ರಾಕ್ ಲೈನ್ ವೆಂಕಟೇಶ್ ಸ್ಪೂರ್ತಿಯಿಂದ ಹೀರೊ ಆದ ಧನಂಜಯ್ ಅತ್ರೆ
ಒಬ್ಬರಂತೆಯೇ ಒಬ್ಬರಾಗದಿದ್ದರೂ, ಮತ್ತೊಬ್ಬರ ಸ್ಫೂರ್ತಿಯಿಂದಾಗಿಯೇ ಕಲಾವಿದರಾಗಿ ಬೆಳ್ಳಿತೆರೆಗೆ ಕಾಲಿಟ್ಟವರ ಸಂಖ್ಯೆ ಸಾಕಷ್ಟಿದೆ.
ಕಿರುತೆರೆಯೊಂದಿಗೆ ಬಣ್ಣದ ಲೋಕಕ್ಕೆ ಬಂದವರು ಈಗ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ. ಅವರು ನಾಯಕನಾಗಿ ಅಭಿನಯಿಸಿರುವ ‘ಕರ್ಷಣಂ’ ಹೆಸರಿನ ಚಿತ್ರ ಇದೇ ವಾರ ತೆರೆ ಕಾಣುತ್ತಿದೆ. ಅವರು ಕಿರುತೆರೆಗೆ ಬಂದಿದ್ದು,
ಅಲ್ಲಿಂದ ಹಿರಿತೆರೆಯಲ್ಲಿ ನಾಯಕನಾಗಿರುವುದು ಎಲ್ಲದಕ್ಕೂ ನಿರ್ಮಾಪಕ, ನಟ ರಾಕ್ಲೈನ್ ವೆಂಕಟೇಶ್ ಕಾರಣ. ಅವರೇ ಸ್ಫೂರ್ತಿ ಎನ್ನುವುದು ವಿಶೇಷ.
‘ನಾನೊಬ್ಬ ಉದ್ಯಮಿ. ಓದು ಮುಗಿಸಿ, ಮುಂದೇನು ಎನ್ನುವಾಗ ಕೈಗಾರಿಕೋದ್ಯಮದಲ್ಲಿ ತೊಡಗಿಸಿಕೊಂಡೆ. ಅಲ್ಲಿ ಸಕ್ಸೆಸ್ ಸಿಕ್ಕಿತು. ಇನ್ನೇನಾದರೂ ಮಾಡ್ಬೇಕು ಅಂದಾಗ ಆಸಕ್ತಿ ಹುಟ್ಟಿಸಿದ್ದು ಸಿನಿಮಾ ಜಗತ್ತು. ಆ ವೇಳೆಗಾಗಲೇ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಒಳ್ಳೆಯ ಸ್ನೇಹಿತರಾಗಿದ್ದರು. ಅವರು ಸಿನಿಮಾ ಜಗತ್ತಿನ ಆಳ-ಅಗಲ ಏನು ಅಂತ ಹೇಳಿದರು. ನಟನಾಗಬೇಕಾದ್ರೆ, ಕೆಳಹಂತದಿಂದಲೇ ಜರ್ನಿ ಶುರುವಾಗಬೇಕು ಅಂತ ಸಲಹೆ ಕೊಟ್ಟರು. ಹಾಗಾಗಿ ಕಿರುತೆರೆಗೆ ಹೋದೆ. ಅಲ್ಲಿಂದೀಗ ಹಿರಿತೆರೆಗೆ ಬಂದಿದ್ದೇನೆ. ಈ ಎಲ್ಲಕ್ಕೂ ಕಾರಣ ರಾಕ್ಲೈನ್ ವೆಂಕಟೇಶ್’ ಅಂತಾರೆ ನಟ ಧನಂಜಯ್ ಅತ್ರೆ.
ಧನಂಜಯ್ ಅತ್ರೆ ಅವರ ಕನಸಿನ ಕೂಸು ಕರ್ಷಣಂ. ಈ ಚಿತ್ರಕ್ಕೆ ಅವರೇ ನಿರ್ಮಾಪಕರು. ಜತೆಗೆ ಹೀರೋ. ಅವರ ಪತ್ನಿ ಗೌರಿ ಅತ್ರೆ ಈ ಚಿತ್ರಕ್ಕೆ ಕತೆ ಬರೆದಿದ್ದಾರೆ. ಕಿರುತೆರೆ ನಟಿ ಅನುಷಾ ಈ ಚಿತ್ರದ ನಾಯಕಿ.