ಕಣಿವೆಯಲ್ಲಿ ಪ್ರತ್ಯೇಕತವಾದಿ ನಾಯಕನ ಬರ್ಬರ ಹತ್ಯೆ!
ತೆಹ್ರೀಕ್-ಇ-ಹುರಿಯತ್ ಸಂಘಟನೆಯ ನಾಯಕನ ಹತ್ಯೆ! ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದ ಘಟನೆ! ದುಷ್ಕರ್ಮಿಗಳ ದಾಳಿಗೆ ಬಲಿಯಾದ ಪ್ರತ್ಯೇಕತಾವಾದಿ ನಾಯಕ ಹಫೀಜುಲ್ಲಾ ಮಿರ್! ಕಳೆದ ಅಕ್ಟೋಬರ್ ತಿಂಗಳಿನಲ್ಲಷ್ಟೇ ಬಿಡುಗಡೆಗೊಂಡಿದ್ದ ಫೀಜುಲ್ಲಾ ಮಿರ್
ಶ್ರೀನಗರ(ನ.21): ಪ್ರತ್ಯೇಕತಾವಾದಿ ಸಯ್ಯದ್ ಅಲಿ ಶಾಹ್ ಗಿಲಾನಿಯವರ ತೆಹ್ರೀಕ್-ಇ-ಹುರಿಯತ್ ಸಂಘಟನೆಯ ನಾಯಕನೊಬ್ಬನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದೆ.
ಪ್ರತ್ಯೇಕತಾವಾದಿಗಳ ಜಿಲ್ಲಾಧ್ಯಕ್ಷರಾಗಿದ್ದ ಹಫೀಜುಲ್ಲಾ ಮಿರ್ ಎಂಬುವವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದ ಮಿರ್ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆಂದು ಹೇಳಲಾಗಿದೆ.
ಅನಂತ್ ನಾಗ್ ಜಿಲ್ಲೆ ಅಕಿಂಗಾಮ್ ಗ್ರಾಮದಲ್ಲಿರುವ ಅಚಬಲ್ ಪ್ರದೇಶದಲ್ಲಿ ಹಫೀಜುಲ್ಲಾ ಅವರನ್ನು ಹತ್ಯೆ ಮಾಡಲಾಗಿದೆ. ಎರಡು ವರ್ಷಗಳ ಕಾಲ ಗೃಹ ಬಂಧನದಲ್ಲಿದ್ದ ಹಫೀಜುಲ್ಲಾ ಅವರನ್ನು ಕಳೆದ ಅಕ್ಟೋಬರ್ ತಿಂಗಳಿನಲ್ಲಷ್ಟೇ ಬಿಡುಗಡೆ ಮಾಡಲಾಗಿತ್ತು.