ಮಾತೃ ಇಲಾಖೆಯಿಂದ ಜಗದೀಶ್ ವರ್ಗಾವಣೆ
ಕಾನೂನು ಬಾಹಿರವಾಗಿ ಖಾತಾ ಮಾಡಿಕೊಟ್ಟ ಆರೋಪದ ಮೇಲೆ ಮಹದೇವಪುರ ಜಂಟಿ ಆಯುಕ್ತ ಜಗದೀಶ್ ಅವರನ್ನು ಆರ್.ಆರ್.ನಗರ ಜಂಟಿ ಆಯುಕ್ತ ಹುದ್ದೆಗೆ ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಬೆಂಗಳೂರು [ಅ.18]: ಕಾನೂನು ಬಾಹಿರವಾಗಿ ಖಾತಾ ಮಾಡಿಕೊಟ್ಟ ಆರೋಪದ ಮೇಲೆ ಮಹದೇವಪುರ ಜಂಟಿ ಆಯುಕ್ತ ಜಗದೀಶ್ ಅವರನ್ನು ವಾರದ ಹಿಂದೆಯಷ್ಟೇ ಮಾತೃ ಇಲಾಖೆಗೆ ವಾಪಾಸ್ ಕಳಿಸುವಂತೆ ಬಿಬಿಎಂಪಿ ಆಯುಕ್ತರು ಆದೇಶಿಸಿದ್ದರು. ಆದರೆ, ಈ ಆದೇಶವಾಗಿ ಒಂದು ವಾರದಲ್ಲಿ ಜಗದೀಶ್ ಅವರನ್ನು ಆರ್.ಆರ್.ನಗರ ಜಂಟಿ ಆಯುಕ್ತ ಹುದ್ದೆಗೆ ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
2018ರಲ್ಲಿ ಅಮಾನಿ ಬೆಳ್ಳಂದೂರು ಗ್ರಾಮದಲ್ಲಿ ಭೂಪರಿವರ್ತನೆಗೆ ಒಳಪಡದ 32.27 ಎಕರೆ ಆಸ್ತಿಯನ್ನು ಸ್ಟೆರ್ಲಿಂಗ್ ಹರ್ಬನ್ ಇನ್ಫ್ರಾ ಪ್ರಾಜೆಕ್ಟ್ ಸಂಸ್ಥೆಗೆ ಕಾನೂನು ಬಾಹಿರವಾಗಿ ಖಾತಾ ಮಾಡಿಕೊಟ್ಟಆರೋಪದ ಮೇಲೆ ಮಹದೇವಪುರ ಜಂಟಿ ಆಯುಕ್ತ ಜಗದೀಶ್, ಆರ್.ಆರ್.ನಗರ ವಲಯದ ಉಪ ಆಯುಕ್ತ ಶಿವೇಗೌಡ ಅವರನ್ನು ವಾಪಾಸ್ ಮಾತೃ ಇಲಾಖೆಗೆ ಕಳಿಸುವುದಕ್ಕೆ ಅ.9ರಂದು ಆಯುಕ್ತರು ಶಿಫಾರಸು ಮಾಡಿ ಆದೇಶಿಸಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಆದೇಶವಾಗಿ ಕೇವಲ ಒಂದು ವಾರದಲ್ಲಿ ಕರ್ನಾಟಕ ಸರ್ಕಾರದ ಸಚಿವಾಲಯ ಸೇವೆಯ ಸ್ಥಳ ನಿಯುಕ್ತಿಯಲ್ಲಿರುವ ಜಗದೀಶ್ ಅವರನ್ನು ರಾಜರಾಜೇಶ್ವರಿ ವಲಯದ ಜಂಟಿ ಆಯುಕ್ತ ಹುದ್ದೆಗೆ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶಿಸಿದೆ.
ಅನರ್ಹ ಶಾಸಕರ ಶಿಫಾರಸು:
ಕಳೆದ ಸೆ.19ರಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮುನಿರತ್ನ ಮತ್ತು ಎಸ್.ಟಿ.ಸೋಮಶೇಖರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಬಿಬಿಎಂಪಿಯ ಮಹದೇವಪುರ ವಲಯದ ಜಂಟಿ ಆಯುಕ್ತ ಜಗದೀಶ್ ಅವರನ್ನು ರಾಜರಾಜೇಶ್ವರಿ ನಗರ ವಲಯ ಜಂಟಿ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡುವಂತೆ ಕೋರಿದ್ದರು.