಷಗಳು ತಾವು ಇತರರಿಗಿಂತ ಹೆಚ್ಚು ಕನ್ನಡಾಭಿಮಾನ ಹೊಂದಿರೋರು ಎಂಬುದನ್ನು ತೋರಿಸಿಕೊಳ್ಳಲು ಆಗಾಗ ಪ್ರಯತ್ನಿಸುತ್ತಲೇ ಇರುತ್ತವೆ. 2017ರಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಭಾಷೆಯಲ್ಲಿ ಬೋರ್ಡ್ ಗಳನ್ನು ಹಾಕಿರುವ ವಿಚಾರವಾಗಿ ದೊಡ್ಡ ಗಲಾಟೆ ಏರ್ಪಟ್ಟಿತ್ತು. ಕನ್ನಡಪರ ಸಂಘಟನೆಗಳು ಇದು ರಾಜ್ಯದ ಮೇಲೆ ಉತ್ತರ ಭಾರತದ ಭಾಷೆಗಳನ್ನು ಹೇರುವ ಪ್ರಯತ್ನ ಎಂದು ಆರೋಪಿಸಿದ್ದವು. ನಂದಿನಿ ಬ್ರ್ಯಾಂಡ್ ವಿಚಾರವಾಗಿರಲಿ, ಸಿಎಪಿಎಫ್ ಸೇರಿದಂತೆ ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಎಂಬ ವಿಚಾರವಾಗಿ ರಾಜಕೀಯ ಪಕ್ಷಗಳು ಒಬ್ಬರ ಮೇಲೆ ಇನ್ನೊಬ್ಬರು ಕೆಸರೆರಚಾಟ ನಡೆಸೋದು ಸಾಮಾನ್ಯವಾಗಿದೆ. 

click me!