ಪ್ರಯೋಗಾತ್ಮಕ ಚಿತ್ರಗಳಿಗೆ ಜೈ ಎಂದ ದರ್ಶನ್
ಹೆಚ್ಚಿನವರು ಮಂಗಳೂರಿನ ಕಡೆಯವರೇ ಸೇರಿಕೊಂಡು ಮಾಡಿರುವ ಚಿತ್ರವದು. ಕಲಾವಿದರ ಸಂಘದಲ್ಲಿ ಅದರ ಆಡಿಯೋ ಬಿಡುಗಡೆ ಕಾರ್ಯಕ್ರಮ. ಅದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಅಥಿತಿ. ಚಿತ್ರದ ಹೆಸರು ‘ಅನುಕ್ತ’. ಇದರ ಅರ್ಥ ಹೇಳದೇ ಉಳಿದಿರುವ ಕತೆ.
ಡಿವಿಡಿಗಳ ಅನಾವರಣವಾಗುತ್ತದೆ. ಆದರೆ ಇಲ್ಲಿ ಚಿತ್ರತಂಡ ದೊಡ್ಡ ಪೆನ್ಡ್ರೈವ್ ರೂಪಕವನ್ನು ಅನಾವರಣ ಮಾಡುವ ಮೂಲಕ ತಾವು ಅಪ್ಗ್ರೇಡ್ ಆಗಿದ್ದೇವೆ ಎಂದು ತೋರಿಸಿಕೊಟ್ಟಿತು. ಮೊದಲಿಗೆ ಇಡೀ ಚಿತ್ರ ತಂಡ ಚಿತ್ರದ ಬಗ್ಗೆ ಮಾತಾಡಿಕೊಂಡಿತು. ಆಮೇಲೆ ಮಾತಿಗಳಿದವರು ದರ್ಶನ್.
‘ಸಾಮಾನ್ಯ ಕನ್ನಡ ಪ್ರೇಕ್ಷಕ ಪ್ರಯೋಗಾತ್ಮಕ ಸಿನಿಮಾ ನೋಡಬೇಕು ಎಂದರೆ ತಮಿಳು ಕಡೆ ಮುಖ ಮಾಡುತ್ತಾನೆ. ಡಮಾಲ್ ಡಿಮೀಲ್ ಎಂದು ಆ್ಯಕ್ಷನ್ ಬೇಕು ಎಂದರೆ ತೆಲುಗು ಚಿತ್ರಗಳನ್ನು ನೋಡುತ್ತಾನೆ. ವಿದೇಶಿ ಲೊಕೇಷನ್ ನೋಡಬೇಕು ಎಂದರೆ ಬಾಲಿವುಡ್ ಕಡೆ ಕಣ್ಣು ಹೊರಳಿಸುತ್ತಾನೆ. ಅಯ್ಯೋ ನೋಡಬೇಕಲ್ಲಾ ಎಂದು ಕನ್ನಡ ಸಿನಿಮಾಕ್ಕೆ ಬರುತ್ತಾನೆ. ಇದು ನಮ್ಮ ಸ್ಥಿತಿ. ನಾವು ನಮ್ಮ ಭಾಷೆಯನ್ನು ಬೇರೆಯವರಿಗೆ ಕಲಿಸದೇ ಅವರ ಭಾಷೆಯಲ್ಲೇ ವ್ಯವಹಾರ ಮಾಡುತ್ತೇವೆ’ ಎಂದು ಅರೆ ಕ್ಷಣ ಬೇಸರ ವ್ಯಕ್ತಪಡಿಸಿದರೂ ಮುಂದೆ ನಮ್ಮಲ್ಲಿ ಬರುತ್ತಿರುವ ಪ್ರಯೋಗಾತ್ಮಕ ಚಿತ್ರಗಳ ಬೆನ್ನಿಗೆ ನಿಂತರು.
‘ನಮ್ಮಲ್ಲಿ ಈಗ ಟ್ರೆಂಡ್ ಬದಲಾಗುತ್ತಿದೆ. ಬೇರೆ ಯಾವ ಭಾಷೆಗಳಿಗೂ ಕಡಿಮೆ ಇಲ್ಲದಂತೆ ನಮ್ಮಲ್ಲಿ ಸಾಕಷ್ಟು ಪ್ರಯೋಗಾತ್ಮಕ ಚಿತ್ರಗಳು ಬರುತ್ತಿವೆ. ಇದು ನಮ್ಮ ಚಿತ್ರರಂಗಕ್ಕೆ ಪ್ಲಸ್ ಪಾಯಿಂಟ್. ಇದೇ ರೀತಿ ಚಿತ್ರಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿ. ಜನರು ಆಶೀರ್ವಾದ ಮಾಡುತ್ತಾರೆ’ ಎಂದು ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದರು.
ಅಶ್ವಥ್ ಸ್ಯಾಮುಯಲ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರಕ್ಕೆ ಬಂಡವಾಳ ಹೂಡಿರುವುದು ಹರೀಶ್ ಬಂಗೇರ. ನೋಬಿನ್ ಪಾಲ್ ಸಂಗೀತ ಚಿತ್ರಕ್ಕಿದ್ದು ಒಂದು ಸಾಂಗ್ ಅನ್ನು ಚಂದನ್ಶೆಟ್ಟಿ ಹಾಡಿದ್ದಾರೆ.