ಏ.23ಕ್ಕೆ ಚಿತ್ರದುರ್ಗ, ಬೆಂಗಳೂರಲ್ಲಿ ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಏ.23ರಂದು ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಅಂದು ಚಿತ್ರದುರ್ಗ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳಾದ ಬಿ.ಎನ್. ಚಂದ್ರಪ್ಪ ಮತ್ತು ಸೌಮ್ಯಾರೆಡ್ಡಿಯವರ ಪರವಾಗಿ ಮತಯಾಚನೆ ಮಾಡಲಿದ್ದಾರೆ.
ಬೆಂಗಳೂರು (ಏ.20): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಏ.23ರಂದು ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಅಂದು ಚಿತ್ರದುರ್ಗ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳಾದ ಬಿ.ಎನ್. ಚಂದ್ರಪ್ಪ ಮತ್ತು ಸೌಮ್ಯಾರೆಡ್ಡಿಯವರ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಈ ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿಯವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ.
ಬಿಜೆಪಿಯವರೇನು ಜ್ಯೋತಿಷಿಗಳೇ?: ಲೋಕಸಭಾ ಚುನಾವಣೆಯು ನ್ಯಾಯಸಮ್ಮತವಾಗಿ ನಡೆದಿದ್ದೇ ಆದಲ್ಲಿ ಬಿಜೆಪಿಯು 180 ಸ್ಥಾನಗಳಿಗಿಂತ ಅಧಿಕ ಗಳಿಕೆ ಮಾಡುವುದಿಲ್ಲ ಎಂಬುದಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ, ‘ಬಿಜೆಪಿಯು ಚುನಾವಣೆಗೆ ಮೊದಲೇ 400ಕ್ಕಿಂತ ಅಧಿಕ ಸೀಟು ಗೆಲ್ಲುವುದಾಗಿ ಹೇಳಿಕೊಂಡು ತಿರುಗುತ್ತಿದೆ.
ಆದರೆ ಚುನಾವಣೆಗೆ ಮೊದಲೇ ಅಷ್ಟು ಕರಾರುವಕ್ಕಾಗಿ ಎಷ್ಟು ಸ್ಥಾನ ಗೆಲ್ಲುತ್ತೇವೆಂದು ಹೇಳಲು ಅವರೇನು ಜ್ಯೋತಿಷಿಗಳೇ? ಇವಿಎಂಗಳನ್ನು ತಿರುಚದೇ, ನ್ಯಾಯಸಮ್ಮತವಾಗಿ ಲೋಕಸಭಾ ಚುನಾವಣೆ ನಡೆದಿದ್ದೇ ಆದಲ್ಲಿ ಬಿಜೆಪಿ 180 ಸ್ಥಾನಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಗೆಲ್ಲಲಿದೆ’ ಎಂದು ತಿಳಿಸಿದರು. ಇದೇ ವೇಳೆ ಇಂಡಿಯಾ ಕೂಟ ಲೋಕಸಭಾ ಚುನಾವಣೆಯಲ್ಲಿ ಗಳಿಸುವ ಸ್ಥಾನಗಳ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.
ಹುಬ್ಬಳ್ಳಿ ಯುವತಿ ನೇಹಾ ಹಿರೇಮಠ ಹತ್ಯೆ: ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ರಾಜಕೀಯ ಸಂಘರ್ಷ
ಭಾಷಣಕ್ಕೆ ಮರುಳಾಗದೇ ಮತ ಹಾಕಿ: ಜನತೆ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಮರುಳಾಗದೇ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆಗಾಗಿ ಮತ ಚಲಾಯಿಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ನಾಯಕಿ ಪ್ರಿಯಾಂಕಾ ಗಾಂಧಿ ವರ್ದಾ ಹೇಳಿದರು. ಇಲ್ಲಿಯ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಅವರ ಮಾತಿಗೆ ಮರುಳಾಗದೇ, ನಿಮ್ಮ ಸ್ವಂತ ಆಲೋಚನೆಯಿಂದ ನೀವು ನಿಮ್ಮನ್ನು ಪ್ರಶ್ನಿಸಿಕೊಂಡು, ಮೋದಿ ಸರ್ಕಾರದಿಂದ ಈ 10 ವರ್ಷಗಳಲ್ಲಿ ಅಭಿವೃದ್ಧಿ ಆಗಿದಿಯೇ ಎಂಬುದನ್ನು ಅರಿತು ಮತ ಚಲಾಯಿಸಿ ಎಂದರು.