ಪುತ್ರನ ಬಂಧನದ ನಂತರ ಶಾಸಕ ಹ್ಯಾರಿಸ್ ಕ್ಷಮಾಪಣಾ ಪತ್ರ
ವಿದ್ವಂತ್, ಅವರ ಪೋಷಕರು ಹಾಗೂ ಬೆಂಗಳೂರು ನಾಗರಿಕರಿಗೆ ಕ್ಷಮೆಯಾಚಿಸಿದ್ದಾರೆ.
ಬೆಂಗಳೂರು(ಫೆ.19): ಪುತ್ರನ ಬಂಧನದ ನಂತರ ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಅವರು ವಿದ್ವಂತ್, ಅವರ ಪೋಷಕರು ಹಾಗೂ ಬೆಂಗಳೂರು ನಾಗರಿಕರಿಗೆ ಕ್ಷಮೆಯಾಚಿಸಿದ್ದಾರೆ. ಅವರ ಕ್ಷಮಾಪಣಾ ಪತ್ರ ಇಂತಿದೆ.
ನನ್ನ ಆತ್ಮೀಯ ಸ್ನೇಹಿತರೇ,
ಶನಿವಾರ ರಾತ್ರಿ ನಡೆದ ದುರದೃಷ್ಟಕರ ಘಟನೆಯಿಂದ ನನ್ನ ಪುತ್ರ ಮುಹಮ್ಮದ್ ಹ್ಯಾರಿಸ್ ನಲಪಾಡ್ ಮತ್ತು ವಿದ್ವಂತ್ ನಡುವೆ ನಡೆದ ಘಟನೆಯಿಂದಾಗಿ ವಿದ್ವಂತ್, ಅವರ ಹೆತ್ತವರಿಗೆ ಹಾಗೂ ಬೆಂಗಳೂರು ನಗರದ ನಾಗರಿಕರಿಗೆ ಕ್ಷಮೆಯಾಚಿಸುತ್ತೇನೆ.
ಕಳೆದ 9 ವರ್ಷ 9 ತಿಂಗಳುಗಳ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ನಾನು ಅತ್ಯಂತ ಸರಳತೆಯಿಂದ ಸೇವೆ ಮಾಡಿದ್ದೇನೆ.ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ ಮತ್ತು ಇದಕ್ಕೆ ನನ್ನ ಮಗನೂ ಹೊರತಲ್ಲ.
ಶನಿವಾರ ರಾತ್ರಿ ನಡೆದ ಘಟನೆ ಅತ್ಯಂತ ದುರದೃಷ್ಟಕರ ಮತ್ತು ಆಗಬಾರದ ಘಟನೆ ಆಗಿ ಹೋಗಿದೆ.
ಈಗಾಗಲೇ ಎಲ್ಲಾ ಸುದ್ದಿ ಮಾಧ್ಯಮಗಳಿಗೆ ತಿಳಿಸಿದಂತೆ, ನನ್ನ ಮಗ ಮುಹಮ್ಮದ್ ಹ್ಯಾರಿಸ್ ನಲಪಾಡ್ ಅವರನ್ನು ಕಬ್ಬಾನ್ ಪಾರ್ಕ್ ಪೊಲೀಸ್ ಅಧಿಕಾರಿಗಳಿಗೆ ಒಪ್ಪಿಸಿದ್ದೇನೆ. ಮಾಧ್ಯಮವು ಈ ವಿಷಯದ ಬಗ್ಗೆ ಮಾತ್ರ ಒತ್ತಡ ಹೇರಲು ಪ್ರಯತ್ನಿಸುತ್ತಿದೆ ಮತ್ತು ನನ್ನ ಶಾಂತಿನಗರ ಕ್ಷೇತ್ರದ 9ವರ್ಷ 9 ತಿಂಗಳ ಅವಧಿಯಲ್ಲಿ ನಾನು ಮಾಡಿರುವ ಸಮರ್ಪಣೆ, ಭಕ್ತಿ, ನಿಷ್ಠಾವಂತ ಸೇವೆಯು ಪರಿಣಾಮಕಾರಿಯಾಗಿ ಶಾಂತಿನಗರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ ಎಂಬುದು ನನ್ನ ಕ್ಷೇತ್ರದ ಜನತೆಗೆ ತಿಳಿದಿರುವ ಸತ್ಯ. ಈ ಪ್ರಕರಣವನ್ನು ಇಟ್ಟುಕೊಂಡು ವಿರೋಧ ಪಕ್ಷದವರು ನನ್ನ ಮತ್ತು ಪಕ್ಷದ ವರ್ಚಸ್ಸನ್ನು ಕುಂದಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬುದು ವಿಷಾದ ಸಂಗತಿ.
ಕಾನೂನು ನಮ್ಮಗೆಲ್ಲರಿಗೂ ಒಂದೇ ಆಗಿರುತ್ತದೆ ನಾನು ಮತ್ತೊಮ್ಮೆ ಬಲವಾಗಿ ಒತ್ತಿ ಹೇಳುತ್ತೇನೆ. ಈ ಪ್ರಕರಣದ ಎಲ್ಲಾ ಹಂತದಲ್ಲಿ ಅನುಸರಿಸುವ ತನಿಖಾ ಪ್ರಕ್ರಿಯೆಗೆ ನಾನು ಶೇಕಾಡ 100% ಸಂಪೂರ್ಣ ಸಹಕಾರವನ್ನು ನೀಡಿದ್ದೇನೆ ಅದರಲ್ಲಿ ಯಾವುದೇ ಸಂದೇಹಬೇಡ.
ಈ ಸಂಕಷ್ಟ ಮತ್ತು ನನ್ನ ರಾಜಕೀಯ ಜೀವನದ ಸವಾಲಿನ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಮತ್ತು ವಿಶೇಷವಾಗಿ ಶಾಂತಿನಗರ ವಿಧಾನಸಭೆ ಕ್ಷೇತ್ರದ ಜನತೆಗೆ ಹಾಗೂ ನನ್ನ ಪರವಾಗಿ ನಿಂತ ನಿಮೆಲ್ಲರಿಗೂ ಪ್ರೀತಿ ತುಂಬಿದ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ.