Asianet Suvarna News Asianet Suvarna News

Chamarajanagar: ಗೋಮಾಳ ಜಾಗದಲ್ಲಿ ಅಕ್ರಮ ಗಣಿಗಾರಿಕೆ: ಇದ್ದೂ ಇಲ್ಲದಂತಾದ ಅಧಿಕಾರಿಗಳು..!

*  ಮೇವಿನ ತಾಣವಾಗಿದ್ದ ಗೋಮಾಳ ಈಗ ಗಣಿಕಾರಿಕೆಯ ತಾಣ
*  ಹಸಿರು ಹುಲ್ಲು ಬೆಳೆದು ನಳನಳಿಸಬೇಕಿದ್ದ ಗೋಮಾಳ ಜಾಗ ಬರಡು 
*  ಪ್ರತಿದಿನ  ಭಾರೀ ಸ್ಫೋಟದಿಂದ ಮನೆಗಳು ನಡುಗುವ ಅನುಭವ 
 

ಚಾಮರಾಜನಗರ(ಏ.15): ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಬಳಿ ಸರ್ಕಾರ ಗೋಮಾಳದಲ್ಲಿ ಅಕ್ರಮವಾಗಿ ನಡೆಯುತ್ತಿರುವ  ಕಟ್ಟಡ ಕಲ್ಲು ಗಣಿಗಾರಿಕೆಗೆ ಗ್ರಾಮಸ್ಥರು ವಿರೋಧ ವ್ಯಕ್ತವಾಗಿದೆ. ಗ್ರಾಮದ ಸರ್ವೇ ನಂಬರ್  159 ರಲ್ಲಿ  250 ಎಕರೆಗೂ ಹೆಚ್ಚು ಪ್ರದೇಶ ಗೋಮಾಳವಿದ್ದು ಇಲ್ಲಿ ಗ್ರಾಮಸ್ಥರ ವಿರೋಧದ ನಡುವೆಯೂ  ಗಣಿಗಾರಿಕೆಗೆ  ಅನುಮತಿ ನೀಡುತ್ತಾ ಬರಲಾಗುತ್ತಿದೆ. 

ಈ ಪ್ರದೇಶ ಗ್ರಾಮದ ಜಾನುವಾರುಗಳ ಮೇವಿನ ತಾಣವಾಗಿತ್ತು. ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಮೇಯಿಸಲು ಈ ಗೋಮಾಳವನ್ನೇ ಆಶ್ರಯಿಸಿದ್ದರು. ಆದರೀಗ ಗಣಿಗಾರಿಕೆಯಿಂದ ಜಾನುವಾರಗಳ ಮೇವಿಗೆ ಧಕ್ಕೆಯುಂಟಾಗಿದೆ. ಹಸಿರು ಹುಲ್ಲು ಬೆಳೆದು ನಳನಳಿಸಬೇಕಿದ್ದ ಜಾಗ ಬರಡು ಬರಡಾಗಿದೆ. ಗಣಿಗಳಲ್ಲಿ ಸ್ಫೋಟಕ ಸಿಡಿಸುವುದರಿಂದ ಕಲ್ಲು ಬಂಡೆಯ ಚೂರುಗಳು ಎಲ್ಲೆಂದರಲ್ಲಿ ಹಾರಿ ಬಂದು ಬೀಳುತ್ತಿವೆ. ಗ್ರಾಮಸ್ಥರು ಇತ್ತ ತಮ್ಮ ದನಕರುಗಳನ್ನು ಮೇಯಲು ಬಿಡಲು ಹೆದರುವಂತಾಗಿದೆ. ಇದಲ್ಲದೆ ಕಡಿಮೆ ಪ್ರದೇಶಕ್ಕೆ ಗಣಿ ಗುತ್ತಿಗೆ ಪಡೆದು ಒತ್ತುವರಿ ಮಾಡಿಕೊಂಡು ಹೆಚ್ಚಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಸರ್ಕಾರ ಕ್ಕೆ ಲಕ್ಷಾಂತರ ರೂಪಾಯಿ ರಾಜಧನ ನಷ್ಟವಾಗುತ್ತಿದೆ.

ಕಾಂಗ್ರೆಸ್‌ಗೆ ಪಾರ್ಟಿಗೆ ಈಶ್ವರಪ್ಪನವರ ರಾಜೀನಾಮೆ ಬೇಕಿಲ್ಲ, ಬೇರೆ ಬೇಡಿಕೆ ಇಟ್ಟ ಡಿಕೆಶಿ

ಇಷ್ಟೇ ಅಲ್ಲ ನಿಗದಿತ  ಮಾನದಂಡಗಳನ್ನು ಬದಿಗೊತ್ತಿ ಅಕ್ರಮವಾಗಿ ಸ್ಫೋಟಕ ಬಳಸಲಾಗುತ್ತಿದೆ. ಪ್ರತಿದಿನ  ಭಾರೀ ಸ್ಫೋಟದಿಂದ ಮನೆಗಳು ನಡುಗಿದಂತೆ ಅನುಭವವಾಗುತ್ತಿದೆ ಎಂದು ಗ್ರಾಮಸ್ಥರು ಭಯಗೊಂಡಿದ್ದಾರೆ. ಗಣಿಗಳಲ್ಲೇ ಅಕ್ರಮವಾಗಿ ಸ್ಫೋಟಕ ಗಳ ಸಂಗ್ರಹಣೆ ಮಾಡಿಕೊಂಡಿರುವುದು ಕಂಡು ಬಂದಿದೆ. ನಿಯಮಗಳ ಪ್ರಕಾರ ಪರವಾನಗಿ ಪಡೆದ,  ತರಬೇತಿ ಹೊಂದಿದ ಏಜೆನ್ಸಿಗಳಿಂದ  ಮಾತ್ರ ಸ್ಫೋಟಕ ಸಿಡಿಸಬೇಕು. ಸ್ಫೋಟಕಗಳನ್ನು ಸಿಡಿಸುವಾಗ ಸುರಕ್ಷತಾ ಕ್ರಮ ಅನುಸರಿಸಬೇಕು. ಆದರೆ ಇಲ್ಲಿ ಇಲ್ಲಿ  ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ  ಸಾಮಾನ್ಯ ಕಾರ್ಮಿಕ ರಿಂದಲೇ ಸ್ಫೋಟಕ ಸಿಡಿಸಲಾಗುತ್ತಿದೆ. ಇದರಿಂದ ಪ್ರಾಣಾಪಾಯಗಳಾಗುವ ಸಾಧ್ಯತೆಗಳು ಇವೆ. ನಿಯಮಗಳ ಪ್ರಕಾರ ನೀರು ಕಂಡು ಬಂದ ಮೇಲೆ ಮಾತ್ರ ಗಣಿಗಾರಿಕೆ ಮಾಡುವಂತಿಲ್ಲ ಆದರೆ ಇಲ್ಲಿ ನೀರು ಬಂದರು ಲೆಕ್ಕಿಸದೆ ನೀರನ್ನು  ಪಂಪ್‌ಸೆಟ್ ಮೋಟಾರ್ ಗಳಿಂದ ಹೊರಹಾಕಿ ಗಣಿಗಾರಿಕೆ ಮುಂದುವರಿಸಲಾಗುತ್ತಿದೆ.  ಬಹಳ ಆಳದಲ್ಲಿ ಅಪಾಯಕಾರಿ ರೀತಿ  ಗಣಿಗಾರಿಕೆ ನಡೆಸಲಾಗುತ್ತಿದ್ದು ಸುರಕ್ಷತಾ ಕ್ರಮಗಳು ಮಾಯವಾಗಿವೆ. 

ಇನ್ನೊಂದೆಡೆ ಗೋಮಾಳಕ್ಕೆ ಹೊಂದಿಕೊಂಡಂತೆ ಇರುವ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಪಡೆದು ಗೋಮಾಳವನ್ನೇ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ. ಪರವಾನಗಿ ಪಡೆದಿರುವ ಪ್ರದೇಶವೇ ಬೇರೆ, ಗಣಿಗಾರಿಕೆ ನಡೆಸುತ್ತಿರುವ ಪ್ರದೇಶವೇ ಬೇರೆಯಾಗಿದ್ದು  ಸರ್ಕಾರಕ್ಕೆ ರಾಜಧನ ವಂಚಿಸಲಾಗುತ್ತಿದೆ. ಗೋಮಾಳದ ಅಕ್ಕ ಪಕ್ಕದಲ್ಲೇ ಕ್ರಷರ್ ಗಳು ತಲೆ ಎತ್ತಿದ್ದು   ಈ ಗಣಿಗಳಲ್ಲಿ ತೆಗೆದ ಕಲ್ಲಿನಿಂದ ಜಲ್ಲಿ ಕಲ್ಲು ಹಾಗು ಎಂ.ಸ್ಯಾಂಡ್ ತಯಾರು ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ಧೂಳು ಹೊರಬರುವುದರಿಂದ ಸುತ್ತಮುತ್ತಲಿನ ಜಮೀನುಗಳ ಬೆಳೆ ಹಾನಿಯಾಗುತ್ತಿದೆ. ಪರಿಸರ ಮಾಲಿನ್ಯವೂ  ಉಂಟಾಗುತ್ತಿದೆ.ಇಷ್ಟೆಲ್ಲಾ ನಡೆಯುತ್ತಿದ್ದರೂ ಗಣಿ ಮತ್ತ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
 

Video Top Stories