ಅಧಿವೇಶನಕ್ಕೆ ಗೈರಾದ ಜೆಡಿಎಸ್ ಶಾಸಕ ಆಸ್ಪತ್ರೆಗೆ ದಾಖಲು
ಅತೃಪ್ತರಂತೆ ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದ ಜೆಡಿಎಸ್ ಶಾಸಕ ನಾರಾಯಣಗೌಡ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದಾಗಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು : ರಾಜ್ಯ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಇದೇ ವೇಳೆ ಅನೇಕ ಅತೃಪ್ತರು ಅಧಿವೇಶನಕ್ಕೆ ಗೈರಾಗಿದ್ದಾರೆ.
ಕಾಂಗ್ರೆಸ್ ಶಾಸಕರೊಂದಿಗೆ ಗೈರಾಗಿರುವ ಮಂಡ್ಯದ ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ನಾರಾಯಣ ಗೌಡ ಅನಾರೋಗ್ಯದ ಕಾರಣದಿಂದ ತಾವು ಅಧಿವೇಶನಕ್ಕೆ ಹಾಜರಾಗಿಲ್ಲ ಎಂದು ಹೇಳಿದ್ದಾರೆ.
ತಮಗೆ ಫುಡ್ ಪಾಯ್ಸನ್ ಆಗಿದ್ದು, ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಮುಂಬೈ ಆಸ್ಪತ್ರೆಯಲ್ಲಿ ತಾವು ಚಿಕಿತ್ಸೆ ಪಡೆದುಕೊಳ್ಳುವುದಾಗಿ ನಾರಾಯಣ ಗೌಡ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಅಲ್ಲದೇ ತಮ್ಮ ಅನಾರೋಗ್ಯದ ವಿಚಾರವನ್ನು ಸ್ಪೀಕರ್ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೂ ತಂದಿರುವುದಾಗಿ ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಅತೃಪ್ತರ ಗುಂಪಿನಲ್ಲಿ ಬಜೆಟ್ ಅಧಿವೇಶನಕ್ಕೆ ಗೈರಾಗಿರುವ ಅವರು ಅನಾರೋಗ್ಯದ ನೆಪ ಹೇಳಿದರಾ ಎನ್ನಲಾಗುತ್ತಿದೆ.