ರೋಗಪೀಡಿತೆ ಆತ್ಮಹತ್ಯೆ: ಇಡೀ ಕೆರೆ ನೀರು ಹೊರಹಾಕಿಸಿದ ಜನರು!
ನವಲಗುಂದ ತಾಲೂಕು ಮೊರಬ ಗ್ರಾಮದ ಕೆರೆಯಲ್ಲಿ ರೋಗಪೀಡಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಕೆರೆಯ ಸಂಪೂರ್ಣ ನೀರನ್ನು ಹಳ್ಳಕ್ಕೆ ಹೊರ ಹಾಕುವ ಪ್ರಯತ್ನ ನಡೆಯುತ್ತಿದೆ.
ಧಾರವಾಡ[ಡಿ.05]: ಕೆರೆಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಎಂಬ ಕಾರಣಕ್ಕೆ ಕಳೆದ ಐದಾರು ತಿಂಗಳ ಹಿಂದಷ್ಟೇ ನವಲಗುಂದ ತಾಲೂಕು ನಾವಳ್ಳಿ ಕೆರೆಯ ನೀರನ್ನು ಗ್ರಾಮಸ್ಥರು ಪಂಪ್ ಸೆಟ್ ಬಳಸಿ ಖಾಲಿ ಮಾಡಿದ್ದರು. ಇದೀಗ ಅದೇ ತಾಲೂಕಿನ ಮೊರಬ ಗ್ರಾಮದ ಕೆರೆಯಲ್ಲಿ ಮಾರಕ ರೋಗಪೀಡಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಕೆರೆಯ ಸಂಪೂರ್ಣ ನೀರನ್ನು ಹಳ್ಳಕ್ಕೆ ಹೊರ ಹಾಕುವ ಪ್ರಯತ್ನ ನಡೆಯುತ್ತಿದೆ.
ಮಾರಕ ರೋಗ ಹೊಂದಿದ್ದ ಗ್ರಾಮದ ಮಹಿಳೆಯೊಬ್ಬರು ಮೊರಬ ಗ್ರಾಮದ ಏಕೈಕ ಕುಡಿಯುವ ನೀರಿನ ಕೆರೆಗೆ ಹಾರಿ ನಾಲ್ಕೈದು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡು ದಿನಗಳ ಹಿಂದೆ ಶವ ಮೇಲೆದ್ದಾಗ ಗ್ರಾಮಸ್ಥರಿಗೆ ವಿಷಯ ತಿಳಿದು ತಮಗೂ ಆ ರೋಗ ಅಂಟಬಹುದು ಎಂಬ ಭಯದಲ್ಲಿ ಇಡೀ ಕೆರೆಯ ನೀರನ್ನು ಸೈಫೋನ್ ಪೈಪುಗಳ ಮೂಲಕ ಹೊರ ಹಾಕಿಸುತ್ತಿದ್ದಾರೆ. ನೀರು ಪಕ್ಕದ ತುಪರಿ ಹಳ್ಳ ಸೇರುತ್ತಿದೆ.
ಅತಿ ದೊಡ್ಡ ಗ್ರಾಪಂಗಳಲ್ಲಿ ಒಂದಾದ ಮೊರಬ 18 ಸಾವಿರ ಜನಸಂಖ್ಯೆ ಹೊಂದಿದ್ದು, 36 ಎಕರೆ ವಿಸ್ತೀರ್ಣದ ಈ ಕೆರೆಯೇ ಗ್ರಾಮದ ಜನರಿಗೆ ಕುಡಿಯುವ ನೀರಿನ ಮೂಲವಾಗಿದೆ. ಇದರ ನೀರನ್ನು ಜನರು ನೇರವಾಗಿ ಕುಡಿಯುತ್ತಾರೆ.
ಎರಡ್ಮೂರು ವರ್ಷಗಳ ಹಿಂದೆಯೇ ಈ ಕೆರೆಗೆ ಅಳವಡಿಸಿದ್ದ ಶುದ್ಧೀಕರಣ ಘಟಕ ಸಹ ಕೈಕೊಟ್ಟಿದ್ದರಿಂದ ಗ್ರಾಮಸ್ಥರು ಇದರ ನೀರನ್ನು ನೇರವಾಗಿಯೇ ಕುಡಿಯಲು ಬಳಸುತ್ತಿದ್ದರು. ಇದೀಗ ರೋಗಪೀಡಿತ ಮಹಿಳೆಯು ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಶವವನ್ನು ಮೀನುಗಳು ಅಲ್ಲಲ್ಲಿ ಕಚ್ಚಿ ತಿಂದಿವೆ. ಹೀಗಾಗಿ ಗ್ರಾಮಸ್ಥರು ನೀರನ್ನು ಬಳಸಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅನಿವಾರ್ಯವಾಗಿ ನೀರು ಖಾಲಿ ಮಾಡುವ ಪ್ರಯತ್ನ ನಡೆಸುತ್ತಿದೆ.