Asianet Suvarna News Asianet Suvarna News

Kolar News: ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣ: ಎಸ್ಕೇಪ್ ಆಗ ಹೊರಟ ಆರೋಪಿ ಕಾಲಿಗೆ ಗುಂಡೇಟು!

Kolar Jagan Mohan Reddy Murder Case: ಮುಳಬಾಗಿಲು ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣಕ್ಕೆ ಹದಿನೇಳು ದಿನಗಳ ನಂತರ ಹೊಸ ತಿರುವು ಸಿಕ್ಕಿದೆ.  

Kolar Mulbagal Jagan Mohan Reddy murder case Police open fire on accused who tried to escape mnj
Author
Bengaluru, First Published Jun 24, 2022, 9:03 PM IST

ವರದಿ : ದೀಪಕ್, ಕೋಲಾರ 

ಕೋಲಾರ (ಜೂ. 24): ಮುಳಬಾಗಿಲು ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣಕ್ಕೆ ಹದಿನೇಳು ದಿನಗಳ ನಂತರ ಹೊಸ ತಿರುವು ಸಿಕ್ಕಿದೆ.  ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬನಾದ ಸುಪಾರಿ ಕಿಲ್ಲರ್‌ನನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಪೊಲೀಸರು ಫೈರಿಂಗ್​ ಮಾಡಿದ್ದಾರೆ. ಕಾಲಿಗೆ ಗುಂಡೇಟು ತಗುಲಿ ಜಿಲ್ಲಾಸ್ಪತ್ರೆಯ ಜೈಲ್​ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಪಾರಿ ಕಿಲ್ಲರ್​ ಬಾಲಾಜಿ ಸಿಂಗ್​ ಆಲಿಯಾಸ್​ ಗಬ್ಬರನನ್ನು ಹಿರಿಯ ಪೊಲೀಸ್‌ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಆರೋಪಿ ಬಾಲಾಜಿ ಸಿಂಗ್​ಗೆ ಫೈಯರ್​ ಮಾಡಿದ ಸ್ಥಳದಲ್ಲಿ ಎಸ್ಪಿ ದೇವರಾಜ್​  ಪರಿಶೀಲನೆ ನಡೆಸುತ್ತಿದ್ದಾರೆ.

ಜೂನ್​ 7ರಂದು ಕೋಲಾರ ಜಿಲ್ಲೆ ಮುಳಬಾಗಿಲು ನಗರಸಭೆ ಸದಸ್ಯ ಜಗನ್​ ಮೋಹನ್​ರೆಡ್ಡಿ ಕೊಲೆಯಾಗಿತ್ತು, ಕೊಲೆಯಾಗಿ ಹದಿನೇಳು ದಿನವಾದರೂ ಆರೋಪಿಗಳು ಪತ್ತೆಯಾಗಿರಲಿಲ್ಲ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸುಪಾರಿ ಕಿಲ್ಲರ್​ ಬಾಲಾಜಿ ಸಿಂಗ್​ ತಲೆಮರೆಸಿಕೊಂಡು ಮೈಸೂರಿನಲ್ಲಿರುವ ಬಗ್ಗೆ ಪೊಲೀಸರ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆ ಮುಳಬಾಗಿಲು ಪೊಲೀಸ್​ ಇನ್ಪೆಕ್ಟರ್​ ಲಕ್ಷೀಕಾಂತ್​ ಹಾಗೂ ತಂಡ ಮೈಸೂರಿಗೆ ತೆರಳಿ ಆರೋಪಿ ಬಾಲಾಜಿ ಸಿಂಗ್​ನನ್ನು ನಿನ್ನೆ ರಾತ್ರಿ ಬಂಧಿಸಿದ್ದಾರೆ.

ಎಸ್ಕೇಪ್ ಆಗ ಹೊರಟ ಆರೋಪಿ ಕಾಲಿಗೆ ಗುಂಡೇಟು: ಆರೋಪಿಯನ್ನು ಇಂದು ಬೆಳಗಿನಜಾವ ಕರೆತರುವ ವೇಳೆ ಕೋಲಾರ ತಾಲ್ಲೂಕು ಮಡೇರಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಆರೋಪಿ ಮೂತ್ರ ವಿಸರ್ಜನೆ ಮಾಡಲು ಕೇಳಿದಾಗ ಗಾಡಿ ನಿಲ್ಲಿಸಿ ಆತನ ಕೈಗೆ ಹಾಕಿದ್ದ ಹ್ಯಾಂಡ್​ ಕಪ್​ ತೆಗೆದು ಮೂತ್ರ ವಿಸರ್ಜನೆ ಮಾಡಲು ಹೇಳಿದ್ದಾರೆ. ಈ ವೇಳೆ ಆರೋಪಿ ಬಾಲಾಜಿ ಸಿಂಗ್​ ಪೊಲೀಸ್​ ಕಾನ್​ಸ್ಟಬಲ್​ ರಾಜೇಶ್​ ಮೇಲೆ ಹಲ್ಲೆ ಮಾಡಿದ್ದಾನೆ.  ಅಲ್ಲದೇ ಅಲ್ಲಿದ್ದ ವಿನಾಯಕ್​ ಎಂಬ ಮತ್ತೊಬ್ಬ ಕಾನ್​ಸ್ಟಬಲ್​ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. 

ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಕುಂದಾನಗರಿಯಲ್ಲಿ ಫೈರಿಂಗ್‌, ಕೊಲೆ ಆರೋಪಿ ಬಂಧನ

ಈ ಬೆನ್ನಲ್ಲೇ ಮುಳಬಾಗಿಲು ಇನ್​ಸ್ಪೆಕ್ಟರ್​ ಲಕ್ಷ್ಮೀನಾರಾಯಣ್​ ಆರೋಪಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಆದರೆ ಅವರ ಮಾತನ್ನು ಕೇಳಿಸಿಕೊಳ್ಳದ ಆರೋಪಿ ಲಕ್ಷ್ಮೀನಾರಾಯಣ್​ ಮೇಲೂ ದೊಣ್ಣೆಯಿಂದ ಹಲ್ಲೆ ಮಾಡಲು ಯತ್ನಿಸಿದಾಗ ಇನ್​ಸ್ಪೆಕ್ಟರ್​ ಲಕ್ಷ್ಮೀಕಾಂತ್ ತಮ್ಮ ಬಳಿ ಇದ್ದ ಸರ್ವಿಸ್​ ರಿವಲ್ವಾರ್​ನಿಂದ ಬಾಲಾಜಿ ಸಿಂಗ್​ ಬಲ ಕಾಲಿಗೆ ಫೈಯರ್​ ಮಾಡಿದ್ದಾರೆ.​ ನಂತರ ಗುಂಡೇಟು ತಿಂದ ಆರೋಪಿ ಬಾಲಾಜಿ ಸಿಂಗ್‌ನನ್ನು ಹಾಗೂ ಹಲ್ಲೆಗೊಳಗಾಗಿದ್ದ ಕಾನ್​ಸ್ಟೆಬಲ್​ ವಿನಾಯಕ್‌ರನ್ನು ಕೋಲಾರ ಜಿಲ್ಲಾಸ್ಪತ್ರೆಗೆ​ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಲವು ಪ್ರಕರಣಗಳು ದಾಖಲು: ಇನ್ನು ಮುಳಬಾಗಿಲು ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಿಕ್ಕಿ ಬಿದ್ದಿರುವ ಆರೋಪಿ ಬಾಲಾಜಿ ಸಿಂಗ್​ ಮುಳಬಾಗಿಲು ಮೂಲದವನು ಆದರೆ ಬಂಗಾರಪೇಟೆಯಲ್ಲಿ ವಾಸವಿದ್ದ. ಬಂಗಾರಪೇಟೆಯಲ್ಲಿ ಬಡ್ಡಿ ಫೈನಾನ್ಸ್​ ವ್ಯವಹಾರ ಮಾಡಿಕೊಂಡಿದ್ದವನು, ಈತ ಮೊದಲು 2017 ರಲ್ಲಿ ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿ ಬೈಕ್​ ಕಸಿದುಕೊಂಡು ಹೋಗಿದ್ದ, ನಂತರ ಮುಳಬಾಗಿಲು ಬಾಯಿಕೊಂಡ ಗಂಗಮ್ಮ ಕಬಾಬ್​ ಸೆಂಟರ್​ ಮಾಲೀಕ ನಾರಾಯಣ್ ಎಂಬಾತನನ್ನು ಆತನ ಹೆಂಡತಿಯಿಂದಲೇ ಆರು ಲಕ್ಷ ಸುಪಾರಿ ಪಡೆದು ಕೊಲೆ ಮಾಡಿದ್ದ.

ಬಾಲಾಜಿ ಸಿಂಗ್​ ಆಲಿಯಾಸ್​ ಗಬ್ಬರ್​ ಸಿಂಗ್​ ಮೇಲೆ ಈ ಹಿಂದೆಯೇ ಕೊಲೆ, ದರೋಡೆ, ಡಕಾಯತಿ ಪ್ರಕರಣಗಳು ದಾಖಲಾಗಿದ್ದವು. ಈ ನಡುವೆಯೇ ಮುಳಬಾಗಿಲಿನ ಜಗನ್​, ಧನುಷ್​, ಮನೋಜ್​ ಎಂಬುವರ ಜೊತೆಗೆ ಸೇರಿ ಈ ಬಾಲಾಜಿ ಸಿಂಗ್​ ಇದೇ ಜೂನ್​-7 ರಂದು ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿಯನ್ನು ಕೊಲೆ ಮಾಡಿ ನಂತರ ತಲೆಮರೆಸಿಕೊಂಡು ಓಡಾಡುತ್ತಿದ್ದ. 

ಇದನ್ನೂ ಓದಿ:  ನಡುರಸ್ತೆಯಲ್ಲೇ ವ್ಯಕ್ತಿಯ ಮೇಲೆ ಮಚ್ಚಿನಿಂದ ಹಲ್ಲೆ, ಕೊಲೆಗೆ ಯತ್ನ

ಸದ್ಯ ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರ ತಂಡ ಈಗ ಪ್ರಮುಖ ಆರೋಪಿ ಬಾಲಾಜಿ ಸಿಂಗ್​ನನ್ನು ಮೈಸೂರಿನಲ್ಲಿ ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಉಳಿದ ಆರೋಪಿಗಳನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

ಕೋಲಾರ ಜಿಲ್ಲೆಯಲ್ಲಿ ಆತಂಕ ಹುಟ್ಟಿಸಿದ್ದ ನಗರಸಭೆ ಸದಸ್ಯ ಜಗನ್​ ಮೋಹನ್​ ರೆಡ್ಡಿ ಕೊಲೆ ಪ್ರಕರಣ ಈ ಮೂಲಕ ಹೊಸ ತಿರುವು ಪಡೆದುಕೊಂಡಿದ್ದು ಕೊಲೆ ಮಾಡಿದವರು ಯಾರು, ಯಾಕೆ ಮಾಡಿದ್ದಾರೆ ಎಂಬ ಹಲವು ಗೊಂದಲಗಳಿಗೆ ಉಳಿದ ಆರೋಪಿಗಳ ಬಂಧನದ ನಂತರ ಉತ್ತರ ಸಿಗಲಿದೆ..

Follow Us:
Download App:
  • android
  • ios