Asianet Suvarna News Asianet Suvarna News

ಮೋದಿ ಸರ್ಕಾರದ ಹಿಂದಿನ 6 ಬಜೆಟ್‌ ಹೇಗಿದ್ದವು?

ಈ ಬಾರಿಯ ಬಹು ನಿರೀಕ್ಷಿತ ಕೇಂದ್ರ ಬಜೆಟ್‌ ಇದೇ ಫೆ.1ರಂದು ಮಂಡನೆಯಾಗಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಡಿಸುತ್ತಿರುವ 8ನೇ ಬಜೆಟ್‌ (2019ರ ಮಧ್ಯಂತರ ಬಜೆಟ್‌ ಸೇರಿದಂತೆ) ಹಾಗೂ ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುತ್ತಿರುವ 2ನೇ ಬಜೆಟ್‌. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ಈ ಹಿಂದಿನ ಬಜೆಟ್‌ ಹೇಗಿದ್ದವು, ಅವುಗಳ ಆದ್ಯತೆ ಏನಾಗಿತ್ತು ಎಂಬ ಕಿರು ಹಿನ್ನೋಟ ಇಲ್ಲಿದೆ.

Union Budget 2020 6 Budget Of PM Narendra Modi Period
Author
Bangalore, First Published Jan 30, 2020, 12:23 PM IST

2019-20| ಜುಲೈ 5, 2019| 27. 86 ಲಕ್ಷ ಕೋಟಿ ರೂಪಾಯಿ ಬಜೆಟ್ ಗಾತ್ರ| ಆರ್ಥಿಕತೆ .5 ಲಕ್ಷ ಕೋಟಿಗೇರಿಸುವ ಗುರಿ

ಹಣಕಾಸು ಮಂತ್ರಿಯಾಗಿ 2019 ಜುಲೈ 5ರಂದು ಮೊದಲ ಬಜೆಟ್‌ ಮಂಡಿಸಿದ್ದ ನಿರ್ಮಲಾ ಸೀತಾರಾಮನ್‌ ಬ್ರಿಟಿಷ್‌ ವಸಹಾತು ಸಂಪ್ರದಾಯವಾದ ಬ್ರೀಫ್‌ಕೇಸ್‌ ಸಂಪ್ರದಾಯ ಮುರಿದು, ಸಾಂಪ್ರದಾಯಿಕ ಬಹೀ-ಖಾತಾ (ಭಾರತದಲ್ಲಿ ವ್ಯಾಪಾರಿಗಳು ಆಯವ್ಯಯ ಲೆಕ್ಕಪುಸ್ತಕಗಳನ್ನು ಇಟ್ಟುಕೊಳ್ಳುವ ಚೀಲ) ಎಂಬುದಾಗಿ ಕರೆಯಲ್ಪಡುವ ಕೆಂಪು ಚೀಲದೊಂದಿಗೆ ಸಂಸತ್ತಿಗೆ ಆಗಮಿಸಿದ್ದರು. ಇದು ಈ ಬಜೆಟ್‌ನ ಪ್ರಮುಖ ವಿಶೇಷತೆಗಳಲ್ಲಿ ಒಂದಾಗಿತ್ತು. ಈ ಬಜೆಟ್‌ನಲ್ಲಿ ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಅಂದರೆ 2024ರ ವೇಳೆಗೆ ದೇಶದ ಆರ್ಥಿಕತೆಯನ್ನು 5 ಲಕ್ಷ ಕೋಟಿ ರು.ಗೆ ಏರಿಸುವ ಬೃಹತ್‌ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸದೆ ಯಥಾಸ್ಥಿತಿಯನ್ನು ಕಾಪಾಡಿಕೊಂಡು, ಕೋಟಿಗಟ್ಟಲೆ ಆದಾಯ ಇರುವ ಶ್ರೀಮಂತರಿಗೆ ಸರ್ಚಾಚ್‌ರ್‍ ಬರೆ ಎಳೆಯಲಾಗಿತ್ತು. ಡಿಜಿಟಲ್‌ ಪಾವತಿಗೆ ಪ್ರೋತ್ಸಾಹಿಸಲು ವಿಧಿಸಲಾಗುತ್ತಿದ್ದ ಎಲ್ಲಾ ಶುಲ್ಕವನ್ನೂ ರದ್ದು ಮಾಡಿ, ಬ್ಯಾಂಕುಗಳ ಬಲವರ್ಧನೆಗೆ 70 ಸಾವಿರ ಕೋಟಿ ಮೀಸಲಿಡಲಾಗಿತ್ತು. ಹಾಗೂ ಶೂನ್ಯ ಬಂಡವಾಳ ಕೃಷಿಗೆ ಒತ್ತು ನೀಡಲಾಗಿತ್ತು. ಆದರೆ ರಕ್ಷಣಾ ಇಲಾಖೆಗೆ ಹೇಳಿಕೊಳ್ಳುವಂಥ ಕೊಡುಗೆ ಇರಲಿಲ್ಲ. ಹಾಗೂ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಹೆಚ್ಚುವರಿ 1 ಅಬಕಾರಿ ಸುಂಕ, ರಸ್ತೆ ಸೆಸ್‌ ಮತ್ತು ಇನ್‌ಫ್ರಾಸ್ಟ್ರಕ್ಚರ್‌ ಸೆಸ್‌ ಘೋಷಿಸಲಾಗಿತ್ತು.

ಬಜೆಟ್‌ನಿಂದ ಯಾರಿಗೆ ಏನು ಬೇಕು? ವಿತ್ತ ಮಂತ್ರಿಯಿಂದ ಜಾದೂ ನಿರೀಕ್ಷೆ!

2018-19| ಫೆ.1, 2018| 24.42 ಲಕ್ಷ ಕೋಟಿ ರೂಪಾಯಿ ಬಜೆಟ್ ಗಾತ್ರ| ಕೃಷಿ ಕೇಂದ್ರಿತ ಸುಧಾರಣಾವಾದಿ ಬಜೆಟ್‌

ಅಂದಿನ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಮಂಡಿಸಿದ್ದ ಈ ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ವರ್ಧನೆಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಈ ಬಜೆಟ್‌ನಲ್ಲಿ ರೈತರಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದಲ್ಲದೆ, ಸಾವಯವ ಕೃಷಿಗಾಗಿಯೇ ಬಜೆಟ್‌ನಲ್ಲಿ 200 ಕೋಟಿ ಮೀಸಲಿಡಲಾಗಿತ್ತು. ಮೂಲಭೂತ ಸೌಕರ‍್ಯ ಮತ್ತು ಕೃಷಿ ಕ್ಷೇತ್ರದ ಮಾರುಕಟ್ಟೆಯ ಬಲವರ್ಧನೆಗೆ 2000 ಕೋಟಿ ಮೀಸಲಿಡಲಾಗಿತ್ತು. ರೈತರ ಬೆಳೆಗಳಿಗೆ ಗ್ಯಾರಂಟಿ ಬೆಲೆ, ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರಿಗೆ ಸಿಹಿ ಸುದ್ದಿ ನೀಡಿದ್ದ ಬಜೆಟ್‌ ಇದು. ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಬೆಲೆ ದಿಢೀರ್‌ ಕುಸಿತ- ಏರಿಕೆ ತಪ್ಪಿಸಲು 70ರ ದಶಕದಲ್ಲಿ ಜಾರಿಯಾಗಿದ್ದ ಕ್ಷೀರಕ್ರಾಂತಿ ರೀತಿ ‘ತರಕಾರಿ ಕ್ರಾಂತಿ’ ಜಾರಿ ಮಾಡಲಾಯ್ತು. ಆರೋಗ್ಯ ಕ್ಷೇತ್ರಕ್ಕೆ ಬಂಪರ್‌ ಘೋಷಣೆ ಮಾಡಲಾಗಿತ್ತು. ದೇಶದ 1.5 ಲಕ್ಷ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಬಲಪಡಿಸಲು 1200 ಕೋಟಿ ರು.ನಷ್ಟುಬೃಹತ್‌ ಹಣ ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು. ಇದೇ ವೇಳೆ, 10 ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರು. ಆರೋಗ್ಯ ವಿಮೆ ಒದಗಿಸುವ ‘ಮೋದಿಕೇರ್‌’ ಯೋಜನೆಯನ್ನು ಜಾರಿ ಮಾಡಲಾಯಿತು. ಹಾಗೆಯೇ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ, ಗ್ರಾಮೀಣ ಭಾರತದ ಅಭಿವೃದ್ಧಿಗೆ ಸಹಾಯಕವಾಗುವ, ಶಿಕ್ಷಣ ಮತ್ತು ಮೂಲಸೌಕರ‍್ಯ ಒದಗಿಸುವ ಯೋಜನೆಗಳಿಗೆ ಆದ್ಯತೆ ನೀಡಲಾಗಿತ್ತು. ಆದರೆ ಈ ಬಜೆಟ್‌ ಅಷ್ಟೇನೂ ನಾಗರಿಕ ಸ್ನೇಹಿ ಆಗಿರಲಿಲ್ಲ. ಈ ಹಿಂದೆ ರದ್ದಾಗಿದ್ದ ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಮರುಜಾರಿ ಮಾಡಲಾಯ್ತು. ಎಲೆಕ್ಟ್ರಾನಿಕ್‌ ಟೀವಿ ಪ್ಯಾನೆಲ್‌ಗಳು, ವಿದೇಶದಿಂದ ಆಮದಾಗುವ ಮೊಬೈಲ್‌ ಫೋನ್‌ಗಳು, ಸ್ಮಾರ್ಟ್‌ ವಾಚ್‌ಗಳು, ವಿದೇಶಿ ಕಾರು, ಬೈಕ್‌ಗಳು, ಪಾಲಿಶ್‌ ಮಾಡಿದ, ಬಣ್ಣದ ರತ್ನಗಳು, ವಜ್ರಗಳ ಸೀಮಾಸುಂಕ ಹೆಚ್ಚಿಸಲಾಗಿತ್ತು.

ವಾಹನ ಖರೀದಿಗೆ ಬ್ಯಾಂಕ್ ಲೋನ್ ಸಿಗುತ್ತಿಲ್ಲ; ಮತ್ತೆ ಸಂಕಷ್ಟಕ್ಕೆ ಸಿಲುಕಿದ ಆಟೋ ಇಂಡಸ್ಟ್ರಿ!

2017-18| ಫೆ.1, 2017|21.47 ಲಕ್ಷ ಕೋಟಿ ರೂಪಾಯಿ ಬಜೆಟ್ ಗಾತ್ರ| ನೋಟ್‌ ಬ್ಯಾನ್‌ನ ಅಡ್ಡ ಪರಿಣಾಮಕ್ಕೆ ಮದ್ದು

ಈ ಬಜೆಟ್‌ ಅನ್ನೂ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಅವರು ಮಂಡಿಸಿದ್ದರು. 2016 ನವೆಂಬರ್‌ 8ರಂದು ನೋಟು ಅಮಾನ್ಯೀಕರಣ ಮಾಡಿದ ನಂತರದ ಕೆಲವೇ ತಿಂಗಳುಗಳಲ್ಲಿ ಮಂಡನೆಯಾದ ಬಜೆಟ್‌ ಇದು. ಈ ಬಜೆಟ್‌ನಲ್ಲಿ ಕೃಷಿ, ಆರೋಗ್ಯ, ದೂರದೃಷ್ಟಿಯುಳ್ಳ ಆರ್ಥಿಕ ನಿರ್ವಹಣೆ ಸೇರಿದಂತೆ ಪ್ರಮುಖವಾಗಿ 10 ಅಂಶಗಳಿಗೆ ಪ್ರಾಧಾನ್ಯತೆ ನೀಡಲಾಗಿತ್ತು. ಕೃಷಿ ಸಾಲ 9 ಲಕ್ಷ ಕೋಟಿ ರು. ನಿಂದ 10 ಲಕ್ಷ ಕೋಟಿ ರು.ಗೆ ಹೆಚ್ಚಳ ಮಾಡಲಾಗಿತ್ತು. ಮಣ್ಣಿನ ಆರೋಗ್ಯ ಕಾರ್ಡ್‌ಗಾಗಿ ಮಿನಿ ಲ್ಯಾಬ್‌, ಕಿರು ನೀರಾವರಿಗೆ ನಿಧಿ, ಪ್ರಾಥಮಿಕ ಪತ್ತಿನ ಸಂಘ ಗಣಕೀಕರಣ, ಗರ್ಭಿಣಿಯರ ಬ್ಯಾಂಕ್‌ ಖಾತೆಗೆ .6000 ನೇರ ವರ್ಗಾವಣೆ, ದೇಶದ ಬರೋಬ್ಬರಿ 14 ಲಕ್ಷ ಅಂಗನವಾಡಿಗಳಲ್ಲಿ ಮಹಿಳಾ ಶಕ್ತಿ ಕೇಂದ್ರ ಸ್ಥಾಪನೆಗೆ ನಿರ್ಧರಿಸಲಾಗಿತು. ನೋಟು ಅಮಾನ್ಯದ ನಂತರ ಹಿಂಜರಿತದಲ್ಲಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಉತ್ತೇಜನ ನೀಡಲು ಹಾಗೂ ದೇಶದ ಎಲ್ಲರಿಗೂ ವಸತಿ ಸೌಕರ್ಯ ಕಲ್ಪಿಸಲು ಬಜೆಟ್‌ನಲ್ಲಿ ಕೆಲ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ವಿದೇಶಿ ಬಂಡವಾಳ ಹೂಡಿಕೆ(ಎಫ್‌ಡಿಐ) ಪ್ರಕ್ರಿಯೆಯನ್ನು ಮತ್ತಷ್ಟುಸರಳಗೊಳಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿತು. ರಾಜಕೀಯ ಪಕ್ಷಗಳಿಗೆ .2000 ಮೇಲ್ಪಟ್ಟು ನಗದು ದೇಣಿಗೆಗೆ ನಿಷೇಧ ಹೇರಿ, ಚೆಕ್‌ ಅಥವಾ ಆನ್‌ಲೈನ್‌ ದೇಣಿಗೆಗೆ ಮಿತಿ ಇಲ್ಲ ಎಂದು ಘೋಷಿಸಿತ್ತು.

2016-17| ಫೆ.29, 2016| 19.78 ಲಕ್ಷ ಕೋಟಿ ರೂಪಾಯಿ ಬಜೆಟ್ ಗಾತ್ರ| ಕೃಷಿ, ನೀರಾವರಿ, ಮೂಲಸೌಕರ್ಯಕ್ಕೆ ಒತ್ತು

ಇದು ಎನ್‌ಡಿಎ ಸರ್ಕಾರ ಮಂಡಿಸಿದ ಮೂರನೇ ಬಜೆಟ್‌. ಇದನ್ನೂ ಸಹ ಅರುಣ್‌ ಜೇಟ್ಲಿ ಅವರೇ ಮಂಡಿಸಿದ್ದರು. ಈ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಅದರಲ್ಲೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶಕ್ಕಾಗಿಯೇ 35,984 ಕೋಟಿ ಮೀಸಲಿಡಲಾಗಿತ್ತು. ಹಾಗೆಯೇ ನೀರಾವರಿ ಸೌಕರ‍್ಯಗಳ ಅಭಿವೃದ್ಧಿಗೆ ಹೆಚ್ಚುವರಿ ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು. ಹಾಗೆಯೇ ಬ್ಯಾಂಕುಗಳ ವರ್ಧನೆಗೆ 25,000 ಕೋಟಿ ರು., ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮೂಲ ಸೌಕರ‍್ಯ ಅಭಿವೃದ್ಧಿಗೆ 27,000 ಕೋಟಿ ನೀಡಲಾಗಿತ್ತು. ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ 55,000 ಕೋಟಿ ಮೀಸಲಿಡಲಾಗಿತ್ತು. ಗ್ರಾಮೀಣ ಉದ್ಯೋಗ ಯೋಜನೆಯಡಿ ಗ್ರಾಮೀಣ ಯುವ ಜನರಿಗೆ ಉದ್ಯೋಗ ಒದಗಿಸಲು ಈ ಬಜೆಟ್‌ನಲ್ಲಿ 38,500 ಕೋಟಿ ಮೀಸಲಿಡಲಾಗಿತ್ತು. ಆದರೆ ವೈಯಕ್ತಿಕ ಆದಾಯ ತೆರಿಗೆ ಸ್ಲಾ್ಯಬ್‌ನಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಹಾಗೆಯೇ 1 ಕೋಟಿಗಿಂತ ಹೆಚ್ಚು ಆದಾಯ ಹೊಂದಿದವರಿಗೆ 15% ಸರ್ಚಾಜ್‌ರ್‍ ವಿಧಿಸುವ ಹೊಸ ನಿಯಮವನ್ನು ಇದರಲ್ಲಿ ಘೋಷಿಸಲಾಗಿತ್ತು.

2020 ಕೇಂದ್ರ ಬಜೆಟ್: ಆಟೋಮೊಬೈಲ್ ಕ್ಷೇತ್ರದ ನಿರೀಕ್ಷೆಗಳೇನು?

2015-16 |ಫೆ.28, 2015| 17.77 ಲಕ್ಷ ಕೋಟಿ ರೂಪಾಯಿ ಬಜೆಟ್ ಗಾತ್ರ| ಕಪ್ಪುಹಣಕ್ಕೆ ಹೊಡೆತ, ಸಾಮಾಜಿಕ ಪರಿವರ್ತನೆ

ಮೊದಲ ಅವಧಿಯ ಮೋದಿ ಸರ್ಕಾರದ 2ನೇ ಬಜೆಟ್‌ ಇದಾಗಿದ್ದು, ಅಂದಿನ ಹಣಕಾಸು ಸಚಿವರಾದ ಅರುಣ್‌ ಜೇಟ್ಲಿ ಇದನ್ನು ಮಂಡಿಸಿದ್ದರು. ಸ್ವಚ್ಛ ಗಂಗಾ ಯೋಜನೆ, ಸ್ವಚ್ಛ ಭಾರತ್‌ ಕೋಶ್‌ಗೆ ಹಣ ನೀಡಿದರೆ ಶೇ.100ರಷ್ಟುತೆರಿಗೆ ವಿನಾಯತಿ ಘೋಷಿಸಿದ್ದರು. ಕಪ್ಪು ಹಣ ವಾಪಸ್‌ ತರಲು ಹೊಸ ಕಾಯ್ದೆ, ವಿದೇಶದಲ್ಲಿ ಕಪ್ಪು ಹಣ ಇರಿಸಿ ತೆರಿಗೆ ವಂಚಿಸಿದರೆ 10 ವರ್ಷ ಕಠಿಣ ಜೈಲು ಶಿಕ್ಷೆ ಘೋಷಿಸಲಾಯಿತು. ಮಹಿಳಾ ಸುರಕ್ಷತೆ ದೃಷ್ಟಿಯಿಂದ ನಿರ್ಭಯಾ ಫಂಡ್‌ಗೆ 1000 ಕೋಟಿ ರು. ಹೆಚ್ಚುವರಿ ನೀಡಿಕೆ, 20 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿ. ಪರಿಶಿಷ್ಟಜಾತಿಗೆ 30,858 ಕೋಟಿ ರು. ಮೀಸಲು, ಪರಿಶಿಷ್ಟಪಂಗಡಕ್ಕೆ 18 ಸಾವಿರ ಕೋಟಿ ರು., ಅಲ್ಪಸಂಖ್ಯಾತ ಪಂಗಡದ ಯುವಕರಿಗೆ ನಯೀ ಮಂಜಿಲ… ಯೋಜನೆ ಜಾರಿ ಮಾಡಲಾಯಿತು. ಎಸ್‌ಸಿ/ಎಸ್ಟಿಗಳ ಅನುಕೂಲಕ್ಕಾಗಿ ಪ್ರಧಾನಮಂತ್ರಿ ಮುದ್ರಾ ಯೋಜನೆ ಆರಂಭಿಸಲಾಯಿತು. ನರೇಗಾ ಯೋಜನೆಗೆ 34 ಸಾವಿರ ಕೋಟಿ ರು. ಮೀಸಲಿಡಲಾಗಿತ್ತು. ಆದರೆ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಈ ಬಜೆಟ್‌ನಲ್ಲಿ ವಿದ್ಯುತ್‌ ಮತ್ತು ವಸತಿಯಂಥ ಮೂಲಭೂತ ಸೌಕರ‍್ಯ ನೀಡಲು ಪ್ರಾಥಮಿಕ ಆದ್ಯತೆ ನೀಡಲಾಗಿತ್ತು. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಅಟಲ್‌ ಪಿಂಚಣಿ ಯೋಜನೆಯನ್ನು ಜಾರಿ ಮಾಡಲಾಗಿತ್ತು.

2014-15| ಜುಲೈ 10, 2014| 17.94 ಲಕ್ಷ ಕೋಟಿ ರೂಪಾಯಿ ಬಜೆಟ್ ಗಾತ್ರ|  ಕೌಶಲ್ಯಾಭಿವೃದ್ಧಿ, ಡಿಜಿಟಲೀಕರಣದ ಜಪ| 

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಡಿಸಿದ ಮೊದಲ ಬಜೆಟ್‌ ಇದು. ಈ ಬಜೆಟ್‌ ಮಂಡಿಸಿದವರೂ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ. ಈ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯನ್ನು 50,000ದಿಂದ 2.5 ಲಕ್ಷಕ್ಕೆ ಹೆಚ್ಚಿಸಲಾಯಿತು. ಹಾಗೆಯೇ ಹಿರಿಯ ನಾಗರಿಕರ ಆದಾಯ ತೆರಿಗೆ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸಲಾಯಿತು. 100 ಸ್ಮಾರ್ಟ್‌ ಸಿಟಿಗಳ ನಿರ್ಮಾಣಕ್ಕೆ 7000 ಕೋಟಿ ಮೀಸಲಿಡಲಾಗಿತ್ತು. ಗ್ರಾಮೀಣ ಉದ್ಯೋಗಿಗಳಿಗೆ ಐಟಿ ತರಬೇತಿ ನೀಡುವ ಹೊಸ ಯೋಜನೆಯನ್ನು ಘೋಷಿಸಲಾಯ್ತು. ಗಂಗಾ ನದಿಯನ್ನು ಶುದ್ಧೀಕರಿಸುವ ನಮಾಮಿ ಗಂಗಾ ಯೋಜನೆಯನ್ನು ಪರಿಚಯಿಸಿ ಅದಕ್ಕಾಗಿ 2000 ಕೋಟಿ ಮೀಸಲಿಡಲಾಯ್ತು. ಸಾರ್ವಜನಿಕ ವಲಯದ ಬ್ಯಾಂಕುಗಳ ಮರು ಬಂಡವಾಳವಾಗಿ 11,200 ಕೋಟಿ ಮೀಸಲಿಡಲಾಗಿತ್ತು. ದೇಶದೆಲ್ಲೆಡೆ ನದಿ ಜೋಡಣೆ ಯೋಜನೆಗೆ 100 ಕೋಟಿ ರು. ನೀಡಿಕೆ, ಗಡಿಭಾಗದ ಗ್ರಾಮಗಳ ಅಭಿವೃದ್ಧಿಗಾಗಿ 900 ಕೋಟಿ ರು., ರಕ್ಷಣಾ ಇಲಾಖೆಗೆ 2.29 ಲಕ್ಷ ಕೋಟಿ ರು. ಅನುದಾನ, ಮಣಿನ ಫಲವತ್ತತೆ ಪರೀಕ್ಷೆಗಾಗಿ ಹೆಲ್ತ್‌ ಕಾರ್ಡ್‌ ಪರಿಚಯಿಸಲಾಯ್ತು.

ಬಜೆಟ್ ಮೂಲಕ ಚೀನಾಗೆ ಗುದ್ದು: ಮೋದಿ ಪ್ಲ್ಯಾನ್ ಮಾಡ್ತಿದೆ ಸದ್ದು!

ಜನವರಿ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us:
Download App:
  • android
  • ios