'ಕನ್ನಡಿಗರಿಗೆ ಅಪಮಾನವಾದರೆ ನಾನು ಯಾವುದೇ ತ್ಯಾಗಕ್ಕೂ ಸಿದ್ಧ'
ನಾನು ಕನ್ನಡ ವಿರೋಧಿಯಲ್ಲ: ರಮೇಶ ಜಾರಕಿಹೊಳಿ| ಬೆಳಗಾವಿಯಲ್ಲಿ ಹೇಳಿದ ಹೇಳಿಕೆ ತಿರುಚಲಾಗಿದೆ|ರಾಜ್ಯದ ಹಿತಕ್ಕೆ ನಾನು ಬದ್ಧನಾಗಿದ್ದು, ಕನ್ನಡ ಪರ ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ|
ಗೋಕಾಕ(ಜ.02): ನಾನು ಕನ್ನಡ ವಿರೋಧಿಯಲ್ಲ, ನಮ್ಮ ನಾಡು ಹಾಗೂ ಕನ್ನಡಪರ ಸಂಘಟನೆಗಳ ಬಗ್ಗೆ ಅಪಾರ ಗೌರವವಿದೆ. ನಾನು ಬೆಳಗಾವಿಯಲ್ಲಿ ಹೇಳಿದ ಹೇಳಿಕೆಯನ್ನು ತಿರುಚಲಾಗಿದ್ದು, ನನ್ನನ್ನು ಭಾಷಾ ವಿರೋಧಿಯಾಗಿ ಬಿಂಬಿಸುವ ವ್ಯವಸ್ಥಿತ ಪಿತೂರಿ ಮಾಡಲಾಗಿದೆ. ಈ ರೀತಿ ಮಾಡಿದವರ ವಿರುದ್ಧ ಶೀಘ್ರ ಕಾನೂನು ಹೋರಾಟ ನಡೆಸಲಾಗುವುದು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ರಾಜ್ಯದ ಹಿತಕ್ಕೆ ನಾನು ಬದ್ಧನಾಗಿದ್ದು, ಕನ್ನಡ ಪರ ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ. ಕರ್ನಾಟಕದ ಒಂದಿಂಚು ಕೂಡ ಜಾಗವನ್ನೂ ಮಹಾರಾಷ್ಟ್ರಕ್ಕೆ ನೀಡಲು ಸಾಧ್ಯವಿಲ್ಲ. ಕನ್ನಡ ನಾಡು, ನುಡಿ ಹಾಗೂ ಕನ್ನಡಿಗರಿಗೆ ಅಪಮಾನವಾದರೆ ನಾನು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಭರವಸೆ ನೀಡಿದರು.