Asianet Suvarna News Asianet Suvarna News

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ: ಆರೋಪಿಗಳ ಸುಳಿವು ಕೊಟ್ಟ ಚಿಕ್ಕಮಗಳೂರಿನ ಮುಜಮಿಲ್ ಶರೀಫನ ಸಿಮ್ ಕಾರ್ಡ್!

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್‌ ಪ್ರಕರಣದ ಪ್ರಮುಖ ಆರೋಪಿಗಳಿಗೆ ಬಾಂಬ್‌ ತಯಾರಿಕೆಗೆ ಹಾಗೂ ಅವರ ಸಂಚಾರಕ್ಕೆ ಸಿಮ್‌ ಕೊಟ್ಟ ಮುಜಾಮಿಲ್ ಶರೀಫ್‌ ಚಿಕ್ಕಮಗಳೂರು ನಗರದವನಾಗಿದ್ದಾನೆ.

Chikkamagaluru Muzammil Sharif SIM card used for Bengaluru Rameswaram cafe bomb blast sat
Author
First Published Mar 29, 2024, 6:33 PM IST

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್ 
ಚಿಕ್ಕಮಗಳೂರು (ಮಾ.29): 
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್‌ ಪ್ರಕರಣದ ಪ್ರಮುಖ ಆರೋಪಿಗಳಿಗೆ ಬಾಂಬ್‌ ತಯಾರಿಕೆಗೆ ಹಾಗೂ ಅವರ ಸಂಚಾರಕ್ಕೆ ಸಿಮ್‌ ಕೊಟ್ಟ ಮುಜಾಮಿಲ್ ಶರೀಫ್‌ ಚಿಕ್ಕಮಗಳೂರು ನಗರದವನಾಗಿದ್ದಾನೆ. 

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಚಿಕ್ಕಮಗಳೂರಿನ ಪ್ರಮುಖ ಸಂಚುಕೋರನನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದ ಜನರು ಬೆಚ್ಚಿ ಬಿದ್ದಿದ್ದಾರೆ. ಚಿಕ್ಕಮಗಳೂರು ನಗರದ ಅಯ್ಯಪ್ಪ ನಗರ (ದುಬೈ ನಗರ) ಬಡಾವಣೆಯ ಮುಜಮಿಲ್ ಶರೀಫ್‌ನನ್ನು ಎನ್ಐಎ ಬಂಧಿಸಿದ ಸುದ್ದಿ ಗೊತ್ತಾಗುತ್ತಿದ್ದಂತೆ ಜನರಲ್ಲಿ ಆತಂಕ ಮನೆಮಾಡಿದೆ. ಈ ಮೂಲಕ ಬಾಂಬ್ ಬ್ಲಾಸ್ಟ್‌ ನಂಟು ಕಾಫಿನಾಡಿಗೂ ಅಂಟಿರುವುದು ಬಹಿರಂಗವಾಗಿದೆ. ಸಂಚುಕೋರ ಮುಜಾಮಿಲ್ ನಗರದ ನಡುವಿನ ಬಡಾವಣೆಯ ನಿವಾಸಿಯೇ ಆಗಿರುವುದು ಸ್ಥಳೀಯ ಪೊಲೀಸರು ಹಾಗೂ ಗುಪ್ತಚರ ಇಲಾಖೆಯನ್ನೂ ಚಿಂತೆಗೀಡು ಮಾಡಿದೆ.

Breaking: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಿಸಿದವರ ಅಸಲಿ ಫೋಟೋ ಬಹಿರಂಗ; ಸುಳಿವು ಕೊಟ್ಟರೆ 10 ಲಕ್ಷ ರೂ. ಬಹುಮಾನ

ಮುಜಾಮಿಲ್ಗೆ ಸೇರಿದ ಸಿಮ್ ಬಳಕೆ:  ಬೆಂಗಳೂರಿನ ರಾಮೇಶ್ವರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾದ  ತೀರ್ಥಹಳ್ಳಿಯ ಅಬ್ದುಲ್ ಮಥೀನ್ ಅಹ್ಮದ್ ತಾಹ ಮತ್ತು ಮುಸಾವೀರ್ ಹುಸೇನ್ ಶಾಜೀಬ್ ಇಬ್ಬರೂ ಚಿಕ್ಕಮಗಳೂರಿನ ಬಂಧಿತ ಮುಜಮಿಲ್ ಶರೀಫ್ ಹೆಸರಿನಲ್ಲಿರುವ ಮೊಬೈಲ್ ಸಿಮ್‌ ಅನ್ನು ಸಂವಹನಕ್ಕಾಗಿ ಬಳಿಸಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮುಜಾಮಿಲ್‌ನನ್ನು ಬಂಧಿಸಲು ಎನ್ಐಎಗೆ ಈ ಸಿಮ್ ಪ್ರಮುಖ ಸುಳಿವು ನೀಡಿದೆ ಎಂದು ಹೇಳಲಾಗುತ್ತಿದೆ. ಬಾಂಬ್ ತಯಾರಿಸಲು ಕೆಲವು ಕಚ್ಛಾ ವಸ್ತುಗಳನ್ನು ಮುಜಾಮಿಲ್ ಶಂಕಿತರಿಗೆ ಪೂರೈಸಿದ್ದನು. ಜೊತೆಗೆ, ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸಿದ್ದ ಎನ್ನುವುದು ಎನ್ಐಎ ತನಿಖೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ. 

ಚಿಕ್ಕಮಗಳೂರಿನ ಮುಜಾಮಿಲ್ ಶರೀಫ್ ಕಳಸಾ ಮೂಲದವನಾಗಿದ್ದು, ಚಿಕ್ಕಮಗಳೂರಿಗೆ ಬಂದು ನೆಲೆಸಿದ್ದನು. ಚಿಕ್ಕಮಗಳೂರಿನಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿಕೊಂಡಿದ್ದು ನಂತರ ಬೆಂಗಳೂರಿಗೆ ತೆರಳಿ ಅಲ್ಲಿ ಚಿಕನ್ ಕೌಂಟಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಆತನ ಸಹೋದರಿ ಮತ್ತು ತಾಯಿ ನಗರದ ಅಯ್ಯಪ್ಪ ನಗರ ಬಡಾವಣೆಯಲ್ಲೇ ವಾಸಿಸುತ್ತಿದ್ದಾರೆ. ಎನ್ಐಎ ಅಧಿಕಾರಿಗಳು ಈ ಮನೆಯ ಮೇಲೂ ದಾಳಿ ನಡೆಸಿ ಹಲವು ಮೊಬೈಲ್ ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಲೆನಾಡಿನ ಭಯೋತ್ಪಾದಕ  ಪ್ರಕರಣ :  ಮಲೆನಾಡಿಗೆ ಭಯೋತ್ಪಾದಕ ಚಟುವಟಿಕೆಗಳ ನಂಟು ಬೆಸೆದುಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿದ್ದಾರೆ. ನಮ್ಮದೇ ಜಿಲ್ಲೆ ಕೊಪ್ಪದಲ್ಲಿ ಹಿಂದೆ ಬಂದೂಕು ಮತ್ತು ಬಾಂಬ್ ತಯಾರಿಸುವ ತರಬೇತಿ ನೀಡಿದ್ದ ಪ್ರಕರಣ ಇರಬಹುದು. ತೀರ್ಥಹಳ್ಳಿ ಕುಕ್ಕರ್ ಬಾಂಬ್ ತಯಾರಿಕೆಗೆ ತರಬೇತಿ ನೀಡಿದ್ದು ಇರಬಹುದು. ಕೊಡಗಿನಲ್ಲಿ ತರಬೇತಿ ಪಡೆದಿದ್ದಿರಬಹುದು ಇದಕ್ಕೆ ಸಂಬಂಧಿಸಿದ ಸಾಕಷ್ಟು ಮಾಹಿತಿ ಸರ್ಕಾರದ ಬಳಿ ಇರುತ್ತದೆ ಇದೆಲ್ಲವನ್ನೂ ಪರಿಗಣಿಸಿ ಸರ್ಕಾರ, ಪೊಲೀಸ್ ಇಲಾಖೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಒತ್ತಾಯಗಳು ಕೇಳಿಬಂದಿವೆ.

ರಾಮೇಶ್ವರಂ ಕೆಫೆ ಸ್ಪೋಟಕ್ಕೆ ಬಾಂಬ್‌ ತಯಾರಿಸಿದ್ದ ಮುಜಾಮಿಲ್ ಶರೀಫ್‌ 7 ದಿನ ಎನ್‌ಐಎ ವಶಕ್ಕೆ

ಮುಜಮಿಲ್ ಶರೀಪ್‌ನನ್ನು 7 ದಿನ ಎನ್‌ಐಎ ವಶಕ್ಕೊಪ್ಪಿಸಿದ ಕೋರ್ಟ್‌: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಆರೋಪಿಗಳ ಸಹಚರ ಮುಜಾಮಿಲ್ ಷರೀಫ್ ಬಾಂಬ್‌ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ಅಲ್ಲದೆ ಉಳಿದ ಆರೋಪಿಗಳ ಜೊತೆ ಸಂಪರ್ಕದ ಹೊಂದಿದ್ದ ಬಗ್ಗೆಯೂ ಎನ್‌ಐಎ ಮಾಹಿತಿ ಸಂಗ್ರಹ ಮಾಡಿತ್ತು. ಈತನನ್ನು ನಿನ್ನೆ ಬಂಧಿಸಿದ ರಾಷ್ಟ್ರೀಯ ತನಿಖಾ ದಳ ಪೊಲೀಸರು ಶುಕ್ರವಾರ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ಬಗ್ಗೆ ವಿಚಾರಣೆ ಮಾಡಿದ ನ್ಯಾಯಾಲಯದ ಆರೋಪಿ ಮುಜಾಮಿಲ್ ಶರೀಫ್‌ನನ್ನು 7 ದಿನಗಳ ಕಾಲ ಎನ್‌ಐಎ ವಶಕ್ಕೆ ಪಡೆಯುವಂತೆ ಕೋರ್ಟ್‌ ಆದೇಶ ಹೊರಡಿಸಿದೆ.

Follow Us:
Download App:
  • android
  • ios