ಬೆಳಗಾವಿ ಸ್ಮಶಾನದಲ್ಲಿ ನಡೆಯಿತು ವಿವಾಹ!
ಮಾಜಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ಮೌಢ್ಯವಿರೋಧಿ ಪರಿವರ್ತನಾ ದಿನದಲ್ಲಿ ಸ್ಮಶಾನದಲ್ಲಿ ಜೋಡಿಯೊಂದು ಅಂತರ್ಜಾತಿಯ ವಿವಾಹವಾಗುವ ಮೂಲಕ ಮೌಢ್ಯಕ್ಕೆ ಸಡ್ಡು ಹೊಡೆಯಿತು.
ಬೆಳಗಾವಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ನಗರದಲ್ಲಿ ಮೌಢ್ಯವಿರೋಧಿ ಪರಿವರ್ತನಾ ದಿನವಾಗಿ ಆಚರಿಸಲಾಯಿತು. ಈ ಪ್ರಯುಕ್ತ ನಗರದ ಸದಾಶಿವನಗರ ಸ್ಮಶಾನದಲ್ಲಿ ಜೋಡಿಯೊಂದು ಅಂತರ್ಜಾತಿಯ ವಿವಾಹವಾಗುವ ಮೂಲಕ ಮೌಢ್ಯಕ್ಕೆ ಸಡ್ಡು ಹೊಡೆಯಿತು.
ಈ ಸಮಾರಂಭವನ್ನು ಮಾಜಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆ ಆಯೋಜಿಸಿತ್ತು. ಈ ವೇಳೆ ನವದಂಪತಿಗೆ . 50 ಸಾವಿರ ಪ್ರೋತ್ಸಾಹಧನದ ಚೆಕ್ ನೀಡಿ ಜಾರಕಿಹೊಳಿ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಅವರು,ಅಂತರ್ಜಾತಿ ವಿವಾಹವಾದವರಿಗೆ ಸರ್ಕಾರ .2 ಲಕ್ಷ ಪ್ರೋತ್ಸಾಹಧನ ನೀಡುತ್ತಿದೆ.
ಅದೇ ರೀತಿ ಭಯಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಸ್ಮಶಾನದಲ್ಲಿ ವಿವಾಹವಾಗುವವರಿಗೆ .2 ಲಕ್ಷ ಪ್ರೋತ್ಸಾಹಧನ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಹೈಕೋರ್ಟ್ ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನ ದಾಸ್, ಸಾಹಿತಿ ನಾಡೋಜ, ಬರಗೂರು ರಾಮಚಂದ್ರಪ್ಪ ಮಾತನಾಡಿದರು.