Asianet Suvarna News Asianet Suvarna News

ಕನಕಗಿರಿ ಉತ್ಸವದ ಅಬ್ಬರದಲ್ಲಿ ಸ್ಮಾರಕಗಳ ಕಣ್ಣೀರು ಕಾಣುತ್ತಿಲ್ಲ!

ನಮ್ಮ ಹೆಸರು ಹೇಳಿಕೊಂಡು ಸಂಭ್ರಮಿಸುತ್ತಿರುವ ನೀವು ಸ್ವಲ್ಪ ನಮ್ಮತ್ತ ನೋಡಿ. ನೀವು ಹೀಗೆ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದೇ ಆದರೆ ಮುಂದಿನ ಪೀಳಿಗೆಗೆ ನೀವು ನಮ್ಮ ಹೆಸರು ಹೇಳಬಹುದು ಅಷ್ಟೇ, ನಾವು ಸಾಕ್ಷಿಯಾಗಿರುವುದಕ್ಕೆ ಇರುವುದಿಲ್ಲ. ಈಗಾಗಲೇ ನಮ್ಮ ಸಹೋದರ, ಸಹೋದರಿಯರು ನಶಿಸಿ ಹೋಗಿದ್ದಾರೆ. ಇನ್ನೇನು ಅಳಿದುಳಿದ ನಾವು ಸಹ ನಾಶವಾಗುವ ಭೀತಿಯಲ್ಲಿದ್ದೇವೆ. ನಮ್ಮ ಕುರಿತು ನಿಮ್ಮ ಭಾಷಣದಲ್ಲಿ ಬಣ್ಣನೆ ಮಾಡುತ್ತಿದ್ದೀರಿ, ಆದರೂ ನೀವು ನಮ್ಮತ್ತ ನೋಡುತ್ತಲೇ ಇಲ್ಲ...

Historical monuments of Kanakagiri are perishing at koppal rav
Author
First Published Mar 3, 2024, 2:47 PM IST

ಸೋಮರಡ್ಡಿ ಅಳವಂಡಿ

ಕನಕಗಿರಿ: ನಮ್ಮ ಹೆಸರು ಹೇಳಿಕೊಂಡು ಸಂಭ್ರಮಿಸುತ್ತಿರುವ ನೀವು ಸ್ವಲ್ಪ ನಮ್ಮತ್ತ ನೋಡಿ. ನೀವು ಹೀಗೆ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದೇ ಆದರೆ ಮುಂದಿನ ಪೀಳಿಗೆಗೆ ನೀವು ನಮ್ಮ ಹೆಸರು ಹೇಳಬಹುದು ಅಷ್ಟೇ, ನಾವು ಸಾಕ್ಷಿಯಾಗಿರುವುದಕ್ಕೆ ಇರುವುದಿಲ್ಲ. ಈಗಾಗಲೇ ನಮ್ಮ ಸಹೋದರ, ಸಹೋದರಿಯರು ನಶಿಸಿ ಹೋಗಿದ್ದಾರೆ. ಇನ್ನೇನು ಅಳಿದುಳಿದ ನಾವು ಸಹ ನಾಶವಾಗುವ ಭೀತಿಯಲ್ಲಿದ್ದೇವೆ. ನಮ್ಮ ಕುರಿತು ನಿಮ್ಮ ಭಾಷಣದಲ್ಲಿ ಬಣ್ಣನೆ ಮಾಡುತ್ತಿದ್ದೀರಿ, ಆದರೂ ನೀವು ನಮ್ಮತ್ತ ನೋಡುತ್ತಲೇ ಇಲ್ಲ...

ಹೀಗೆ, ಕನಕಗಿರಿಯ ಉತ್ಸವದ ಸಂಭ್ರಮ ಮುಗಿಲು ಮುಟ್ಟಿದಾಗ ಕನಕಗಿರಿಯ ಸುತ್ತಮುತ್ತಲು ಇರುವ ಐತಿಹಾಸಿಕ ಸ್ಮಾರಕಗಳ ಸ್ವಗತ ಮಾತ್ರ ಯಾರಿಗೂ ಕೇಳುತ್ತಲೇ ಇಲ್ಲ.ಅಬ್ಬರಿಸುತ್ತಿರುವ ವಾದ್ಯವೃಂದಗಳು, ಧ್ವನಿವರ್ಧಕಗಳ ಮಧ್ಯೆ ಇವುಗಳ ಆರ್ಥನಾದ ಯಾರಿಗೂ ಕೇಳಿಸುತ್ತಿಲ್ಲ ಮತ್ತು ಸ್ಮಾರಕಗಳ ಕಣ್ಣೀರು ಕಾಣುತ್ತಿಲ್ಲ.ಬಡವರ ತಿರುಪತಿ ಎಂದೇ ಕರೆಯುವ ಕನಕಗಿರಿಗೆ ತನ್ನದೇ ಆದ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಸಾಮಂತರ ಆಳ್ವಿಕೆ ಒಳಪಟ್ಟಿದ್ದರೂ ಕನಕಗಿರಿ ಎನ್ನುವ ಹೆಸರೇ ಇಲ್ಲಿ ಬಂಗಾರದ ಹೊಗೆ ಹಾಯುತ್ತಿತ್ತು ಎನ್ನುವುದನ್ನು ಸಾರಿ ಸಾರಿ ಹೇಳುತ್ತದೆ.ಇಂಥ ಮಹಾನ್ ಚರಿತ್ರೆಯನ್ನು ಹೊಂದಿರುವ ಕನಕಗಿರಿಯಲ್ಲಿ ಈಗ ಕೆಲ ವರ್ಷಗಳಿಂದ ನಾಲ್ಕು ಬಾರಿ ಉತ್ಸವವನ್ನು ಆಚರಿಸಲಾಗಿದೆ. ಉತ್ಸವದ ಸಂಭ್ರಮ ಮುಗಿಲು ಮುಟ್ಟುತ್ತಿದೆಯಾದರೂ ಸ್ಮಾರಕಗಳ ಸಂರಕ್ಷಣೆಗೆ ಪ್ರಯತ್ನ ನಡೆಯುತ್ತಲೇ ಇಲ್ಲ.

ಸಿಎಂ ಸಿದ್ದರಾಮಯ್ಯ ವಿಶ್ವಗುರು ಬಸವಣ್ಣರಂತೆ: ಸಚಿವ ಶಿವರಾಜ ತಂಗಡಗಿ

ನಶಿಸುತ್ತಿದ್ದೇವೆ:ವಿಜಯನಗರ ಸಾಮ್ರಾಜ್ಯದ ಸಾಮಂತರ ಅರಸರ ಕಾಲ ಸೇರಿದಂತೆ ಅದಕ್ಕಿಂತ ಪೂರ್ವ ಕಾಲದಲ್ಲಿ ಇಲ್ಲಿ ಸುಮಾರು 701 ಬಾವಿಗಳು, 701 ದೇವಾಲಯಗಳು ಇದ್ದವು ಎನ್ನುವ ಪ್ರತೀತಿ ಇದೆ. ಆದರೆ, ಈಗ ಅವುಗಳಲ್ಲಿ 35 ದೇವಾಲಯಗಳು, 20 ಬಾವಿಗಳು ಉಳಿದಿವೆ.ಹೀಗೆ ಕಾಣ ಸಿಗುವ ದೇವಾಲಯ, ಬಾವಿಗಳು ಸಂರಕ್ಷಣೆ ಇಲ್ಲದೆ ನಶಿಸುತ್ತಿವೆ. ಕೆಲವು ದೇವಾಲಯಗಳು ಜಾತಿ, ಧರ್ಮದ ಆಧಾರದಲ್ಲಿ ಕೆಲವೊಂದಿಷ್ಟು ಮಂದಿ ವಶಕ್ಕೆ ತೆಗೆದುಕೊಂಡು ಅವುಗಳ ಮೂಲಸ್ವರೂಪವನ್ನೇ ಮರೆಮಾಚಿದ್ದಾರೆ. ಅವು ಸುಣ್ಣಬಣ್ಣದಲ್ಲಿ ಮುಳುಗಿ ಹೋಗಿವೆ.ಕನಕಾಚಲಪತಿ ದೇವಸ್ಥಾನ, ಗಜಲಕ್ಷ್ಮಿ ದೇವಸ್ಥಾನ, ರೇಣುಕಾ ಯಲ್ಲಮ್ಮ ದೇವಸ್ಥಾನ ಸೇರಿದಂತೆ ಮೊದಲಾದವುಗಳು ರಾಜಬೀದಿಯಲ್ಲಿಯೇ ಇದ್ದರೂ ಅವುಗಳನ್ನು ಮೂಲಸ್ವರೂಪದಲ್ಲಿ ಸಂರಕ್ಷಣೆ ಮಾಡುವ ಕಾರ್ಯ ಆಗಬೇಕಾಗಿದೆ.

ಅರ್ಧದಷ್ಟು ಖರ್ಚು ಮಾಡಿ:ಉತ್ಸವಕ್ಕೆ ಕೋಟಿ ಕೋಟಿ ರುಪಾಯಿ ವೆಚ್ಚ ಮಾಡುತ್ತೀರಿ, ಆದರೆ, ನಮ್ಮನ್ನು ಸಂರಕ್ಷಣೆ ಮಾಡುವುದಕ್ಕೆ ಲಕ್ಷದ ಲೆಕ್ಕದಲ್ಲಾದರೂ ಹಣ ಖರ್ಚು ಮಾಡಿ, ಪ್ರತಿ ಉತ್ಸವದ ಸಂದರ್ಭದಲ್ಲಿಯೂ ಒಂದೊಂದು ಬಾವಿ, ದೇವಸ್ಥಾನ ಜೀರ್ಣೋದ್ಧಾರವನ್ನಾದರೂ ಮಾಡುವ ತೀರ್ಮಾನ ಮಾಡಿದರೆ ನಾವು ಸುರಕ್ಷಿತ ಮತ್ತು ಮುಂದಿನ ಪೀಳಿಗೆಗೂ ಸಾಕ್ಷಿಯಂತೆ ಇರುತ್ತೇವೆ ಎನ್ನುತ್ತವೆ ಸ್ವಾರಕಗಳು.

ಪ್ರತ್ಯೇಕ ಪ್ರಾಧಿಕಾರವಾಗಲಿ:ಕನಕಗಿರಿ ಐತಿಹಾಸಿಕ, ಪೌರಾಣಿಕವಾಗಿ ಸಮೃದ್ಧವಾಗಿದೆ. ಈ ಕಾರಣಕ್ಕಾಗಿಯೇ ಕಣ್ಣಿದ್ದವರು ಕನಕಗಿರಿ ನೋಡಬೇಕು ಎನ್ನುವ ಗಾದೆ ಇದೆ. ಇಂಥ ಕನಕಗಿರಿಯಲ್ಲಿ ಪುರಾತನ ಮತ್ತು ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಪ್ರತ್ಯೇಕ ಪ್ರಾಧಿಕಾರ ಮಾಡಬೇಕು. ಪುರಾತತ್ವ ಇಲಾಖೆಯ ಕಚೇರಿ ಪ್ರಾರಂಭಿಸಬೇಕು. ನಿಮ್ಮ ಉತ್ಸವದ ಅಬ್ಬರದಲ್ಲಿ ನಮ್ಮನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಎಂದು ಐತಿಹಾಸಿಕ ಸ್ಮಾರಕಗಳು ಅಲವತ್ತುಕೊಳ್ಳುತ್ತಿವೆ.

'ನಾವು ಮಕ್ಳು ಮರಿ ಈಗ ಹೊಟ್ಟೆತುಂಬಾ ಉಣ್ತಿವಮ್ಮ': ಸಚಿವೆ ಹೆಬ್ಬಾಳ್ಕರ್ ಗಲ್ಲ ಸವರಿ ಗ್ಯಾರಂಟಿಗೆ ಮೆಚ್ಚುಗೆ ಸೂಚಿಸಿದ ವೃದ್ಧೆ

ನಶಿಸುವ ಹಂತದಲ್ಲಿ ಸೂರ್ಯ ದೇಗುಲ:ಕನಕಗಿರಿ ಉತ್ಸವದ ಮುಖ್ಯ ವೇದಿಕೆಯ ಎದುರಿಗೆ ಸೂರ್ಯ ದೇವಾಲಯ ಇದೆ. ಅದು ನಶಿಸುವ ಹಂತ ತಲುಪಿದೆ. ಅಲ್ಲಿದ್ದ ದೇವರು ಈಗ ಇಲ್ಲ. ಇನ್ನು ದೇವಾಲಯವು ಶಿಥಿಲಗೊಳ್ಳುತ್ತಾ ಉತ್ಸವದ ವೇದಿಕೆಯ ಕಾರ್ಯಕ್ರಮವನ್ನು ನೋಡುತ್ತಾ ಕಣ್ಣೀರಿಡುವಂತೆ ಭಾಸವಾಗುತ್ತದೆ.

ಮ್ಯೂಜಿಯಂ:ಕನಕಗಿರಿ ಸುತ್ತಮುತ್ತಲು ಅಪಾರ ಶಿಲಾಶಾಸನ, ಮಂಟಪಗಳಿವೆ. ಕೆಲವೊಂದು ದೇವರ ಮೂರ್ತಿಗಳು ಎಲ್ಲೆಂದರಲ್ಲಿ ಬಿದ್ದು ಹೋಗುತ್ತಿವೆ. ಹೀಗಾಗಿ, ಇವುಗಳ ಸಂರಕ್ಷಣೆಗೆ ಮುಂದಾಗಬೇಕಾಗಿದೆ. ಇದಕ್ಕಾಗಿ ಮ್ಯೂಜಿಯಂ ನಿರ್ಮಾಣವಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.ಸ್ಮಾರಕಗಳು ನಶಿಸಿ ಹೋಗುತ್ತಿವೆ. ಬಾವಿಗಳು, ದೇವಾಲಯಗಳನ್ನು ಹೀಗೆಯೇ ನಿರ್ಲಕ್ಷಿಸಿದರೆ ಅವುಗಳು ಹೇಳುವುದಕ್ಕೂ ಇಲ್ಲದಂತಾಗುತ್ತವೆ. ಇವುಗಳ ಜೀರ್ಣೋದ್ಧಾರ ಮತ್ತು ಸಂರಕ್ಷಣೆಯಾಗಬೇಕು. ಪ್ರತ್ಯೇಕ ಪ್ರಾಧಿಕಾರ ರಚನೆಯಾಗಬೇಕು ಎನ್ನುತ್ತಾರೆ ಇತಿಹಾಸಕಾರ ಡಾ.ಶರಣಬಸಪ್ಪ ಕೋಲ್ಕಾರ

Follow Us:
Download App:
  • android
  • ios