ರಾಜ್ಯದಲ್ಲಿ ಸ್ಮಾರ್ಟ್ ಪ್ರೊಡಕ್ಷನ್ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ: ಸಚಿವ ಶೆಟ್ಟರ್
ಬಾಶ್, ಜನರಲ್ ಎಲೆಕ್ಟ್ರಿಕಲ್ಸ್, ಡಸಾಲ್ಟ್, ಸೀಮನ್ಸ್ ಕಂಪನಿಗಳ ಸಹಯೋಗದಲ್ಲಿ ಕಾರ್ಯಗತ| ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಡಿಜಿಟಲ್ ಆರ್ಥಿಕತೆಯ ಪರಿಕಲ್ಪನೆಯು ಮುಂಚೂಣಿಗೆ ಬಂದಿದ್ದು, ಇದರಿಂದ ಉತ್ಪಾದಕ, ಮಾರಾಟಗಾರ ಹಾಗೂ ಗ್ರಾಹಕನಿಗೆ ಹೆಚ್ಚು ಅನುಕೂಲ| ಡಿಜಿಟಲ್ ಆರ್ಥಿಕತೆಯಲ್ಲಿ ತಂತ್ರಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಆಗಬೇಕು ಎಂದ ಶೆಟ್ಟರ್|
ಬೆಂಗಳೂರು(ನ.22): ಕೋವಿಡ್-19ರ ಅಘಾತದಿಂದ ಕೈಗಾರಿಕಾ ವಲಯ ಚೇತರಿಸಿಕೊಂಡಿದೆ. ರಾಜ್ಯದಲ್ಲಿ ಕೈಗಾರಿಕೆಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಲು ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸ್ಮಾರ್ಟ್ ಪ್ರೊಡಕ್ಷನ್ ಕೇಂದ್ರ’ವನ್ನು ಸ್ಥಾಪಿಸಲು ಉದ್ದೇಶಿಸಿದ್ದೇವೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಬೆಂಗಳೂರು ಟೆಕ್ ಶೃಂಗದಲ್ಲಿ ರಾಜ್ಯ ಸರ್ಕಾರದ ಸಚಿವರುಗಳ ಗೋಷ್ಠಿಯಲ್ಲಿ ಭಾಗವಹಿಸಿದ ಮಾತನಾಡಿದ ಅವರು, ಈ ಕೇಂದ್ರವನ್ನು ಬಾಶ್, ಜನರಲ್ ಎಲೆಕ್ಟ್ರಿಕಲ್ಸ್, ಡಸಾಲ್ಟ್, ಸೀಮನ್ಸ್ ಕಂಪನಿಗಳ ಸಹಯೋಗದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಡಿಜಿಟಲ್ ಆರ್ಥಿಕತೆಯ ಪರಿಕಲ್ಪನೆಯು ಮುಂಚೂಣಿಗೆ ಬಂದಿದ್ದು, ಇದರಿಂದ ಉತ್ಪಾದಕ, ಮಾರಾಟಗಾರ ಹಾಗೂ ಗ್ರಾಹಕನಿಗೆ ಹೆಚ್ಚು ಅನುಕೂಲವಾಗುತ್ತಿದೆ. ಡಿಜಿಟಲ್ ಆರ್ಥಿಕತೆಯಲ್ಲಿ ತಂತ್ರಜ್ಞಾನವನ್ನು ಇನ್ನಷ್ಟುಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಆಗಬೇಕು ಎಂದು ಹೇಳಿದರು.
ಜಗತ್ತಿನ ಅತಿದೊಡ್ಡ ಬೆಂಗಳೂರು ಟೆಕ್ ಶೃಂಗ: ಡಿಸಿಎಂ ಅಶ್ವತ್ಥ ನಾರಾಯಣ
ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಮೊಟ್ಟಮೊದಲು ಜಾರಿಗೊಳಿಸುತ್ತಿರುವ ರಾಜ್ಯ ಕರ್ನಾಟಕ. ಈ ನೀತಿಯನ್ನು ಜಾರಿಗೆ ತಂದು ನಮ್ಮ ಶಿಕ್ಷಣ ವ್ಯವಸ್ಥೆಗೆ ಆಧುನಿಕ ಸ್ಪರ್ಶ ನೀಡಲಿದ್ದೇವೆ. ಈಗಾಗಲೇ ಶಿಕ್ಷಣ ಇಲಾಖೆಯ ಬಹುತೇಕ ಚಟುವಟಿಕೆಗಳು ಆನ್ಲೈನ್ ಮೂಲಕವೇ ನಡೆಯುತ್ತಿದೆ ಎಂದು ತಿಳಿಸಿದರು.