Asianet Suvarna News Asianet Suvarna News

ಸಿಟಿ ರವಿ ಅವರೇ ಮೊದ್ಲು ನೀವು ಸೆಟಲ್‌ ಆಗೋದನ್ನ ಯೋಚಿಸಿ: ಪ್ರಿಯಾಂಕ್‌ ಖರ್ಗೆ ತಿರುಗೇಟು

ಯಡಿಯೂರಪ್ಪ ಹಾಗೂ ಅವರ ಮಗನಿಂದ ಬಿಜೆಪಿಯನ್ನು ಸ್ವಚ್ಛಗೊಳಿಸಲು ಹೋರಾಡುವುದಾಗಿ ಯತ್ನಾಳ ಹಾಗೂ ಈಶ್ವರಪ್ಪ ಹೇಳುತ್ತಿದ್ದಾರೆ. ಅವರನ್ನು ನೋಡಿ, ಅವರಂತೆ ಮಾತನಾಡುವುದನ್ನು ಕಲಿಯಿರಿ. ಮೊದಲೇ ಜನರು ನಿಮ್ಮನ್ನು ಪುಕ್ಕಲ ಎನ್ನುತ್ತಿದ್ದಾರೆ ಎಂದು ಸಿ.ಟಿ.ರವಿಗೆ ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ

Minister Priyank Kharge Slams BJP Leader CT Ravi grg
Author
First Published Apr 30, 2024, 5:54 PM IST

ಕಲಬುರಗಿ(ಏ.30): ನಾನು ಸೆಟಲ್ ಆಗಿದ್ದೇನೆ. ರಾಧಾಕೃಷ್ಣ ಅವರ ಸೆಟಲ್ ಮಾಡುವ ಬಗ್ಗೆ ಕಲಬುರಗಿ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ, ಚಿಕ್ಕಮಗಳೂರಿನ ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಪಕ್ಷದಲ್ಲಿಯೂ ಯಾವುದೇ ಹುದ್ದೆ ಹೊಂದಿಲ್ಲ. ರವಿ ಅವರೇ ನಮ್ಮ ಸೆಟಲ್ ಬಗ್ಗೆ ಯೋಚಿಸದೆ ನೀವು ಸೆಟಲ್ ಆಗುವ ಬಗ್ಗೆ ಯೋಚಿಸಿ ಎಂದು ಸಿ.ಟಿ.ರವಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

 "ಪ್ರಿಯಾಂಕ್ ಖರ್ಗೆ ಸೆಟಲ್ ಆಗಿದ್ದಾರೆ. ಈಗ ಅಳಿಯನನ್ನು ಸೆಟಲ್ ಮಾಡಲು ಖರ್ಗೆ ಅವರು‌ ಕಣ್ಣೀರು ಹಾಕಿದ್ದಾರೆ ಎಂದು ಸಿ.ಟಿ‌ ರವಿ ಹೇಳಿರುವುದಕ್ಕೆ ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ ಅವರು, ಯಡಿಯೂರಪ್ಪ ಹಾಗೂ ಅವರ ಮಗನಿಂದ ಬಿಜೆಪಿಯನ್ನು ಸ್ವಚ್ಛಗೊಳಿಸಲು ಹೋರಾಡುವುದಾಗಿ ಯತ್ನಾಳ ಹಾಗೂ ಈಶ್ವರಪ್ಪ ಹೇಳುತ್ತಿದ್ದಾರೆ. ಅವರನ್ನು ನೋಡಿ, ಅವರಂತೆ ಮಾತನಾಡುವುದನ್ನು ಕಲಿಯಿರಿ. ಮೊದಲೇ ಜನರು ನಿಮ್ಮನ್ನು ಪುಕ್ಕಲ ಎನ್ನುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ. 

ದೆಹಲಿ ಪೊಲೀಸರನ್ನು ಮೋದಿ ನನ್ನ ಮನೆಗೆ ಛೂ ಬಿಟ್ಟಿದ್ದಾರೆ: ತೆಲಂಗಾಣ ಸಿಎಂ ರೇವಂತ ರೆಡ್ಡಿ

ತೇಜಸ್ವಿ, ಶೆಟ್ಟರ್‌ ಬದಲು ಸಾಮಾನ್ಯ ಬ್ರಾಹ್ಮಣ, ಲಿಂಗಾಯಿತರಿಗೆ ಬಿಜೆಪಿ ಟಿಕೆಟ್‌ ಕೊಡಬಹುದಿತ್ತಲ್ಲ. ಸಾಮಾನ್ಯ ದಲಿತನಿಗೆ ಟಿಕೆಟ್ ನೀಡಬೇಕಿತ್ತು ಎಂದು ಸಿ.ಟಿ‌ ರವಿ ಹೇಳಿರುವ ಕುರಿತು ಹೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ತೇಜಸ್ವಿ ಸೂರ್ಯ ಹಾಗೂ ಜಗದೀಶ್ ಶೆಟ್ಟರ್ ಬದಲು ಸಾಮಾನ್ಯ ಬ್ರಾಹ್ಮಣ, ಲಿಂಗಾಯತನಿಗೆ ಟಿಕೆಟು ಕೊಡಬೇಕಿತ್ತಲ್ಲ. ಇನ್ನೂ‌ ಚುನಾವಣೆಗೆ ಪ್ರಚಾರ ಕೊನೆಗೊಳ್ಳಲು ಐದು ಆರು‌ ದಿನವಿದೆ. ಬಿಜೆಪಿ ನಾಯಕರು ನಮ್ಮ ಹಾಗೂ ನಮ್ಮ ಕುಟುಂಬದ ಮೇಲೆ ಹೀಗೆ ವೈಯಕ್ತಿಕ ದಾಳಿ ಮಾಡುತ್ತಾರೆ. ನಾವೂ ಕೂಡ ಅಂತಹ ಮಾತುಗಳಿಗೆ ಸೂಕ್ತ ಉತ್ತರ ಕೊಡಬೇಕಾಗುತ್ತದೆ ಎಂದು ಮಾರುತ್ತರ ನೀಡಿದರು.

ಸರ್ಕಾರದ ಪರವಾಗಿ ಮಾತನಾಡಲೆಂದೇ ಸಿಎಂ ನಮ್ಮನ್ನ ನೇಮಿಸಿದ್ದಾರೆ, ನಿಮಗೇನು ತೊಂದರೆ?

ಪ್ರಿಯಾಂಕ್ ಖರ್ಗೆ ಸರಕಾರದಿಂದ ಪವರ್ ಆಫ್ ಅಟಾರ್ನಿ ಪಡೆದುಕೊಂಡಿದ್ದಾರೆ. ಹಾಗಾಗಿ ಎಲ್ಲ ಖಾತೆಗಳಿಗೆ ಸಂಬಂಧಿಸಿದ ವಿಚಾರ ಮಾತನಾಡುತ್ತಾರೆ ಎನ್ನುವ ಸಿ.ಟಿ. ರವಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್, ಹೌದು‌ ನಾನು, ದಿನೇಶ್ ಗುಂಡುರಾವ್, ಸಂತೋಷ್‌ ಲಾಡ್ ಹಾಗೂ ಕೃಷ್ಣ ಭೈರೇಗೌಡ ಅಧಿಕೃತ ವಕ್ತಾರರು. ಸರ್ಕಾರದ ಪರವಾಗಿ ಮಾತನಾಡಲಿ ಅಂತ ಸಿಎಂ ನಮಗೆ ನೇಮಿಸಿದ್ದಾರೆ. ಸರ್ಕಾರಕ್ಕಾಗಲೀ ಅಥವಾ ಜನರಿಗಾಗಲೀ ಇದರಿಂದ ಏನು ತೊಂದರೆಯಾಗಿಲ್ಲ. ಬಿಜೆಪಿಗೆ ಅಥವಾ ರವಿಗೆ ತೊಂದರೆಯಾದರೆ ನನಗೆ ಅದು ಸಂಬಂಧಿಸಿಲ್ಲ ಎಂದು ಹೇಳಿದ್ದಾರೆ. 

ಪ್ರಧಾನಿ ಮೋದಿ ಮಹಿಳೆಯರ ರಕ್ಷಣೆಗೆ ಏನು ಮಾಡಿದ್ದಾರೆ? ಪ್ರಿಯಾಂಕಾ ಗಾಂಧಿ

ಬಹಿರಂಗ ಚರ್ಚೆಗೆ ಜಾಧವ್ ಆಹ್ವಾನ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, " ವಿಷಯಾಧಾರಿತ ಚರ್ಚೆ ಮಾಡೋಣ ಬನ್ನಿ. ನಾನೇ ವೇದಿಕೆ ಸಿದ್ದಪಡಿಸುತ್ತೇನೆ. ರೇಲ್ವೆ ವಲಯ, ಜವಳಿ ಪಾರ್ಕ್, ನಿಮ್ಜ್ ನಂತಹ ಯೋಜನೆಗಳು ಯಾಕೆ ವಾಪಸ್ ಹೋದವು ಎನ್ನುವುದಕ್ಕೆ ಅಲ್ಲಿ ನೀವು ಉತ್ತರ ಕೊಡಿ. ಕಾನೂನು ಸುವ್ಯವಸ್ಥೆ ಕೆಟ್ಟಿದೆ ಎಂದಿದ್ದೀರಿ, ಕಲಬುರಗಿಯಲ್ಲಿ ನಿಮ್ಮನ್ನು ಹೊರತುಪಡಿಸಿದರೆ ಎಲ್ಲರೂ ಆರಾಮಾಗಿ ಓಡಾಡುತ್ತಿದ್ದಾರೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಒಬ್ಬ ಉಸ್ತುವಾರಿ ಸಚಿವರನ್ನ ತರಲು ಯೋಗ್ಯತೆ ಇರಲಿಲ್ಲ. ಮೂರು ವರ್ಷದಲ್ಲಿ ಮೂವರು ಸಚಿವರು ಬದಲಾದರು. ನೀವು ನಮಗೆ ಪಾಠ ಮಾಡಲು ಬರುತ್ತೀರಾ?" ಎಂದರು.

ಹುಬ್ಬಳ್ಳಿ ಘಟನೆ ಬಗ್ಗೆ ಹೋರಾಟ ನಡೆಸಿ ಈಗ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಗರಣದಲ್ಲಿ ಸುಮ್ಮನಿರುವ ಬಿಜೆಪಿ ನಾಯಕರ ಧೋರಣೆಯನ್ನು ಕಟುವಾಗಿ ಟೀಕಿಸಿದ ಪ್ರಿಯಾಂಕ್ ಖರ್ಗೆ, "ಹಾಸನದ ಮೂರು ಸಾವಿರ ನೊಂದ ಮಹಿಳೆಯರ ಮನೆಗೆ ಅಮಿತ್ ಶಾ ಹಾಗೂ ನಡ್ಡಾ ಯಾವಾಗ ಹೋಗುತ್ತಾರೆ? ಪ್ರಜ್ವಲ್ ಗೆ ಹಾಕುವ ಒಂದೊಂದು ಓಟು ನನ್ನ ಕೈಬಲ ಪಡಿಸಿದಂತೆ ಎಂದ ಮೋದಿ ಅವರಿಗೆ ಪ್ರಜ್ವಲ್ ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಅವರಿಗೆ ಟಿಕೆಟ್ ನೀಡಬೇಡಿ ಎಂದು ಅವರ ವಿರುದ್ಧ ಪತ್ರ ಬರೆದಿದ್ದು ಗೊತ್ತಿರಲಿಲ್ಲವಾ? ಬಿಜೆಪಿಯವರೇ, ನಿಮ್ಮ ನಾಯಕರಾದ ನಿರ್ಮಲಾ ಸೀತಾರಾಮನ್, ಸ್ಮೃತಿ‌ ಇರಾನಿ ಹಾಗೂ ಶೋಭಕ್ಕ‌ ಅವರಿಂದ ಬಿಸಿಲಲ್ಲಿ ಪ್ರತಿಭಟನೆ ಮಾಡಿಸಿ‌ ಆಮೇಲೆ ನಮ್ಮೊಂದಿಗೆ ಚರ್ಚೆಗೆ ಬನ್ನಿ‌" ಎಂದು ಅಹ್ವಾನಿಸಿದರು.

Follow Us:
Download App:
  • android
  • ios