Asianet Suvarna News Asianet Suvarna News

12 ಶಂಕಿತ ಉಗ್ರರು ಕರಾವಳಿಗೆ ಪ್ರವೇಶ: ಹೈಅಲರ್ಟ್‌!

ಶ್ರೀಲಂಕಾದಿಂದ ಭಾರತಕ್ಕೆ ಶಂಕಿತ ಉಗ್ರರು ಒಳನುಸುಳಿರುವ ಶಂಕೆ ಮೇರೆಗೆ ಕೇರಳ ಹಾಗು ಕರ್ನಾಟಕ ಕರಾವಳಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. 

ಮಂಗಳೂರು(ಸೆ.01): ಶ್ರೀಲಂಕಾದಿಂದ ಭಾರತಕ್ಕೆ ಶಂಕಿತ ಉಗ್ರರು ಒಳನುಸುಳಿರುವ ಶಂಕೆ ಮೇರೆಗೆ ಕೇರಳ ಹಾಗು ಕರ್ನಾಟಕ ಕರಾವಳಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಈಗಾಗಲೇ ಎರಡು ಯಾಂತ್ರೀಕೃತ ಬೋಟ್‌ಗಳಲ್ಲಿ 12 ಶಂಕಿತ ಉಗ್ರರು ಪಾಕಿಸ್ತಾನಕ್ಕೆ ತೆರಳುವ ಉದ್ದೇಶದಿಂದ ಶ್ರೀಲಂಕಾದಿಂದ ಕೇರಳದ ಅಲಪ್ಪುಝ ಬಂದರಿಗೆ ತಲುಪಿರುವ ಬಗ್ಗೆ ಮಾಹಿತಿ ಗುಪ್ತಚರ ಇಲಾಖೆಗೆ ಲಭಿಸಿದ್ದು ಕರಾವಳಿ ಕಾವಲು ಪೊಲೀಸ್‌ ಹಾಗೂ ತಟರಕ್ಷಣಾ ಪಡೆಗಳನ್ನು ಅಲರ್ಟ್‌ ಆಗಿರುವಂತೆ ಸೂಚಿಸಲಾಗಿದೆ. ಈ ಪಡೆಗಳು ಸಮುದ್ರದಲ್ಲಿ ಗಸ್ತು ಬಿಗುಗೊಳಿಸಿವೆ.

ಅಲಪ್ಪುಳದಿಂದ ಕೇರಳ ಅಥವಾ ಕರ್ನಾಟಕ ಯಾವುದೇ ಭಾಗದಿಂದ ಶಂಕಿತ ಉಗ್ರರು ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆಯನ್ನು ಗುಪ್ತಚರ ಇಲಾಖೆ ಕೇಂದ್ರಕ್ಕೆ ರವಾನಿಸಿದೆ. ತಮಿಳ್ನಾಡು ಕರಾವಳಿಗೆ ಬಂದು ಅಲ್ಲಿಂದ ರಸ್ತೆ ಮೂಲಕ ಕೇರಳ ಅಥವಾ ಕರ್ನಾಟಕ್ಕೆ ಆಗಮಿಸುವುದು. ಬಳಿಕ ಸಮುದ್ರ ಮಾರ್ಗದಲ್ಲಿ ಅಂತಾರಾಷ್ಟ್ರೀಯ ಜಲರೇಖೆ ವರೆಗೆ ಮೀನುಗಾರಿಕಾ ಬೋಟ್‌ಗಳಲ್ಲಿ ಸಾಗಿ, ಅಲ್ಲಿಂದ ಪಾಕಿಸ್ತಾನಿ ಬೋಟ್‌ಗಳಲ್ಲಿ ತೆರಳುವ ಉದ್ದೇಶ ಹೊಂದಿದ್ದಾರೆ.

ಅಲ್ಲಿ ಇವರಿಗಾಗಿ ಪಾಕಿಸ್ತಾನಿ ಬೋಟ್‌ ಕಾಯುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ ಸಮುದ್ರದಲ್ಲಿ ಗಸ್ತು ಬಿಗುಗೊಳಿಸುವುದರೊಂದಿಗೆ ಅನುಮಾನಾಸ್ಪದ ವ್ಯಕ್ಯಿಗಳು ಅಥವಾ ಬೋಟ್‌ ಕಂಡು ಬಂದರೆ ಪೊಲೀಸರಿಗೆ ತಿಳಿಸುವಂತೆ ಸ್ಥಳೀಯ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಕಡಲ ಕಿನಾರೆಯ ವಸತಿಗೃಹ ಹಾಗೂ ರೆಸಾರ್ಟ್‌ಗಳಲ್ಲಿ ಶೋಧ ನಡೆಸುವಂತೆ ಸೂಚಿಸಲಾಗಿದೆ.

Video Top Stories