ಮಗನಿಗೆ ಬೆಂಬಲದ ಬಗ್ಗೆ ತೀರ್ಪಿನ ಬಳಿಕ ನಿರ್ಧಾರ
ನನ್ನ ಮಗನನ್ನು ಬೆಂಬಲಿಸಬೇಕೋ ಅಥವಾ ಬೇಡವೋ ಎಂಬುದನ್ನು ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ನೀಡುವ ತೀರ್ಪಿನ ನಂತರ ಪ್ರಕಟಿಸುತ್ತೇನೆ ಎಂದು ಬಚ್ಚೇಗೌಡರು ಹೇಳಿದ್ದಾರೆ.
ಬೆಂಗಳೂರು [ನ.06]: ನಾನು ನನ್ನ ಮಗನನ್ನು ಬೆಂಬಲಿಸಬೇಕೋ ಅಥವಾ ಬೇಡವೋ ಎಂಬುದನ್ನು ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ನೀಡುವ ತೀರ್ಪಿನ ನಂತರ ಪ್ರಕಟಿಸುತ್ತೇನೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಮಾರ್ಮಿಕವಾಗಿ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾನು ತಬ್ಬಲಿ ಮಗುವಾದೆ ಎಂಬ ಪುತ್ರ ಶರತ್ ಬಚ್ಚೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದರು.
ನನ್ನ ಕ್ಷೇತ್ರಕ್ಕೆ ಕೈ ಹಾಕಿದರೆ ಕೈ ಕತ್ತರಿಸುವೆ! ಎಚ್ಚರಿಸಿದ ಶಾಸಕ...
ಶರತ್ ಯಾಕೆ ಹಾಗೆ ಹೇಳಿದ್ದಾರೊ ಗೊತ್ತಿಲ್ಲ. ನಾನು ಬಿಜೆಪಿಯ ಸಂಸದನಾಗಿದ್ದೇನೆ. ನನ್ನ ಮಗನೂ ಬಿಜೆಪಿಯಲ್ಲಿಯೇ ಇದ್ದಾನೆ. ನಾನು ಮಗನಿಗೆ ಬೆಂಬಲ ಕೊಡಬೇಕೋ ಅಥವಾ ಬೇಡವೋ ಎಂಬುದನ್ನು ಸುಪ್ರೀಂಕೋರ್ಟ್ ಅನರ್ಹ ಶಾಸಕರ ಕುರಿತು ನೀಡುವ ತೀರ್ಪಿನ ನಂತರ ಪ್ರಕಟಿಸುತ್ತೇನೆ. ಈಗಲೇ ಬೆಂಬಲ ಕೊಡುವ ಮಾತು ಉದ್ಭವಿಸುವುದಿಲ್ಲ. ಪಕ್ಷ ಕೈಗೊಳ್ಳುವ ತೀರ್ಮಾನದ ಮೇಲೆ ನನ್ನ ನಿರ್ಧಾರ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹೊಸಕೋಟೆಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಅನಾರೋಗ್ಯದ ಕಾರಣದಿಂದಾಗಿ ಆಗಮಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.