ಪಹಲ್ಗಾಮ್ ಉಗ್ರರ ದಾಳಿಯಿಂದ ಜೀವ ಉಳಿಸಿದ ದೇವರಿಲ್ಲದ ದೇವಸ್ಥಾನ!

Synopsis
ಕಾಶ್ಮೀರದ ಪೆಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದ ಕಾಫಿನಾಡ ಕುಟುಂಬವೊಂದು ಪವಾಡ ಸದೃಶ ಪಾರಾಗಿದೆ. ದೇವರಿಲ್ಲದ ದೇವಾಲಯಕ್ಕೆ ಭೇಟಿ ನೀಡಿದ್ದರಿಂದ ಉಗ್ರರ ದಾಳಿಯಿಂದ ಪಾರಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಸುರಕ್ಷಿತವಾಗಿ ಹಿಂದಿರುಗಿದ್ದಾರೆ.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.29): ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ವಿದೇಶಿಯರ ಜೊತೆ 26 ಭಾರತೀಯ ಹಿಂದೂ ಪ್ರವಾಸಿಗರು ಹುತಾತ್ಮರಾಗಿದ್ದಾರೆ. ಉಗ್ರರ ದಾಳಿ ಮಧ್ಯೆಯೂ ಅದೇ ಜಾಗದಿಂದ ಕಾಫಿನಾಡ ಕುಟುಂಬವೊಂದು ಪವಾಡ ಸದೃಶ ಪಾರಾಗಿ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಜಸ್ಟ್ 5-10 ನಿಮಿಷದಲ್ಲಿ ಉಗ್ರರ ಗುಂಡೇಟಿಗೆ ಬಲಿ ಆಗುವುದರಿಂದ ಮಿಸ್ ಆಗಿದ್ದಾರೆ. ಈ ಕುಟುಂಬ ಕೂಡ ಅದೇ ಜಾಗದಲ್ಲಿ ಇರಬೇಕಿತ್ತು. ಆದರೆ, ದೇವರೇ ಇಲ್ಲದ ದೇವಾಲಯಕ್ಕೆ ಹೋಗಿ ಆ ಕುಟುಂಬ ಜೀವಮಾನದ ನೋವಿನಿಂದ ಪಾರಾಗಿದೆ.
ಏಪ್ರಿಲ್ 22ರಂದು ಭಾರತೀಯ ಪ್ರವಾಸೋಧ್ಯಮದ ಪಾಲಿಗೆ ಅಕ್ಷರಶಃ ಕರಾಳ ದಿನ (ಬ್ಲಾಕ್ ಡೇ) ಆಗಿದೆ. ಕಾಶ್ಮೀರದ ರಮಣೀಯ ಸಂದರ್ಯದಲ್ಲಿ ಹೆಂಡತಿ ಮಕ್ಕಳೊಂದಿಗೆ ಸಂತೋಷದಲ್ಲಿ ತೇಲಾಡುತ್ತಿದ್ದ 26 ಜನರನ್ನ ಪಾಕಿಸ್ತಾನ ಬೆಂಬಲಿಕ ಇಸ್ಲಾಮಿಕ್ ಉಗ್ರಗಾಮಿಗಳು ನೋಡ-ನೋಡುತ್ತಿದ್ದಂತೆ ಪ್ರವಾಸಿ ತಾಣವನ್ನ ಸ್ಮಶಾನವನ್ನಾಗಿ ಮಾಡಿದ್ದರು. ಅದರಲ್ಲಿ, ಶಿವಮೊಗ್ಗದ ಮಂಜುನಾಥ ರಾವ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಇಬ್ಬರು ಕನ್ನಡಿಗರು ಉಸಿರು ಚೆಲ್ಲಿದ್ದಾರೆ. ಆದರೆ, ಅದೇ ಜಾಗಕ್ಕೆ ಹೋಗುತ್ತಿದ್ದ ಚಿಕ್ಕಮಗಳೂರು ನಗರದ ರಾಮೇಶ್ವರ ನಗರದ ಚಂದ್ರಶೇಖರ್ ಕುಟುಂಬ ಉಗ್ರರ ರಕ್ಕಸ ದಾಳಿಯಿಂದ ಸಾವನ್ನೇ ಗೆದ್ದು ಬಂದಿದ್ದಾರೆ.
ಪಹಲ್ಗಾಮ್ ಪ್ರವಾಸಿ ತಾಣಕ್ಕೆ ಹೊರಟಿದ್ದ ಚಿಕ್ಕಮಗಳೂರಿನ ಚಂದ್ರಶೇಖರ್ ಕುಟುಂಬವು ಬ್ರಿಟಿಷರ ಕಾಲದಲ್ಲೇ ನಾಶವಾಗಿರುವ ದೇವರೇ ಇಲ್ಲದ ದೇವಸ್ಥಾನವನ್ನು ಭೇಟಿ ಮಾಡುವುದಕ್ಕೆ ಹೋಗಿತ್ತು. ಅಲ್ಲಿಯೂ ಸುಂದರ ರಮಣೀಯ ನೈಸರ್ಗಿಕ ಸ್ಥಳವಿರುವ ಹಿನ್ನೆಲೆಯಲ್ಲಿ ಅಲ್ಲಿಯೇ ತುಂಬಾ ಸಮಯ ಕಳೆದು ಮಕ್ಕಳ ಜೊತೆ ಫೋಟೋ ತೆಗೆದುಕೊಳ್ಳುತ್ತಾ ತಡ ಮಾಡಿದ್ದಾರೆ. ಅಲ್ಲಿಂದ ವಾಪಸ್ ಪಹಲ್ಗಾಮ್ ಹೋಟೆಲ್ಗೆ ಬರುವುದು ತಡವಾದ ಪರಿಣಾಮ ಉಗ್ರರ ದಾಳಿಯಿಂದ ತಪ್ಪಿಸಿಕೊಂಡಿದ್ದು, ಜೀವನದಲ್ಲಿ ಉಂಟಾಗುತ್ತಿದ್ದ ಅತಿದೊಡ್ಡ ಅನಾಹುತದಿಂದ ಪಾರಾಗಿದ್ದಾರೆ. ಈ ಬಗ್ಗೆ ಸ್ವತಃ ಪ್ರವಾಸಿಗರ ಸ್ವರ್ಗದಲ್ಲಿ ನರಕವನ್ನಿ ನೋಡಿ ಬಂದ ಕುಟುಂಬದವರು ಭಯಾನಕ ಘಟನೆಯ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: 48 ಗಂಟೆ ಡೆಡ್ಲೈನ್: ಕರ್ನಾಟಕದಲ್ಲಿರುವ ಪಾಕಿಗಳಿಗೆ ಶುರು ಆತಂಕ, ಎಲ್ಲೆಲ್ಲಿ ವಾಸವಿದ್ದಾರೆ? ಇಲ್ಲಿದೆ ಮಾಹಿತಿ..
ವಿಷಯ ಹೇಳದೆ ವಾಪಸ್ ಕರೆದೆಕೊಂಡು ಬಂದ ಸ್ಥಳೀಯರು:
ಪಹಲ್ಗಾಮ್ಗೆ ಹೋಗುವಾಗ ಆ ಕಡೆಯಿಂದ ಜನ ಆತಂಕದಲ್ಲಿ ಅಳುತ್ತಾ ಓಡಿ ಬರುತ್ತಿದ್ದರು. ಇವರಿಗೆ ಕುದುರೆ ಓಡಿಸುವವರು ಭಯವಾಗಲು ಬಿಟ್ಟಿಲ್ಲ. ರೋಡ್ ಕ್ಲೋಸ್ ಮಾಡಿದ್ದಾರೆ ಅದಕ್ಕೆ ವಾಪಸ್ ಹೋಗೋಣ ಎಂದು ವಿಷಯ ಹೇಳದೆ ವಾಪಸ್ ಕರೆದೆಕೊಂಡು ಬಂದಿದ್ದಾರೆ. ಜೊತೆಗೆ, ಸುರಕ್ಷಿತ ಪ್ರದೇಶಕ್ಕೆ ಬಂದ ಬಳಿಕ ಪ್ರವಾಸಿಗರನ್ನ ಹೆದರಿಸಲು ಕುದರೆಗೆ ಬಾಂಬ್ ಕಟ್ಟಿದ್ದಾರೆ ಎಂದು ಹೇಳಿ ಸ್ಥಳೀಯ ಮುಸ್ಲಿಮರು ನಮಗೆ ವಿಚಾರವನ್ನೂ ಗೊತ್ತಾಗದಂತೆ ನಮ್ಮ ನೆರವಿಗೆ ಬಂದು ಸಹಾಯ ಮಾಡಿದ್ದಾರೆ. ನಮ್ಮನ್ನ ರಕ್ಷಿಸಿದ್ದು ಸ್ಥಳಿಯರ ಕುದುರೆ ಓಡಿಸೋ ಮುಸ್ಲಿಮರೇ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಯಾರೇ ಪ್ರವಾಸಿಗರಾಗಲೀ ಪಹಲ್ಗಾಮ್ ಜಾಗಕ್ಕೆ ಹೋಗೋದು ಅಷ್ಟು ಸುಲಭವಲ್ಲ. ಅಲ್ಲಿ ದೊಡ್ಡ-ದೊಡ್ಡ ಕಲ್ಲುಗಳು ಬಿದ್ದಿವೆ. ಅಲ್ಲಿಗೆ ನಡೆದುಕೊಂಡು ಹೋಗಲು ಆಗಲ್ಲ. ಕುದುರೆಯಲ್ಲೇ ಹೋಗಬೇಕು. ಆದರೆ, ಕಾಶ್ಮೀರದಲ್ಲಿ ಹೆಜ್ಜೆ-ಹೆಜ್ಜೆಗೂ ಸೇನೆ ಕಾವಲಿರುತ್ತದೆ. ಸ್ಥಳೀಯರ ಸಹಾಯವಿಲ್ಲದೆ ಅಲ್ಲಿಗೆ ಉಗ್ರಗಾಮಿಗಳು ಬರೋದಕ್ಕೆ ಸಾಧ್ಯವೇ ಇಲ್ಲ. ಉಗ್ರರ ದಾಳಿಗೂ ಸ್ಥಳಿಯರ ಸಹಕಾರ ಇದ್ದೇ ಇರುತ್ತದೆ ಎಂದು ಚಂದ್ರಶೇಖರ್ ಕುಟುಂಬದ ಸದಸ್ಯರು ಆರೋಪ ಮಾಡಿದರು.
ಇದನ್ನೂ ಓದಿ: ತಮ್ಮ ಊರಿನ ಪಾತ್ರೆಗಳನ್ನ ಪಕ್ಕದ ಊರಿನವರಿಗೆ ಕೊಟ್ಟಿದ್ದಕ್ಕೆ ಬಹಿಷ್ಕಾರ: ಅವರ ಮನೆಗೆ ಹೋದರೆ 5000 ದಂಡ
ಒಟ್ಟಾರೆ, ಕಾಫಿನಾಡ ಈ ಕುಟುಂಬ ದೇವರಿಲ್ಲದ ದೇವಸ್ಥಾನಕ್ಕೆ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾಶ್ಮೀರದ ಸೌಂದರ್ಯ ಇವರ ಜೀವ ಉಳಿಸಿದ್ದು, ಅನಾಹುತದಿಂದ ಪಾರಾಗುವಂತೆ ಮಾಡಿದೆ. ಆದರೆ, ಅಲ್ಲಿನ ಸ್ಥಳಿಯರ ಸಹಕಾರ ಇಲ್ಲದೆ ಆ ದಾಳಿ ನಡೆಯೋಕೆ ಸಾಧ್ಯವಿಲ್ಲ ಅಂತ ಅನುಮಾನ ಮೂಡಿಸಿದೆ. ಈಗಾಗಲೇ ಸೇನೆ ಹಾಗೂ ಎನ್.ಐ.ಎ. ತನಿಖೆಗೆ ಇಳಿದ್ದು ಪಾಕಿಸ್ಥಾನ, ಚೀನಾ ಅಂತೆಲ್ಲಾ ಹೆಸರು ಕೇಳಿಬರ್ತಿದ್ದು ಸರ್ಕಾರದ ತನಿಖೆಯಿಂದ ಸತ್ಯ ಹೊರಬರಬೇಕಿದೆ.