ಗುಜರಾತ್ ಚುನಾವಣೆ ಬಳಿಕ ಕಾಂಗ್ರೆಸ್'ನ ಭಾರೀ ಹಗರಣ ಬಯಲಿಗೆ: ಎಚ್ಡಿಕೆ ಎಚ್ಚರಿಕೆ
ಡಿ.18 ರ ನಂತರ ಗುಜರಾತ್ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಸರ್ಕಾರದ ಗಣಿ ಹಗರಣ ಬಯಲು ಮಾಡುತ್ತೇನೆ ಎಂದು ಎಚ್ ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು (ಡಿ14): ಡಿ.18 ರ ನಂತರ ಗುಜರಾತ್ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ಸರ್ಕಾರದ ಗಣಿ ಹಗರಣ ಬಯಲು ಮಾಡುತ್ತೇನೆ ಎಂದು ಎಚ್ ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ರಾಜ್ಯದ ಸಂಪತ್ತು ಲೂಟಿ ಮಾಡಿರುವ ಕಾಂಗ್ರೆಸ್ ಸರ್ಕಾರದ ಕುರಿತು ಸೂಕ್ತ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳ ಮೂಲಕ ಸುದ್ದಿ ಬಹಿರಂಗಪಡಿಸುತ್ತೇನೆ ಎಂದು ಕಾಂಗ್ರೆಸ್'ಗೆ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಮಿನರಲ್ಸ್ ಲಿಮಿಟೆಡ್ ಸಾಲ ಮನ್ನಾ ವಿಚಾರದಲ್ಲಿ ಹಣ ವರ್ಗಾವಣೆಯಲ್ಲಿ ರಾಜ್ಯ ತೆಗೆದುಕೊಂಡ ಕ್ರಮಗಳ ಬಗ್ಗೆ, ಅಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ದಾಖಲೆ ಸಮೇತ ಬಯಲುಗೆಳೆಯುತ್ತೇನೆ ಎಂದಿದ್ದಾರೆ.
ರಾಜ್ಯ ಸರ್ಕಾರ ಸಾಲ ಮನ್ನಾ ಘೋಷಣೆ ಮಾಡಿದಾಗ ಸಂಪನ್ಮೂಲ ಕ್ರೋಢೀಕರಣಕ್ಕೆ ಹಲವು ಮೂಲಗಳನ್ನು ಹುಡುಕಿತ್ತು. ಆಗ ಸರ್ಕಾರದ ಸ್ವಾಮ್ಯದಲ್ಲಿರುವ ಸಂಸ್ಥೆಗಳ ಆದಾಯವನ್ನು ಬಳಸಿಕೊಳ್ಳಲು ಚಿಂತನೆ ನಡೆಸಿತ್ತು. ಆಗ ಮೈಸೂರು ಮಿನರಲ್ಸ್ ಲಿಮಿಟೆಡ್'ನಲ್ಲಿ 1400 ಕೋಟಿಯಷ್ಟು ಹೆಚ್ಚಿವರಿ ಹಣ ಕ್ರೋಢೀಕರಣ ಆಗಿರುವುದು ಗಮನಕ್ಕೆ ಬರುತ್ತದೆ. 1400 ಕೋಟಿಯನ್ನು ನಬಾರ್ಡ್'ನಲ್ಲಿಟ್ಟು ಅದರಿಂದ ಸಾಲವನ್ನು ಪಡೆಯಲು ಮುಂದಾಗಿತ್ತು. ಆಗ ಮೈಸೂರು ಮಿನರಲ್ಸ್ ಎಂ ಡಿ ನವೀನ್ ರಾಜ್ ಸಿಂಗ್ ರಾಜ್ಯ ಸರ್ಕಾರದ ಕ್ರಮವನ್ನು ಆಕ್ಷೇಪಿಸುತ್ತಾರೆ. ಹಣ ವರ್ಗಾವಣೆಗೆ ಅಡ್ಡಿಪಡಿಸುತ್ತಿದ್ದಾರೆ ಎನ್ನುವ ಕಾರಣಕ್ಕೆ ನವೀನ್ ರಾಜ್ ಸಿಂಗ್'ರನ್ನು ಹಿಮಾಚಲ ಪ್ರದೇಶ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ. ಇದಕ್ಕೆ ಭಾರೀ ವಿರೋಧ ಕೂಡಾ ವ್ಯಕ್ತವಾಗುತ್ತದೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಹಣ ವರ್ಗಾವಣೆಗೆ ಮುಂದಾಗಿತ್ತಾ ಎಂಬುದರ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಎಚ್ಡಿಕೆ ಎಚ್ಚರಿಕೆ ನೀಡಿದ್ದಾರೆ.