Asianet Suvarna News Asianet Suvarna News

ಮೋದಿ ಆಡಳಿತದಲ್ಲಿ ಸಬ್‌ ಕಾ ಸತ್ಯಾನಾಶ್‌: ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ಸುಳ್ಳಿನ ಸರದಾರ. ಬಾಯಲ್ಲಿ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎನ್ನುವ ಮೋದಿ ತಮ್ಮ ಆಡಳಿತದಲ್ಲಿ, ಸಬ್‌ ಕಾ ಸತ್ಯಾನಾಶ್‌ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

Lok Sabha Elections 2024 Mallikarjun Kharge Slams On PM Narendra Modi At Yadgir gvd
Author
First Published May 2, 2024, 9:34 AM IST

ಯಾದಗಿರಿ (ಮೇ.02): ಪ್ರಧಾನಿ ಸುಳ್ಳಿನ ಸರದಾರ. ಬಾಯಲ್ಲಿ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಎನ್ನುವ ಮೋದಿ ತಮ್ಮ ಆಡಳಿತದಲ್ಲಿ, ಸಬ್‌ ಕಾ ಸತ್ಯಾನಾಶ್‌ ಮಾಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. ಯಾದಗಿರಿಯ ವನಕೇರಿ ಲೇಔಟಿನಲ್ಲಿ ನಡೆದ ಕಾಂಗ್ರೆಸ್‌ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ಮೋದಿ ಕೀ ಗ್ಯಾರಂಟಿ ಇಲ್ಲ, ನಮ್ಮ ಗ್ಯಾರಂಟಿ ಇದೆ. ಮೋದಿ ಸುಳ್ಳು ಭರವಸೆ ನೀಡುತ್ತಿರುತ್ತಾನೆ, ಅದಕ್ಕೇ ಅವನನ್ನು ನಾನು ಸುಳ್ಳಿನ ಸರದಾರ ಎಂದು ಕರೆಯುತ್ತಿರುತ್ತೇನೆ’ ಎಂದು ಖರ್ಗೆ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಧಾನಿ ಮೋದಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ, ಉದ್ಯೋಗ ಕೊಡಿಸದೆ, ಕಾಂಗ್ರೆಸ್, ಗಾಂಧಿ ಮತ್ತು ನನ್ನನ್ನು ಬೈಯ್ಯೋದು ಕೆಲಸ ಮಾಡುತ್ತಿದ್ದಾನೆ’ ಎಂದು ತಿಳಿಸಿದರು. ‘ನನ್ನ ಹೆಸರು ಮಲ್ಲಿಕಾರ್ಜುನ, ಮೈಲಾರ ಲಿಂಗಣ್ಣ ಹೆಸರ ಮೇಲೆ ಇಟ್ಟಿದ್ದಾರೆ, ನಾನೂ ಸಹ ದೇವರನ್ನು ಆರಾಧಿಸುತ್ತೇನೆ. ಖರ್ಗೆ ರಾಮ ಮಂದಿರ ಉದ್ಘಾಟನೆಗೆ ಕರೆದರೂ ಬರಲಿಲ್ಲ ಎಂದು ಮೋದಿ ಹೇಳುತ್ತಾರೆ, ಆತನೇನು ಪೂಜಾರಿಯೇ ಎಂದು ಪ್ರಶ್ನಿಸಿದ ಖರ್ಗೆ, ಪಾಪಗಳ ಮಾಡಿ ಅದನ್ನು ಹೋಗಲಾಡಿಸಲು ರಾಮ ಮಂದಿರ ಉದ್ಘಾಟನೆ ಮಾಡಿದ್ದಾನೆ’ ಎಂದು ವ್ಯಂಗ್ಯವಾಡಿದರು.

‘ನಾನು ಕಂದಾಯ ಸಚಿವರಾಗಿದ್ದಾಗ ಎಲ್ಲ ಹಳ್ಳಿಗಳಲ್ಲಿ ನೂರಾರು ಆಂಜನೇಯ ದೇವಸ್ಥಾನಗಳನ್ನು ಕಟ್ಟಿಸಿ ಕೊಟ್ಟಿದ್ದೇನೆ. ಮೋದಿ ರಾಮನ ಹೆಸರು ಮೇಲೆ ಮತ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಹಾಗೆ ನಾನು ಮಾಡಲಿಲ್ಲ. ಮತಗಳಿಗಾಗಿ ನಾನು ಆಂಜನೇಯ ಗುಡಿ ಕಟ್ಟಿಸಿಲ್ಲ’ ಎಂದರು. ‘ಈ ಭಾಗದಲ್ಲಿ ಹಿಂದೂ -ಮುಸ್ಲಿಮರು ಸಾಮರಸ್ಯದಿಂದ ಇದ್ದಾರೆ. ಮೋದಿ ಅವರು ಜಗಳ ಹಚ್ಚುವ ಕೆಲಸ ಮಾಡುತ್ತಿರುತ್ತಾರೆ. ನಮ್ಮ ಭಾಗದಲ್ಲಿ ಎಷ್ಟೋ ಜನರ ಹೆಸರು ಮೌಲಾಲಿ, ಫಕೀರಪ್ಪ, ಖಾತಾಲ್, ಲಾಲಪ್ಪ, ನವಾಜ್ ಮುಂತಾದ ಮುಸ್ಲಿಂ ದೇವರ ಹೆಸರನ್ನು ಹಿಂದೂಗಳಲ್ಲಿ ಇಟ್ಟುಕೊಂಡು ಸಾಮರಸ್ಯದಿಂದ ಬಾಳುತ್ತಿದ್ದಾರೆ. 

ಪ್ರಜ್ವಲ್‌ ವಿದೇಶಕ್ಕೆ ಹೋಗುವವರೆಗೂ ಕತ್ತೆ ಕಾಯುತ್ತಿದ್ದರಾ?: ಪ್ರಲ್ಹಾದ್‌ ಜೋಶಿ

ಆದರೆ, ಮೋದಿ ದೇಶದಲ್ಲಿ ಜನರಲ್ಲಿ ಧರ್ಮದ ದ್ವೇಷ ಭಾವನೆ ಉಂಟು ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಮಹಿಳೆಯರ ಬಗ್ಗೆ ಅಪಮಾನ ಮಾಡಿದವನ ಜತೆಗೆ ಮೈತ್ರಿ ಮಾಡಿಕೊಂಡು ಟಿಕೆಟ್ ನೀಡಿದಿರಲ್ಲಪ್ಪ’ ಎಂದು ಸಂಸದ ಪ್ರಜ್ವಲ್‌ ಬಗ್ಗೆ ಟಾಂಗ್‌ ನೀಡಿದರು. ‘ಸಂವಿಧಾನ ಉಳಿಸಲು, ಜನರನ್ನು ಉಳಿಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು, ಮೋದಿ ಹಠಾವೋ, ದೇಶ್‌ ಕೋ ಬಚಾವ್ ಆಂದೋಲನ ನಡೆಯಬೇಕಾಗಿದೆ. ಎಲ್ಲ ಧರ್ಮದವರು ಸಮಾನತೆಯಿಂದ ಇರಬೇಕು’ ಎಂದು ಖರ್ಗೆ ಅವರು ಮನವಿ ಮಾಡಿದರು.

Follow Us:
Download App:
  • android
  • ios