ಜನತಾ 'ಜನಾರ್ಧನ' ಮೋದಿ ಪರ: ಪ್ರಧಾನಿಯಾಗಲಿ ಎಂದು 'ಪೂಜಾರಿ' ವರ!
ಈ ಬಾರಿಯೂ ಮೋದಿಯೇ ಪ್ರಧಾನಿ ಎಂದ ಜನಾರ್ಧನ ಪೂಜಾರಿ| 'ಇನ್ನೂ ಎರಡು ಚುನಾವಣೆಯಲ್ಲಿ ಮೋದಿಯನ್ನು ಸೋಲಿಸಲು ಸಾಧ್ಯವಿಲ್ಲ'| ಅಚ್ಚರಿ ಮೂಡಿಸಿದ ಹಿರಿಯ ಕಾಂಗ್ರೆಸ್ ನಾಯಕನ ಮಾತು| ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟಿಲ್ ಗೆಲುವು ಶತಸಿದ್ಧ ಎಂದ ಪೂಜಾರಿ| ಮಂಡ್ಯದಲ್ಲಿ ಸುಮಲತಾ ಸೋಲಿಸಲು ಯಾರಿದಂಲೂ ಸಾಧ್ಯ ಇಲ್ವಂತೆ| 'ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಜನ ಪಾಠ ಕಲಿಸಲಿದ್ದಾರೆ'|
ಮಂಗಳೂರು(ಮಾ.24): ಶತಾಯಗತಾಯ ನರೇಂದ್ರ ಮೋದಿ ಅವರಿಗೆ ಪ್ರಧಾನಿ ಪಟ್ಟ ಸಿಗದಂತೆ ಮಾಡಲು ಕಾಂಗ್ರೆಸ್ ಹಗಲಿರುಳು ಎರಡನ್ನೂ ಒಂದು ಮಾಡಿ ಕಾರ್ಯೋನ್ಮುಖವಾಗಿದೆ. ಈ ಮಧ್ಯೆ ಹಿರಿಯ ಕಾಂಗ್ರೆಸ್ ನಾಯಕರೇ ನರೇಂದ್ರ ಮೋದಿ ಅವರೇ ಮುಂದಿನ ಪ್ರಧಾನಿ ಎಂದು ಹೇಳುತ್ತಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿ, ಈ ಬಾರಿಯೂ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಮುಂಬರುವ ಇನ್ನೂ ಎರಡು ಚುನಾವಣೆಗಳಲ್ಲಿ ಮೋದಿ ಅವರನ್ನು ಸೋಲಿಸುವುದು ಅಸಾಧ್ಯದ ಮಾತು ಎಂದೂ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
"
ಇನ್ನು ಮಂಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟಿಲ್ ಗೆಲ್ಲಲಿದ್ದಾರೆ ಎಂದ ಪೂಜಾರಿ, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರ ಕುಟುಂಬ ರಾಜಕಾರಣ ಹೇಸಿಗೆ ಬರುವಂತಿದ್ದು, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪೂಜಾರಿ ಹರಿಹಾಯ್ದಿದ್ದಾರೆ.