Asianet Suvarna News Asianet Suvarna News

ಉಗ್ರರು ಸಿಕ್ಕ ರಾಮನಗರದಲ್ಲೀಗ ಬಾಂಗ್ಲಾತಂಕ!

ಅಕ್ರಮ ವಲಸಿಗರ ವಿರುದ್ಧ ಕೇಂದ್ರ ಸರಕಾರ ಸಮರ ಸಾರಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಅಕ್ರಮ ವಲಿಸಿಗರ ಬಗ್ಗೆ ಸರಕಾರದ ಗಮನ ಎಳೆಯಲು ಯತ್ನಿಸುತ್ತಿದ್ದು, ಎಲ್ಲೆಡೆ ಅನ್ಯ ದೇಶೀಯರು ಇರುವುದು ಪತ್ತೆಯಾಗುತ್ತಿದೆ. ಕೇವಲ ಬೆಂಗಳೂರು ಮಾತ್ರವಲ್ಲ, ನೆರೆ ರಾಮನಗರದಲ್ಲಿಯೂ ಉಗ್ರರು ಪತ್ತೆಯಾಗಿದ್ದಾರೆ. 

Ramanagara of Karnataka also faces threats from terrorists
Author
Bengaluru, First Published Oct 30, 2019, 8:30 AM IST

ಎಂ.ಅಫ್ರೋಜ್ ಖಾನ್

ರಾಮ​ನ​ಗರ (ಅ.30): ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆ ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾ​ದೇಶ್‌ (ಜೆ​ಎಂಬಿ​) ಸಂಘ​ಟನೆಗೆ ಸೇರಿದ ಉಗ್ರರು ಸೆರೆ ಸಿಕ್ಕ ನಂತರ ರೇಷ್ಮೆ ನಗರಿ ರಾಮನಗರದಲ್ಲಿ ಅಕ್ರಮ ಬಾಂಗ್ಲಾ ವಲ​ಸಿ​ಗರು ನೆಲೆ​ಸಿ​ರುವ ಬಗ್ಗೆ ಸ್ಥಳೀಯರಿಗೆ ಆತಂಕ ಹೆಚ್ಚಾಗಿದೆ.

ರಾಜ್ಯ ರಾಜ​ಧಾನಿ ಬೆಂಗ​ಳೂ​ರಿಗೆ ಸನಿ​ಹ​ದ​ಲ್ಲಿ​ರುವ ರಾಮ​ನ​ಗ​ರ​ ಹಾಗೂ ದೊಡ್ಡ​ಬ​ಳ್ಳಾ​ಪು​ರ​ದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶಂಕಿತ ಉಗ್ರ​ರನ್ನು ವಶಕ್ಕೆ ಪಡೆ​ದಿ​ತ್ತು. ಶಂಕಿತ ಉಗ್ರರಂತೆಯೇ ಅಕ್ರಮ ಬಾಂಗ್ಲಾ ವಲ​ಸಿ​ಗರು ಸಹ ಸುಲಭ ಮಾರ್ಗ​ದ​ಲ್ಲಿಯೇ ಆಗ​ಮಿಸಿ ಸುತ್ತ​ಮು​ತ್ತಲ ಪ್ರದೇ​ಶ​ದಲ್ಲಿ ನೆಲೆ​ಸಿ​ರುವ ಶಂಕೆ ಬಲ​ವಾ​ಗಿದೆ.

ಕಳೆದ 2018ರ ಆಗಸ್ಟ್‌ನಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರ ಮುನೀರ್‌ ಶೇಖ್‌ ವಾಸ​ವಿದ್ದ ರಾಮ​ನ​ಗ​ರದ ಟ್ರೂಪ್‌ಲೈನ್‌ ಬಡಾ​ವ​ಣೆ​, ಈತನ ಅತ್ತೆ-ಮಾವ ಹಾಗೂ ಸಹ​ಚರ ಹಬೀ​ಬುರ್‌ ರೆಹ​ಮಾನ್‌ ನೆಲೆ​ಸಿದ್ದ ಟಿಪ್ಪು ಬಡಾ​ವ​ಣೆ ಸೇರಿ​ದಂತೆ ಸುತ್ತ​ಮು​ತ್ತಲ ಬಡಾ​ವ​ಣೆ​ಗ​ಳಲ್ಲಿ ಮನೆ​ಗಳು ಖಾಲಿ ಇದ್ದರೂ ಅವು​ಗ​ಳನ್ನು ಬಾಡಿ​ಗೆಗೆ ನೀಡಲು ಮಾಲಿ​ಕರು ಧೈರ್ಯ ಮಾಡು​ತ್ತಿಲ್ಲ ಎಂದು ತಿಳಿದು ಬಂದಿದೆ.

ಕಡಿಮೆ ಕೂಲಿಗೆ ದುಡಿ​ಯುವ ವಲ​ಸಿ​ಗ​ರು:

ಜಿಲ್ಲೆಯ ಜನ​ವ​ಸತಿ ಪ್ರದೇ​ಶ​ಗ​ಳಲ್ಲಿ ಅದ​ರಲ್ಲೂ ಮುಸ್ಲಿಂ ಬಾಹು​ಳ್ಯ​ವುಳ್ಳ ಸ್ಥಳ​ಗ​ಳಲ್ಲಿ ಬಟ್ಟೆವ್ಯಾಪಾರಿ, ಕೂಲಿಕಾರರು, ಕಾರ್ಮಿಕರ ಸೋಗಿನಲ್ಲಿ ಬರು​ವ​ವರ ಸಂಖ್ಯೆ ಹೆಚ್ಚಾ​ಗು​ತ್ತಲೇ ಇದೆ. ಪರ ಊರು, ಹೊರ ರಾಜ್ಯ ಮಾತ್ರ​ವ​ಲ್ಲದೆ ನೆರೆಯ ದೇಶ​ಗ​ಳಿಂದಲೂ ವಲಸೆ ಬಂದು ನೆಲೆ​ಸಿ​ದ್ದಾರೆ. ಎಷ್ಟುವರ್ಷಗಳಿಂದ ನೆಲೆಸಿದ್ದಾರೆ? ಅವರ ವೃತ್ತಿ, ಹಿನ್ನೆಲೆ ಏನೆಂಬುದು ಮಾತ್ರ ಯಾರಿಗೂ ತಿಳಿ​ದಿಲ್ಲ.

ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ ಸೇರಿದಂತೆ ಇನ್ನಿತರ ರಾಜ್ಯಗಳ ನಾಗರಿಕರು ಎಂದು ರಾಮ​ನ​ಗ​ರಕ್ಕೆ ಬರುವ ವಲಸಿಗರು ಹೇಳಿಕೊಳ್ಳುತ್ತಾರೆ. ಆದರೆ ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳನ್ನು ಅವರು ಮಾತನಾಡುವ ಶೈಲಿಯ ಮೂಲಕ ಅವರ ಮೂಲ ಅರಿಯುವುದು ಕಷ್ಟವಾಗಿದೆ.

ಕಟ್ಟಡ ಕಾರ್ಮಿಕರಾಗಿ, ಇಟ್ಟಿಗೆ ಕಾರ್ಖಾನೆ, ನೂಲು ಬಿಚ್ಚಣಿಕೆ ಕೇಂದ್ರಗಳು ಸೇರಿದಂತೆ ಕಡಿಮೆ ಕೂಲಿಗೆ ಕಾರ್ಮಿಕರನ್ನು ನಿರೀಕ್ಷಿಸುವ ಕ್ಷೇತ್ರ​ಗ​ಳಲ್ಲಿ ಸ್ಥಳೀಯ ಕಾರ್ಮಿಕರು ನಿಗದಿತ ಪ್ರಮಾಣದ ವೇತನ, ಕೂಲಿಯನ್ನು ಕೇಳುತ್ತಾರೆ. ಆದರೆ, ಅಕ್ರಮ ವಲಸಿಗರು ಅತ್ಯಂತ ಕಡಿಮೆ ಕೂಲಿಗೆ ಕೆಲಸಕ್ಕೆ ಬರುತ್ತಾರೆ. ಕೆಲವು ವಲಸಿಗರಿಗೆ ಕನಿಷ್ಠ ಕೂಲಿ ಮೊತ್ತದ ಯಾವ ಜ್ಞಾನವೂ ಇರುವುದಿಲ್ಲ.

ಕಾರ್ಖಾನೆ ಮಾಲಿಕ​ರು, ಮೇಸ್ತಿ್ರಗಳಿಗೆ ಹಣ ಉಳಿತಾಯಕ್ಕೆ ಕಮ್ಮಿ ಕೂಲಿ ನಿರೀಕ್ಷಿಸುವ ಕಾರ್ಮಿಕರೇ ಬೇಕು. ವಲಸಿಗರಿಗೆ ಕೆಲಸ ಮತ್ತು ಉಳಿದುಕೊಳ್ಳಲು ಇಲ್ಲಿ ಜಾಗ ಬೇಕು. ಈ ಎರಡು ಅವಕಾಶಗಳು ಹೇರಳವಾಗಿರುವ ಕಾರಣ ಅಕ್ರಮ ವಲಸಿಗರು ಇಲ್ಲಿ ಬಂದು ನೆಲೆ​ಸುವುದು ಹೆಚ್ಚುತ್ತಿದೆ.

ಕಾರ್ಖಾನೆ ಮಾಲಿ​ಕರು ಅಥವಾ ಮೇಸ್ತ್ರಿ​ಗಳೇ ವಲ​ಸಿ​ಗರಿಗೆ ವಾಸ್ತ​ವ್ಯಕ್ಕೆ ವ್ಯವಸ್ಥೆ ಮಾಡಿ​ಕೊ​ಟ್ಟಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಹಾಗೂ ವೋಟರ್‌ ಐಡಿ ಪಡೆದುಕೊಂಡಿದ್ದಾರೆ. ವೋಟ್‌ ಸಿಗುತ್ತದೆ ಎಂಬ ಕಾರಣಕ್ಕೆ ಕೆಲ ರಾಜಕಾರಣಿಗಳು ಇವರಿಗೆ ಇಲ್ಲಿನ ದಾಖಲೆ ಕೊಡಿಸಲು ನೆರವಾಗಿದ್ದಾರೆ ಎಂಬ ಆರೋ​ಪ​ಗಳು ಇವೆ.

ಕರ್ನಾ​ಟ​ಕ​ದ​ ಆಧಾರ್‌ ಇದ್ದರೆ ಮನೆ ಬಾಡಿ​ಗೆಗೆ

ಬಟ್ಟೆವ್ಯಾಪಾರಿ ಸೋಗಿ​ನಲ್ಲಿ ಬಂದಿದ್ದ ಶಂಕಿತ ಉಗ್ರ ಮುನೀರ್‌ ಶೇಖ್‌ ತನ್ನ ಆಧಾರ್‌ ಕಾರ್ಡ್‌ ನೀಡಿಯೇ ಮನೆ ಬಾಡಿ​ಗೆಗೆ ಗಿಟ್ಟಿ​ಸಿ​ಕೊಂಡಿ​ದ್ದ. ಆಧಾರ್‌ ಕಾರ್ಡ್‌ನಲ್ಲಿ ಮುನೀರ್‌ ಭಾವಚಿತ್ರ ಮತ್ತು ದೆಹಲಿ ವಿಳಾಸವಿತ್ತು. ಹೀಗಾಗಿ ಬಹು​ತೇಕ ಮನೆ ಮಾಲಿ​ಕರು ಅಪ​ರಿ​ಚಿ​ತರು ಮಾತ್ರ​ವಲ್ಲ ಪರಿ​ಚಿ​ತ​ರಿಗೂ ಮನೆ​ಯನ್ನು ಬಾಡಿ​ಗೆಗೆ ನೀಡಲು ನಿರಾ​ಕ​ರಿ​ಸು​ತ್ತಿ​ದ್ದಾರೆ. ಕೆಲ​ವರು ಮಾತ್ರ ಕರ್ನಾ​ಟ​ಕದ ಆಧಾರ್‌ ಕಾರ್ಡ್‌ ಹೊಂದಿ​ದ​ವ​ರಿಗೆ ಮನೆ​ ಬಾಡಿಗೆಗೆ ನೀಡು​ತ್ತಿ​ದ್ದಾರೆ.

ಶಂಕಿತ ಉಗ್ರರು ಬಾಡಿಗೆ ಮನೆ​ಯಲ್ಲಿ ಆಶ್ರಯ ಪಡೆ​ದಿದ್ದು ಹಾಗೂ ಕೆಲ ದಿನ​ಗಳ ಹಿಂದಷ್ಟೇ ಶಂಕಿತ ಉಗ್ರ ಹಬೀ​ಬುರ್‌ ರೆಹ​ಮಾನ್‌ ಸುಳಿ​ವಿನ ಮೇರೆ​ಗೆ ಸುಧಾ​ರಿತ ಸ್ಫೋಟ​ಕ​ಗ​ಳ​ನ್ನು ವಶ ಪಡಿ​ಸಿ​ಕೊಂಡ ಆತಂಕ​ಕಾರಿ ಘಟನೆ ನಡೆದ ನಂತರ ಪೊಲೀಸ್‌ ಇಲಾಖೆ ಎಚ್ಚೆ​ತ್ತು​ಕೊಂಡಿದೆ.

ಬಾಡಿಗೆ ಮನೆಗಳಲ್ಲಿ ವಾಸವಿರುವವರ ಸಂಪೂರ್ಣ ಮಾಹಿತಿ ಕಲೆಹಾಕುವ ಕಾರ್ಯ ಪೊಲೀಸ್‌ ಇಲಾ​ಖೆ​ಯಿಂದ ನಡೆ​ಯು​ತ್ತಿದೆ. ಬೀಟ್‌ ಪೊಲೀಸರ ಮೂಲಕ ಪ್ರತಿ ವಾರ್ಡಿನಲ್ಲಿ ವಾಸವಾಗಿರುವ ವಲ​ಸಿ​ಗರ ಸಂಪೂರ್ಣ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ರಾಮನಗರ ಮಾತ್ರ​ವ​ಲ್ಲದೆ ಚನ್ನ​ಪ​ಟ್ಟಣ, ಕನ​ಕ​ಪುರ ಹಾಗೂ ಮಾಗಡಿಯಲ್ಲಿಯೂ ಮಾಹಿತಿ ಸಂಗ್ರಹ ಕಾರ್ಯ ಪ್ರಗ​ತಿ​ಯ​ಲ್ಲಿದೆ.

ಅಲ್ಲದೆ, ಮನೆ ಮಾಲಿ​ಕರು ಸ್ವಯಂಪ್ರೇರಿ​ತ​ರಾಗಿ ಬಾಡಿ​ಗೆ​ದಾ​ರರ ವಿವ​ರ​ಗ​ಳ​ನ್ನು ತಮ್ಮ ಹತ್ತಿ​ರದ ಪೊಲೀಸ್‌ ಠಾಣೆಗೆ ಸಲ್ಲಿ​ಸ​ಬ​ಹು​ದು. ನಿಗದಿತ ಅರ್ಜಿಯಲ್ಲಿ ಮನೆ ಮಾಲಿಕರ ಮಾಹಿತಿ ಜೊತೆಗೆ ಬಾಡಿಗೆದಾರರ ವಿವರ, ಭಾವಚಿತ್ರ, ಗುರುತಿನ ದಾಖಲೆ ನೀಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾ​ರಿ​ಗಳು ಕಟ್ಟು​ನಿ​ಟ್ಟಿನ ಸೂಚನೆ ನೀಡಿ​ದ್ದಾರೆ.

ಅಕ್ರಮ ವಲಸಿಗರ ಬಗ್ಗೆ ಸಾಕ್ಷ್ಯ ಕೊಟ್ಟರೂ ನಿರ್ಲಕ್ಷ್ಯ

ಆ ಮೂವರು ಉಗ್ರರು ಯಾರು?

2013ರ ಜುಲೈ 7ರಂದು ಬಿಹಾರದ ಪಟನಾ ಜಿಲ್ಲೆಯ ಬೋಧಗಯಾದ ಬುದ್ಧ ಮಂದಿರ ಆವರಣ ಹಾಗೂ 2014ರಲ್ಲಿ ಪಶ್ಚಿಮ ಬಂಗಾಳದ ಬರ್ಧಮಾನ್‌ನಲ್ಲಿ ಸಂಭವಿಸಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಉಗ್ರ​ರಾದ ಮುನೀರ್‌ ಶೇಖ್‌ ಹಾಗೂ ಈತನ ಸಹ​ಚ​ರರಾದ ಹಸನ್‌ ಮತ್ತು ಹಬೀ​ಬುರ್‌ ರೆಹ​ಮಾನ್‌ ಪ್ರಮುಖ ರೂವಾ​ರಿ​ಗಳು.

ಈ ಬಾಂಬ್‌ ಸ್ಫೋಟ ಪ್ರಕ​ರ​ಣದ ನಂತರ ಇವ​ರೆ​ಲ್ಲರೂ ತಲೆ ಮರೆ​ಸಿ​ಕೊಂಡಿ​ದ್ದರು. 2017ರಲ್ಲಿ ಕರ್ನಾಟಕಕ್ಕೆ ಬಂದಿದ್ದ ಆರೋಪಿಗಳು ಆರಂಭದಲ್ಲಿ ಬೆಂಗಳೂರಿನ ವಿವಿಧ ಬಡಾವಣೆಗಳು, ಕೋಲಾರ, ಮಾಲೂರಿನಲ್ಲಿ ಕೆಲಕಾಲ ನೆಲೆ​ಸಿ​ದ್ದರು. ಆನಂತರ ಎಲ್ಲರೂ ರಾಮನಗರದಲ್ಲಿ ಮುಸ್ಲಿಂ ಬಾಹು​ಳ್ಯ​ವುಳ್ಳ ಪ್ರದೇ​ಶ​ದ​ಲ್ಲಿಯೇ ವಾಸವಾಗಿದ್ದರು.

ಬೆಂಗಳೂರಲ್ಲಿ ಬಾಂಗ್ಲಾ ವಲಸಿಗರ ಬಂಧನ

ಬಟ್ಟೆವ್ಯಾಪಾರಿ ಸೋಗಿ​ನಲ್ಲಿ ಬಂದಿದ್ದ ಮುನೀರ್‌ ಶೇಖ್‌ನನ್ನು ಬಾಡಿಗೆ ಮನೆ​ಯಲ್ಲಿ ವಶಕ್ಕೆ ಪಡೆ​ದರೆ, ಈತನ ಸಹ​ಚ​ರನಾದ ಹಸನ್‌ನನ್ನು ರೈಲಿ​ನಲ್ಲಿ ಹಾಗೂ ಹಬೀ​ಬುರ್‌ ರೆಹ​ಮಾನ್‌ನನ್ನು ದೊಡ್ಡ​ಬ​ಳ್ಳಾ​ಪು​ರ​ದಲ್ಲಿ ಬಂಧಿ​ಸ​ಲಾಗಿತ್ತು.

ಬಾಡಿಗೆದಾರರ ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸುವ ಮೂಲಕ ಕಾನೂನುಬಾಹಿರ, ಭಯೋತ್ಪಾದನೆಯಂಥ ಸಮಾಜಘಾತುಕ ಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯ. ಮನೆ ಬಾಡಿಗೆ ಹಣಕ್ಕಿಂತ ಜೀವನ ಸುರಕ್ಷತೆ ಮಹತ್ವದ್ದಾಗಿದೆ. ಹೀಗಾಗಿ ಸಾರ್ವಜನಿಕರು ಸುರಕ್ಷತೆಗೆ ಆದ್ಯತೆ ನೀಡಬೇಕು. ಜಿಲ್ಲೆ​ಯಲ್ಲಿ ಬಾಡಿಗೆದಾರರ ಮಾಹಿತಿ ಸಂಗ್ರಹ ಕಾರ್ಯ ಪ್ರಗ​ತಿ​ಯ​ಲ್ಲಿದೆ. ಇಲ್ಲಿ​ವ​ರೆಗೂ ಅಕ್ರಮ ಬಾಂಗ್ಲಾ ವಲ​ಸಿ​ಗರು ಯಾರೂ ಪತ್ತೆ​ಯಾ​ಗಿಲ್ಲ. ಮಾಹಿತಿ ಸಂಗ್ರಹ ಪೂರ್ಣ​ಗೊಂಡ ನಂತರ ಅದನ್ನು ಪರಿ​ಶೀ​ಲನೆ ನಡೆಸಿ ಕ್ರಮ​ ಕೈ​ಗೊ​ಳ್ಳಲಾ​ಗು​ವು​ದು.

- ಅನೂಪ್‌ ಎ.ಶೆಟ್ಟಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ರಾಮನಗರ

 

Follow Us:
Download App:
  • android
  • ios