'ನಿಮ್ಮ ಬೇಜವಾಬ್ದಾರಿ ಜಿಲ್ಲೆಯನ್ನು ಸರ್ವನಾಶ ಮಾಡುತ್ತಿದೆ'
ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಮಾಧುಸ್ವಾಮಿ, ಅಧಿಕಾರಿಗಳ ವೈಫಲ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ನೇರ ಹೊಣೆಗಾರರನ್ನಾಗಿಸಿದರು.
ತುಮಕೂರು (ಜೂ.15): 'ನಿಮ್ಮ ಬೇಜವಾಬ್ದಾರಿ ಜಿಲ್ಲೆಯನ್ನು ಸರ್ವನಾಶ ಮಾಡುತ್ತಿದೆ' ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ವಿರುದ್ಧ ಬಿಜೆಪಿ ಶಾಸಕ ಜೆ.ಸಿ ಮಾಧುಸ್ವಾಮಿ ತೀವ್ರ ಆಕ್ರೋಶ ಹೊರ ಹಾಕಿದರು.
ತುಮಕೂರು ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ವೈಫಲ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ನೇರ ಹೊಣೆಗಾರರನ್ನಾಗಿಸಿದರು.
ತ್ರೈಮಾಸಿಕ ಕೆಡಿಪಿ ಸಭೆಯ ಮಾಹಿತಿಯನ್ನು ಶಾಸಕರುಗಳಿಗೆ ಮುಂಚಿತವಾಗಿ ಅಧಿಕಾರಿಗಳು ತಿಳಿಸಿಲ್ಲ. ಸಭೆಯ ನೋಟೀಸ್ ಹಾಗೂ ಇಲಾಖೆಗಳ ಪ್ರಗತಿ ವರದಿಯನ್ನು ಮುಂಚಿತವಾಗಿ ತಲುಪಿಸಿಲ್ಲ. ಸಭೆಗೆ ಬಂದು ನಾವು ಏನು ಚರ್ಚೆ ಮಾಡಬೇಕು. ಅಧಿಕಾರಿಗಳು ಹೇಳಿದ್ದನ್ನು ಕೇಳಿಸಿಕೊಂಡು ಹೋಗಬೇಕೆ? ಎಂದು ಮಾಧುಸ್ವಾಮಿ ಅಸಮಾಧಾನ ಹೊರ ಹಾಕಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿಸಿಎಂ ಡಾ.ಜಿ ಪರಮೇಶ್ವರ್ ಕಡೆಗೆ ತಿರುಗಿ, ನಿಮ್ಮ ಬೇಜವಾಬ್ದಾರಿಯಿಂದ ಹೀಗಾಗುತ್ತಿದೆ ಎಂದು ಕಿಡಿಕಾರಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಡಿಸಿಎಂ ಪರಮೇಶ್ವರ್, 'ಮಾಧುಸ್ವಾಮಿ, ಯು ಡೋಂಟ್ ಟಾಕ್ ಲೈಕ್ ದಟ್, ನೀವು ಹಾಗೆ ಮಾತನಾಡಬಾರದು' ಎಂದು ಜೋರು ಧ್ವನಿಯಲ್ಲೇ ಮನವಿ ಮಾಡಿದರು.