ಕೇಜ್ರಿವಾಲ್ ಜಾಮೀನು ಬೆನ್ನಲ್ಲೇ ಬಿಡುಗಡೆಗಾಗಿ ಹೈಕೋರ್ಟ್ ಕದ ತಟ್ಟಿದ ಖಲಿಸ್ತಾನಿ ಉಗ್ರ ಅಮೃತ್ಪಾಲ್ ಸಿಂಗ್!
ಜೈಲುಪಾಲಾಗಿದ್ದ ಅರವಿಂದ್ ಕೇಜ್ರಿವಾಲ್ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಚುನಾವಣಾ ಪ್ರಚಾರಕ್ಕಾಗಿ ಜಾಮೀನು ಮಂಜೂರು ಮಾಡಲಾಗಿದೆ. ಇತ್ತ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಿರುವ ಖಲಿಸ್ತಾನಿ ಉಗ್ರ ಅಮೃತ್ಪಾಲ್ ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ನಾಮಪತ್ರ ಸಲ್ಲಿಕೆ ಹಾಗೂ ಚುನಾವಣಾ ಪ್ರಚಾರಕ್ಕಾಗಿ ಜೈಲಿನಿಂದ ಬಿಡುಗಡೆ ಮಾಡಲು ಮನವಿ ಮಾಡಿದ್ದಾನೆ.
ಚಂಡೀಘಡ(ಮೇ.10) ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ವಿಚಾರಣೆ ವಿಳಂಬವಾಗುತ್ತಿರುವ ಕಾರಣ ಚುನಾವಣಾ ಪ್ರಚಾರಕ್ಕೆ ಜಾಮೀನು ನೀಡುವಂತೆ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಪರುಸ್ಕರಿಸಿದ ಸುಪ್ರೀಂ ಕೋರ್ಟ್ ಇಂದು ಬೇಲ್ ನೀಡಿದೆ. ಇತ್ತ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಿರುವ ಖಲಿಸ್ತಾನಿ ಬೆಂಬಲಿತ ಉಗ್ರ ಅಮೃತ್ಪಾಲ್ ಸಿಂಗ್ ಇದೀಗ ಬಿಡುಗಡೆಗಾಗಿ ಹೈಕೋರ್ಟ್ ಕದ ತಟ್ಟಿದ್ದಾರೆ. ವಾರಿಸ್ ದೇ ಪಂಜಾಬ್ ಸಂಘಟನೆಯ ಮುಖ್ಯಸ್ಥ ಅಮೃತ್ಪಾಲ್ ಸಿಂಗ್, ಜೈಲಿನಿಂದಲೇ ಲೋಕಸಭಾ ಚುನಾವವಣೆಗೆ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಜೈಲಿನಿಂದ ಬಿಡುಗಡೆ ಮಾಡುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಕೇಜ್ರಿವಾಲ್ಗೆ ಚುನಾವಣಾ ಪ್ರಚಾರಕ್ಕೆ ಮಧ್ಯಂತರ ಜಾಮೀನು ನೀಡಿದಂತೆ, ಅಮೃತ್ಪಾಲ್ ಸಿಂಗ್ಗೂ ಬಿಡುಗಡೆ ಭಾಗ್ಯ ಸಿಗಲಿದೆಯಾ ಅನ್ನೋ ಚರ್ಚೆ ಶುರುವಾಗಿದೆ.
ಅಸ್ಸಾಂನ ದಿಬ್ರುಘಡ ಜೈಲಿನಲ್ಲಿರುವ ಅಮೃತ್ಪಾಲ್ ಸಿಂಗ್, ಪಂಜಾಬ್ನ ಖಡೊರ್ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಹಾಗೂ ಚುನಾವಣಾ ಪ್ರಚಾರಕ್ಕಾಗಿ ಕನಿಷ್ಠ 7 ದಿನಗಳ ಜಾಮೀನು ನೀಡುವಂತೆ ಅಮೃತ್ಪಾಲ್ ಸಿಂಗ್ ವಕೀಲು ಅರ್ಜಿ ಸಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಜೈಲಿನಲ್ಲಿರುವ ಖಲಿಸ್ತಾನಿ ಉಗ್ರ ಅಮೃತ್ ಪಾಲ್ ಸಿಂಗ್ ಸ್ಪರ್ಧೆ!
ಮೇ.14ರಂದು ನಾಮಪತ್ರ ಸಲ್ಲಿಕೆಗೆ ಕೊನಯೆ ದಿನವಾಗಿದೆ. ಹೀಗಾಗಿ ತಕ್ಷಣವೇ ಅರ್ಜಿ ಪುರಸ್ಕರಿಸಿ ಬಿಡುಗಡೆ ಮಾಡುವಂತೆ ಕೋರಿದೆ. ಇದೇ ವೇಳೆ ಪಂಜಾಬ್ ಸರ್ಕಾರ, ಜೈಲು ಅಧಿಕಾರಿಗಳಿಗೆ ಕೋರ್ಟ್ ಸ್ಪಷ್ಟ ಸೂಚನೆ ನೀಡಿ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ನಾಮಪತ್ರ ಸಲ್ಲಿಕೆ ಮೊದಲು ಪಾಸ್ಪೋರ್ಟ್ ಫೋಟೋ ತೆಗೆಯಬೇಕಿದೆ. ಹೊಸ ಬ್ಯಾಂಕ್ ಖಾತೆ ತೆರೆಯಬೇಕು. ಹೀಗಾಗಿ ಜೈಲಿನಿಂದ ಬಿಡುಗಡೆ ಅನಿವಾರ್ಯವಾಗಿದೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇತ್ತ ಅಮೃತ್ಪಾಲ್ ಸಿಂಗ್ ತಂದೆ ತರ್ಸೀಮ್ ಸಿಂಗ್ ಈಗಾಗಲೇ ಪಂಜಾಬ್ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅಮೃತ್ಪಾಲ್ ಸಿಂಗ್ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಈ ಕುರಿತು ಪಂಜಾಬ್ ಪೊಲೀಸರು ಹಾಗೂ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಪತ್ರ ಬರೆದಿದ್ದರು. ಈ ಪತ್ರದ ಬೆನ್ನಲ್ಲೇ ಚುನಾವಣಾ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಮೃತ್ಪಾಲ್ ಸಿಂಗ್ ನಾಮಪತ್ರ ಸಲ್ಲಿಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ವಿಷಯವನ್ನು ಅರ್ಜಿಯಲ್ಲಿ ಉಲ್ಲೇಖಿಸಿರುವ ಅಮೃತ್ಪಾಲ್ ಸಿಂಗ್, ಚುನಾವಣಾಧಿಕಾರಿಗಳ ಸೂಚನೆ ಇದ್ದರೂ ಪಂಜಾಬ್ ಸರ್ಕಾರ ವಿಳಂಬ ಧೋರಣೆ ಮಾಡುತ್ತಿದೆ ಎಂದು ಅಕ್ಷೇಪಿಸಿದ್ದಾರೆ.
ಶ್ರೀ ಖಡೊರ್ ಸಾಹೀಬ್ ಕ್ಷೇತ್ರಕ್ಕೆ ಜೂನ್ 1ರಂದು ಚುನಾವಣೆ ನಡೆಯಲಿದೆ. ಚುನಾವಣಾ ಪ್ರಚಾರ, ನಾಮಪತ್ರ ಸಲ್ಲಿಕೆ ಸೇರಿದಂತೆ ಕನಿಷ್ಠ 7 ದಿನ ಜಾಮೀನು ನೀಡಬೇಕು ಎಂದು ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಅಬಕಾರಿ ನೀತಿ ಅಕ್ರಮದಲ್ಲಿ ಜೈಲು ಪಾಲಾಗಿದ್ದ ಅರವಿಂದದ್ ಕೇಜ್ರಿವಾಲ್ಗೆ ಸುಪ್ರೀಂ ಕೋರ್ಟ್ ಚುನಾವಣಾ ಪ್ರಚಾರಕ್ಕಾಗಿ ಜಾಮೀನು ನೀಡಿದೆ. ಹೀಗಾಗಿ ಅಮೃತ್ಪಾಲ್ ಸಿಂಗ್ ಜಾಮೀನು ಅರ್ಜಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ತಪ್ಪಿಸಲು ಯತ್ನಿಸಿದ ಗ್ಯಾಂಗ್ಸ್ಟರ್ ಅಮೃತ್ಪಾಲ್ ಸಿಂಗ್ ಹತ್ಯೆಗೈದ ಪಂಜಾಬ್ ಪೊಲೀಸ್!