Asianet Suvarna News Asianet Suvarna News

ಬೆಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಮಹಿಳೆ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ

ವೈದ್ಯರ ನಿರ್ಲಕ್ಷ್ಯದಿಂದ ಮಹಿಳಾ ರೋಗಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಕುಟುಂಬ ಸದಸ್ಯರು ನಗರದ ಖಾಸಗಿ ಆಸ್ಪತ್ರೆಯೊಂದರ ಆವರಣದಲ್ಲಿ ಸೋಮವಾರ ಗಲಾಟೆ ನಡೆಸಿದ ಪರಿಣಾಮ ಕೆಲ ಕಾಲ ಆತಂಕದ ವಾತಾವರಣ ನೆಲೆಸಿತು.
 

ಬೆಂಗಳೂರು (ಮೇ. 12): ವೈದ್ಯರ ನಿರ್ಲಕ್ಷ್ಯದಿಂದ ಮಹಿಳಾ ರೋಗಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಕುಟುಂಬ ಸದಸ್ಯರು ನಗರದ ಖಾಸಗಿ ಆಸ್ಪತ್ರೆಯೊಂದರ ಆವರಣದಲ್ಲಿ ಸೋಮವಾರ ಗಲಾಟೆ ನಡೆಸಿದ ಪರಿಣಾಮ ಕೆಲ ಕಾಲ ಆತಂಕದ ವಾತಾವರಣ ನೆಲೆಸಿತು.

ಬೈರಸಂದ್ರದ ನಿವಾಸಿ ಸತ್ಯಮ್ಮ (47) ಮೃತ ದುರ್ದೈವಿ. ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಬಸವನಗುಡಿಯ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಬಹು ಅಂಗಾಂಗ ವೈಫಲ್ಯದಂತಹ ಸಮಸ್ಯೆ ಕಂಡು ಬರುತ್ತಿದೆ. ಮುಖ್ಯವಾಗಿ ಕಿಡ್ನಿಯಲ್ಲಿ ಕಲ್ಲು ಇದ್ದು ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬೇಕಿದೆ ಎಂದಿದ್ದರು. ಬಳಿಕ ಚಿಕಿತ್ಸೆ ಮುಂದುವರೆಸಿದರೂ ಫಲ ನೀಡಿಲ್ಲ. ಭಾನುವಾರ ರಾತ್ರಿ ದಿಢೀರನೇ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಆಗ ವೈದ್ಯರು, ಸತ್ಯಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ.

ಅದರಂತೆ ಕುಟುಂಬ ಸದಸ್ಯರು, ಹತ್ತಿರದ ಅಪೋಲೋಗೆ ರಾತ್ರಿ 9 ಗಂಟೆಗೆ ಸುಮಾರಿಗೆ ಕರೆದೊಯ್ದಿದ್ದಾರೆ. ಆಗ ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು ಚಿಕಿತ್ಸೆ ಆರಂಭಿಸಿದ್ದರು. ಆದರೆ ದಾಖಲಾದ ಒಂದು ಗಂಟೆಯಲ್ಲೇ ತೀವ್ರ ಉಸಿರಾಟ ಸಮಸ್ಯೆ ಉದ್ಭವಿಸಿ ಸತ್ಯಮ್ಮ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Video Top Stories