ಮದುವೆಗೂ ಮುನ್ನವೇ ಲವ್ವಲ್ಲಿ ಬಿದ್ದಿದ್ದಳು; ಅವಳ ಸಾವಿಗೆ ಬಾಯ್ಫ್ರೆಂಡ್ ಕಾರಣ!
ಚಾಮರಾಜಗರದಲ್ಲಿ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದ್ದು, ಪೊಲೀಸ್ ಠಾಣೆಯ ಪಕ್ಕದಲ್ಲೇ ಈ ದುರ್ಘಟನೆ ಸಂಭವಿಸಿದೆ.
ಚಾಮರಾಜನಗರ (ಜೂನ್ 6): ಸಾಮಾನ್ಯವಾಗಿ ಆರಂಭವಾದ ಸಂಸಾರದ ಜಗಳ, ಕೊನೆಗೆ ಹತ್ಯೆಯ ರೂಪ ತಾಳಿದ್ದು, ನಗರದಲ್ಲಿ ತೀವ್ರ ಆಘಾತ ಉಂಟುಮಾಡಿದೆ. ಚಾಮರಾಜಗರ ಸ್ಥಳೀಯ ಪೊಲೀಸ್ ಠಾಣೆಯ ಪಕ್ಕದಲ್ಲೇ ಪತಿ ತನ್ನ ಪತ್ನಿಯನ್ನೇ ಬರ್ಬರವಾಗಿ ಕೊಂದಿರುವ ಘಟನೆ ವರದಿಯಾಗಿದೆ.
ಈ ಜೋಡಿ ಸುಮಾರು 8 ವರ್ಷಗಳಿಂದ ಸಂಸಾರ ನಡೆಸುತ್ತಿದ್ದು, ದಂಪತಿಗೆ ಇಬ್ಬರು ಪುಟ್ಟ ಮಕ್ಕಳು ಇದ್ದರು. ಪತಿ ಕೂಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಮನೆಯಲ್ಲಿಯೇ ಮಕ್ಕಳನ್ನು ಬೆಳೆಸುತ್ತಿದ್ದಳು. ಆದರೆ, ಈ ಸಂಸಾರದಲ್ಲಿ ಜಗಳ ಮಾತ್ರ ದಿನನಿತ್ಯದದ್ದು ಆಗಿಬಿಟ್ಟಿತ್ತು. ಹಲವು ಬಾರಿ ಪಕ್ಕದವರ ರಾಜಿ ಪಂಚಾಯಿತಿಗಳು ನಡೆದರೂ ಫಲವಿಲ್ಲ. ಕೊನೆಗೆ ಬಡವರ ಈ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇಬ್ಬರೂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು. ಆದರೆ, ದೂರವಾಗಿ ಬಾಳುವುದರ ಬದಲು ಪತಿ ಮಾಡಿದ ಕ್ರೂರತೆ ಬೆಚ್ಚಿ ಬೀಳಿಸುವಂತಿತ್ತು. ಠಾಣೆಯಿಂದ ಹೊರಬಂದ ತಕ್ಷಣವೇ ಪತಿ ಪತ್ನಿಯ ಕತ್ತಿಗೆ ಚಾಕು ಹಾಕಿ ಪತ್ನಿಯ ಪ್ರಾಣವನ್ನೇ ಕಿತ್ತುಕೊಂಡಿದ್ದಾನೆ.
ಇನ್ನು ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದು, ಘಟನೆಗೆ ಕಾರಣ ಪತ್ನಿಯ ಅನೈತಿಕ ಸಂಬಂಧ ಎನ್ನಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಮಕ್ಕಳ ಭವಿಷ್ಯದ ಮೇಲೆ ಕಾರ್ಮೋಡ ಕವಿದಿದೆ. ಈ ದುರ್ಘಟನೆಯಲ್ಲಿ ತಪ್ಪು ಯಾರದ್ದು ಎಂಬುದಕ್ಕಿಂತ, ಮಕ್ಕಳ ಪವಿತ್ರ ಹೃದಯಗಳಿಗೆ ಶಿಕ್ಷೆ ಆಗಬಾರದು ಎಂಬದು ಮುಖ್ಯ ಪ್ರಶ್ನೆಯಾಗಿದೆ.
ಸಿನಿಮಾ ಥರ ಬ್ಯಾಂಕ್ ದೋಚಿದ 8 ಕಳ್ಳರ ಗ್ಯಾಂಗ್:
ನಗರದ ಪ್ರತಿಷ್ಠಿತ ಬ್ಯಾಂಕ್ ಒಂದರಲ್ಲಿ ನಡೆದಿರುವ ಚಿನ್ನದ ರಾಬರಿ ಪ್ರಕರಣ ಇದೀಗ ತೀವ್ರ ತಲೆನೋವಿನ ವಿಷಯವಾಗಿದೆ. ಸ್ಮಾರ್ಟ್ ಗ್ಯಾಂಗ್ ಆಗಿದ್ದ 8 ಜನ ಕಳ್ಳರು, ಸಿನಿಮೀಯ ಶೈಲಿಯಲ್ಲಿ ಈ ಕೃತ್ಯವೆಸಗಿದ್ದು, ಪೊಲೀಸರ ಮುಂದಿರುವ ಸವಾಲು ದೊಡ್ಡದಾಗಿದೆ. ಕಳ್ಳರು ಮೊದಲು ಬ್ಯಾಂಕ್ಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿದರು. ಬಳಿಕ ಡುಪ್ಲಿಕೇಟ್ ಕೀ ಬಳಸಿ ಲಾಕರ್ ತೆರೆಯುವ ಮೂಲಕ ನಿಖರವಾಗಿ ಚಿನ್ನಾಭರಣಗಳ ಲಾಕರ್ ಪತ್ತೆ ಮಾಡಿ ಕೆ.ಜಿ ಗಟ್ಟಲೆ ಚಿನ್ನವನ್ನೇ ಎಗರಿಸಿದ್ದಾರೆ. ಹೃದಯಬೇಧಕ ವಿಷಯ ಏನೆಂದರೆ, ಘಟನೆಯ 10 ದಿನಗಳಾದರೂ ತನಿಖಾ ಅಧಿಕಾರಿಗಳಿಗೆ ಯಾವುದೇ ಪಕ್ಕಾ ಸುಳಿವು ಸಿಕ್ಕಿಲ್ಲ.
ಇದೀಗ ಪೊಲೀಸರ ಅನುಮಾನ ಬ್ಯಾಂಕ್ ಸಿಬ್ಬಂದಿಗಳ ಮೇಲೆಯೇ ನೆಟ್ಟಿದೆ. ಒಳಗಿನ ಮಾಹಿತಿಯಿಲ್ಲದೆ ಇಂತಹ ನಿಖರ ದರೋಡೆ ಸಾಧ್ಯವೇ ಇಲ್ಲವೆಂಬುದಾಗಿ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಸಿಬ್ಬಂದಿಗಳ ಮೇಲೂ ವಿಚಾರಣೆ ಪ್ರಾರಂಭವಾಗಿದೆ. ಈ ಘಟನೆಯ ದಿನದಿಂದಲೂ ಇಲ್ಲಿ ಅಡವಿಟ್ಟ ಚಿನ್ನದ ಮಾಲೀಕರು ನ್ಯಾಯಕ್ಕಾಗಿ ಕಾದು ಕಣ್ಣೀರು ಹಾಕುತ್ತಿದ್ದಾರೆ. ಕಳ್ಳರು ಕದ್ದೊಯ್ದ ಚಿನ್ನ ವಾಪಸ್ ಬರಲಿ ಎಂದು ಕಾಯುತ್ತಿದ್ದಾರೆ.