Asianet Suvarna News Asianet Suvarna News

ಬೆಂಗಳೂರಲ್ಲಿ ವಂದೇ ಭಾರತ್‌ ರೈಲು ಗಾಲಿ ಉತ್ಪಾದನೆ

- ಉಕ್ರೇನ್‌ ಯುದ್ಧದಿಂದ ಆಮದು ವಿಳಂಬ

- ಸಕಾಲದಲ್ಲಿ ಯೋಜನೆ ಪೂರ್ಣಕ್ಕೆ ಈ ಕ್ರಮ

- 36 ಸಾವಿರ ಗಾಲಿಗಳಿಗೆ ಆರ್ಡರ್ ನೀಡಿದ್ದ ಭಾರತ

Railways to manufacture own Vande Bharat train wheels at Yelahanka in Bengaluru san
Author
Bengaluru, First Published May 7, 2022, 4:00 AM IST

ನವದೆಹಲಿ (ಮೇ.7): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಮಹತ್ವಕಾಂಕ್ಷಿ ವಂದೇ ಭಾರತ್‌ (Vande Bharat) ರೈಲು ಯೋಜನೆಯನ್ನು (Rail Project) ಸಕಾಲದಲ್ಲಿ ಪೂರ್ಣಗೊಳಿಸಲು, ರೈಲುಗಾಲಿಗಳನ್ನು ಬೆಂಗಳೂರಿನ ಕಾರ್ಖಾನೆಯಲ್ಲಿ (Bengaluru Factory) ತಯಾರಿಸಲು ಭಾರತೀಯ ರೈಲ್ವೇ (Indian Railways) ಯೋಜಿಸಿದೆ. ಈ ಗಾಲಿಗಳನ್ನು ಉಕ್ರೇನಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಯುದ್ಧದ ಕಾರಣದಿಂದಾಗಿ ಆಮದು ವಿಳಂಬವಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರಿನ ಯಲಹಂಕದಲ್ಲಿರುವ (Yelahanka ) ರೈಲುಗಾಲಿ ಕಾರ್ಖಾನೆಯನ್ನು (Rail Wheel Factory) ವಂದೇ ಭಾರತ್‌ ರೈಲುಗಾಲಿಗಳನ್ನು ತಯಾರಿಸಲು ಮೊದಲ ಆಯ್ಕೆಯಾಗಿ ರೈಲ್ವೇ ಇಲಾಖೆ ಗುರುತಿಸಿದೆ. ಈ ಚಕ್ರಗಳ ನಿರ್ಮಾಣಕ್ಕೆ ಈಗಾಗಲೇ ಟೆಂಡರ್‌ ನೀಡಲಾಗಿದೆ. ಮುಂದಿನ 2-3 ತಿಂಗಳಲ್ಲಿ ಇದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಕಾರ್ಖಾನೆ ಈಗಾಗಲೇ ಈ ರೈಲಿಗಾಗಿ ಆಕ್ಸೆಲ್‌ಗಳನ್ನು ತಯಾರಿಸುತ್ತಿದೆ. ಇದು ರೈಲುಗಾಲಿಗಳಾಗಿ ವಿದೇಶದ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಿದೆ.

ಪ್ರಪಂಚದಲ್ಲಿ ಅತಿ ಹೆಚ್ಚು ರೈಲುಗಾಲಿಗಳನ್ನು ಉತ್ಪಾದಿಸುವ ಉಕ್ರೇನಿಂದ 123 ಕೋಟಿ ರು. ವೆಚ್ಚದಲ್ಲಿ 36 ಸಾವಿರ ಗಾಲಿಗಳಿಗೆ ಆರ್ಡರ್‌ ನೀಡಲಾಗಿತ್ತು. ಇದರ ಭಾಗವಾಗಿ ಉಕ್ರೇನ್‌ 128 ಗಾಲಿಗಳನ್ನು ರೊಮೇನಿಯಾ ಮೂಲಕ ಭಾರತಕ್ಕೆ ಕಳುಹಿಸಿತ್ತು. ಅದು ಈಗ ರೊಮೇನಿಯಾದಲ್ಲೇ ಸಿಕ್ಕಿಕೊಂಡಿದೆ. ಮೇ 3ನೇ ವಾರದಲ್ಲಿ ಅದನ್ನು ವಿಮಾನದ ಮೂಲಕ ಭಾರತ ತರುವ ಸಾಧ್ಯತೆ ಇದೆ.

ಆಂಧ್ರ, ಒಡಿಶಾಕ್ಕೆ ಚಂಡಮಾರುತ ದಾಳಿ ಸಾಧ್ಯತೆ: ಐಎಂಡಿ ಎಚ್ಚರಿಕೆ
ಭುವನೇಶ್ವರ:
ದಕ್ಷಿಣ ಅಂಡಮಾನ್‌ ಸಮುದ್ರದಲ್ಲಿ ಶುಕ್ರವಾರ ಕಡಿಮೆ ಒತ್ತಡ ಪ್ರದೇಶ ನಿರ್ಮಾಣಗೊಂಡಿದ್ದು, ಶೀಘ್ರವೇ ಇದು ಚಂಡಮಾರುತದ ಸ್ವರೂಪ ತಾಳಿ ಆಂಧ್ರ ಪ್ರದೇಶ ಹಾಗೂ ಒಡಿಶಾದ ತೀರ ಪ್ರದೇಶಗಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ಒಡಿಶಾದಲ್ಲಿ ಹೈ ಅಲರ್ಚ್‌ ಘೋಷಣೆ ಮಾಡಲಾಗಿದೆ.

‘ಕಡಿಮೆ ಒತ್ತಡ ಪ್ರದೇಶವು ವಾಯುವ್ಯ ದಿಕ್ಕಿನಲ್ಲಿ ಸಾಗುತ್ತಿದ್ದು ಬಂಗಾಳಕೊಲ್ಲಿಯಲ್ಲಿ ಭಾನುವಾರ ಚಂಡಮಾರುತದ ರೂಪ ತಾಳುವ ಸಾಧ್ಯತೆಯಿದೆ. ಮೇ 10 ರಂದು ಚಂಡಮಾರುತವು ಆಂಧ್ರ ಪ್ರದೇಶ ಹಾಗೂ ಒಡಿಶಾದ ತೀರ ಪ್ರದೇಶಗಳಿಗೆ ಅಪ್ಪಳಿಸಲಿದೆ’ ಎಂದು ಐಎಂಡಿ ಅಂದಾಜಿಸಿದೆ. ಅಲ್ಲದೇ ಚಂಡಮಾರುತದ ಪ್ರಭಾವದಿಂದಾಗಿ ಪೂರ್ವ ಕರಾವಳಿ ರಾಜ್ಯಗಳಲ್ಲಿ ಗುಡುಗು ಸಿಡಿಲುಗಳೊಂದಿಗೆ ಭಾರೀ ಮಳೆಯಾಲಿದೆ ಎಂದು ವಿಶ್ಲೇಷಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಒಡಿಶಾ ಸರ್ಕಾರ ಈಗಾಗಲೇ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 17 ತಂಡಗಳು, ಒಡಿಆರ್‌ಎಫ್‌ನ 20 ತಂಡಗಳು ಹಾಗೂ ಅಗ್ನಿಶಾಮಕ ದಳದ 175 ತಂಡಗಳಿಗೆ ಹೈ ಅಲರ್ಚ್‌ ಘೋಷಣೆ ಮಾಡಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಹೋಗದಂತೆ ಸೂಚನೆ ನೀಡಿದೆ. ರಾಜ್ಯದ ವಿದ್ಯುತ್‌, ಆರೋಗ್ಯ, ಕುಡಿಯುವ ನೀರು ಮೊದಲಾದ ಇಲಾಖೆಗಳಿಗೆ ಸಂಭವಿಸಬಹುದಾದ ವಿಪತ್ತಿನ್ನು ನಿರ್ವಹಿಸಲು ಸಜ್ಜಾಗಿರುವಂತೆ ಸೂಚಿಸಲಾಗಿದೆ.

ಗಡಿ ವಿವಾದ ಕೆಣಕಿದ್ದ ಶೆಳಕೆ ವಿರುದ್ಧ ಪ್ರಕರಣ ದಾಖಲು
ಬೆಳಗಾವಿ:
ಕರ್ನಾಟಕ ಹಾಗೂ ​ಮಹಾರಾಷ್ಟ್ರ ನಡುವಿನ ಗಡಿ ವಿವಾದ ಕೆದಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಎಂಇಎಸ್‌ ಮುಖಂಡ ಶುಭಂ ಶೆಳಕೆ ವಿರುದ್ಧ ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕನ್ನಡಪರ ಸಂಘಟನೆ ಕಾರ್ಯಕರ್ತ ವಿನಾಯಕ ಭೋವಿ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಶೆಳಕೆ ಕರ್ನಾಟಕ ಗಡಿಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ವಿವಾದಿತ ನಕ್ಷೆ ಪೋಸ್ಟ್‌ ಮಾಡಿದ್ದ, ವಿಡಿಯೋ ಹಾಕಿ ಗಡಿ ತಗಾದೆ ತೆಗೆದಿದ್ದ. ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಭಾಲ್ಕಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ ಗ್ರಾಫಿಕ್‌ ವಿಡಿಯೋ, ಫೋಟೋ ಹಂಚಿಕೊಂಡಿದ್ದ.
 

Follow Us:
Download App:
  • android
  • ios