ಸ್ವಿಗ್ಗಿ, ಜೊಮ್ಯಾಟೊ ಮಾದರಿಯಲ್ಲಿ ಕುರಿ ಮಾಂಸವೂ ಮನೆ ಬಾಗಿಲಿಗೆ!
ಸ್ವಿಗ್ಗಿ ಜೊಮ್ಯಾಟೋ ರೀತಿಯಲ್ಲಿ ಮಟನ್ ಅನ್ನು ಮನೆಬಾಗಿಲಿಗೆ ತಲುಪಿಸಲು ಯೋಜನೆ ರೂಪಿಸಲಾಗುತ್ತಿದೆ.
ಬೆಂಗಳೂರು [ಅ.16]: ಆ್ಯಪ್ ಸಹಾಯದೊಂದಿಗೆ ಅತಿ ಶೀಘ್ರದಲ್ಲಿ ಮನೆ ಮನೆಗೆ ಕುರಿ ಮತ್ತು ಮೇಕೆ ಮಾಂಸ ಮಾರಾಟ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಹಕಾರಿ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ ಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ವತಿಯಿಂದ ಬಾಗಲಕೋಟೆ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿ ಶೀಘ್ರದಲ್ಲಿ ಕಸಾಯಿಖಾನೆ ಆರಂಭಿಸಲಾಗುತ್ತಿದ್ದು, ಡಯಲ್ ಫಾರ್ ಮಟನ್ ಎಂಬ ಆ್ಯಪ್ ರೂಪಿಸಿ ಮನೆ-ಮನೆ ಶುದ್ಧ ಮತ್ತು ಗುಣಮಟ್ಟದ ಕುರಿ ಮತ್ತು ಮೇಕೆ ಮಾಂಸ ವಿತರಣೆ ವ್ಯವಸ್ಥೆ ಜಾರಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ಪ್ರಾಯೋಗಿಕವಾಗಿ ಬೆಂಗಳೂರು ನಗರದ ಉತ್ತರ ಭಾಗದಲ್ಲಿ ಮಾಂಸ ವಿತರಣೆ ಮಾಡಲಾಗುತ್ತಿದೆ. ಇದು ಯಶಸ್ವಿಯಾದರೆ ಊಟ, ತಿಂಡಿ ಸರಬರಾಜು ಮಾಡುವ ಸ್ವಿಗ್ಗಿ, ಜೊಮ್ಯಾಟೋ ಮಾದರಿಯಲ್ಲಿ ರಾಜ್ಯಾದ್ಯಂತ ಗ್ರಾಹಕರಿಂದ ಡಯಲ್ ಫಾರ್ ಮಟನ್ ಆ್ಯಪ್ ಮೂಲಕ ಮಾಂಸದ ಬೇಡಿಕೆ ಪಡೆದು ಮನೆಗೆ ಪೂರೈಕೆ ಮಾಡಲಾಗುವುದು.
ಇದಲ್ಲದೆ, ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಮತ್ತು ಕುರಿ ಸಾಕಾಣಿಕೆದಾರರಿಗೆ ಹೆಚ್ಚಿನ ಲಾಭ ದೊರಕಿಸಿ ಕೊಡಬೇಕೆಂಬ ಉದ್ದೇಶದಿಂದ ರಾಜ್ಯದ 24 ಜಿಲ್ಲೆಗಳಲ್ಲಿ ಕುರಿ ಮತ್ತು ಮೇಕೆ ಖರೀದಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ತೂಕ ಆಧಾರಿತವಾಗಿ ಕುರಿ ಮತ್ತು ಮೇಕೆ ಖರೀದಿ ಮಾಡಲಾಗುವುದು ಎಂದು ಹೇಳಿದರು.
ಕುರಿಗಾಹಿಗಳಿಗೆ ಬಂದೂಕು ಕೊಡಿ:
ಇತ್ತಿಚಿನ ದಿನಗಳಲ್ಲಿ ಕುರಿ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕುರಿಗಾಹಿಗಳಿಗೆ ಕುರಿಗಳನ್ನು ಕಾಪಾಡಿಕೊಳ್ಳುವುದಕ್ಕೆ ಮತ್ತು ಆತ್ಮರಕ್ಷಣೆಗೆ ಬಂದೂಕು ಪರವಾನಗಿ ನೀಡುವುದಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಲೋಕೇಶ್ ಗೌಡ ಒತ್ತಾಯಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹೈನುಗಾರಿಕೆಗೆ ಬರುವ ಯುವ ಸಮೂಹಕ್ಕೆ ಪ್ರೋತ್ಸಾಹ ನೀಡುವುದು ಸೇರಿದಂತೆ ಕ್ಷೇತ್ರಕ್ಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲ ಸೌಲಭ್ಯ ನೀಡುವಂತೆ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಿಗೆ ಇತ್ತೀಚೆಗೆ ಮನವಿ ಮಾಡಿದ್ದೇವೆ. ಯುವಕ-ಯುವತಿಯರಿಗೆ ಸರ್ಕಾರ ಷರತ್ತು ವಿಧಿಸದೇ ಪ್ರೋತ್ಸಾಹ ಮತ್ತು ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುವುದು. ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಪದಾಧಿಕಾರಿಗಳನ್ನು ಕುರಿ ಸಾಕಾಣಿಕೆದಾರರನ್ನೇ ನೇಮಕ ಮಾಡಬೇಕು. ದುಬಾರಿ ಬೆಲೆಯ ಕುರಿ ಸೆಮೆನ್ ಬ್ಯಾಂಕ್ ಸ್ಥಾಪಿಸಬೇಕು, ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸುವುದಕ್ಕೆ ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ ಎಂದು ತಿಳಿಸಿದರು.
ಕುರಿಗಾಹಿಗಳಿಗೆ ಬಂದೂಕು ಕೊಡಿ:
ಇತ್ತಿಚಿನ ದಿನಗಳಲ್ಲಿ ಕುರಿ ಕಳವು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕುರಿಗಾಹಿಗಳಿಗೆ ಕುರಿಗಳನ್ನು ಕಾಪಾಡಿಕೊಳ್ಳುವುದಕ್ಕೆ ಮತ್ತು ಆತ್ಮರಕ್ಷಣೆಗೆ ಬಂದೂಕು ಪರವಾನಗಿ ನೀಡುವುದಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಲೋಕೇಶ್ ಗೌಡ ಒತ್ತಾಯಿಸಿದರು.
ಅ.21 ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೇರಳೆಕೆರೆ ಗ್ರಾಮದ ಕುರಿಗಾಹಿ ಹಟ್ಟಿಯಲ್ಲಿ ಸಂಘದ ಪದಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಒಂದು ಇಡೀ ದಿನ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಅಲ್ಲಿನ ಕುರಿ- ಮೇಕೆ ಸಾಕಾಣಿಕೆದಾರರ ಸಮಸ್ಯೆಗಳನ್ನು ತಿಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಎಚ್.ಕೆ. ಕುರಿ ತಮ್ಮಯ್ಯ, ಧನರಾಜ್, ಮಹಾಲಿಂಗಪ್ಪ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.