ರಾಜ್ ಕುಮಾರ್ ಹಾಡಿಗೆ ಕುಣಿದು ಕುಪ್ಪಳಿಸಿದ ಆಯುಕ್ತ, ಮೇಯರ್
ಡಾ.ರಾಜ್ಕುಮಾರ್ ಅವರ ಅಭಿನಯದ ‘ಆಕಸ್ಮಿಕ’ ಚಲನ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ಮೇಯರ್ ಗೌತಮ್ ಕುಮಾರ್, ಆಯುಕ್ತ ಬಿ. ಎಚ್.ಅನಿಲ್ಕುಮಾರ್ ಸೇರಿದಂತೆ ಅನೇಕರು ಭರ್ಜರಿ ನೃತ್ಯ ಮಾಡಿದ್ದಾರೆ.
ಬೆಂಗಳೂರು(ಜ.26): ಸ್ವಚ್ಛಸರ್ವೇಕ್ಷಣ ಜಾಗೃತಿ ಜಾಥಾದ ವೇಳೆಯಲ್ಲಿ ಡಾ.ರಾಜ್ಕುಮಾರ್ ಅವರ ಅಭಿನಯದ ‘ಆಕಸ್ಮಿಕ’ ಚಲನ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ಮೇಯರ್ ಗೌತಮ್ ಕುಮಾರ್, ಆಯುಕ್ತ ಬಿ. ಎಚ್.ಅನಿಲ್ಕುಮಾರ್ ಸೇರಿದಂತೆ ಅನೇಕರು ಭರ್ಜರಿ ನೃತ್ಯ ಮಾಡಿ ಜಾಥಾದಲ್ಲಿ ಭಾಗಿಯಾದವರನ್ನು ಹುರಿದುಂಬಿಸಿದ್ದಾರೆ.
ನಗರದ ಸ್ವಚ್ಛತಾ ಕಾಳಜಿ ಕೇವಲ ಸ್ವಚ್ಛ ಸರ್ವೇ ಕ್ಷಣ ಅಭಿಯಾನಕ್ಕೆ ಸೀಮಿತವಾಗಬಾರದು, ಪಾಲಿಕೆ ಜೊತೆ ನಾಗರಿಕರು ಕೈ ಜೋಡಿಸಿದರೆ ಮಾತ್ರ ನಗರಕ್ಕೆ ಉತ್ತಮ ರ್ಯಾಂಕ್ ಬರಲು ಸಾಧ್ಯ ಎಂದು ಬಿಬಿಎಂಪಿ ಮೇಯರ್ ಗೌತಮ್ಕುಮಾರ್ ಅಭಿಪ್ರಾಯಪಟ್ಟರು.
ಮತ್ತೆ ವಕೀಲಿಕೆ ಆರಂಭಿಸ್ತಾರಾ ಮಾಜಿ ಸಿಎಂ ಸಿದ್ದರಾಮಯ್ಯ?
ಶನಿವಾರ ‘ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ’ ಹಡ್ಸನ್ ವೃತ್ತದ ಕಬ್ಬನ್ ಪಾರ್ಕ್ ಮುಖ್ಯದ್ವಾರದ ಬಳಿ ಆಯೋಜಿಸಿದ್ದ ‘ಸ್ವಚ್ಛ ಸರ್ವೇಕ್ಷಣ ಅಭಿ ಯಾನ’ದಲ್ಲಿ ಸಾರ್ವಜನಿಕರು ಭಾಗವಹಿಸುವ ಕುರಿತು ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಸಮುಕ್ತ ಬೆಂಗಳೂರು ಮಾಡಲು ಪಾಲಿಕೆ ಈಗಾಗಲೇ ಅನೇಕ ಕ್ರಮ ಕೈಗೊಂಡಿದೆ.
ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲಿ ಕಸ ಬಿದ್ದಿ ರುವುದು ಕಂಡು ಬಂದರೆ ಪಾಲಿಕೆ ನಿಯಂತ್ರಣ ಕೊಠಡಿ ಹಾಗೂ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೆ ಕೂಡಲೇ ಕಸವನ್ನು ತೆರವುಗೊಳಿಸಲಿದ್ದಾರೆ ಎಂದು ತಿಳಿಸಿದರು. ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ಮಾತನಾಡಿ, ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕೆ ಈವರೆಗೆ ಒಟ್ಟು ೪೦ ಸಾವಿರ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ನಗರಕ್ಕೆ ಉತ್ತಮ ಅಂಕ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.
https://www.swachhsurvekshan2020.org/CitizenFeedback%2c/StateWiseSummary ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ನಗರದ ಸ್ವಚ್ಛತೆ ಬಗ್ಗೆ ಕೇಳುವ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಸತ್ಯ ಸಂಗತಿಯನ್ನು ಹಂಚಿಕೊಳ್ಳುವಂತೆ ಇದೇ ವೇಳೆ ಮನವಿ ಮಾಡಿದರು. ಜಾಗೃತಿ ಜಾಥಾದಲ್ಲಿ ಬಿಬಿಎಂಪಿಯ ವಿವಿಧ ಕಾಲೇಜು, ಮಹಾರಾಣಿ ಕಾಲೇಜು, ಹೋಮ್ ಸೈನ್ಸ್ ಕಾಲೇಜು, ಜೈನ್ ವಿಶ್ವ ವಿದ್ಯಾಲಯ, ಬಿಷಪ್ ಕಾಟನ್ ಮಹಿಳಾ ಕಾಲೇಜು ವಿದ್ಯಾರ್ಥಿಗಳು, ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಜಾಥಾದಲ್ಲಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಜಂಟಿ ಆಯುಕ್ತರಾದ ಬಾಲಶೇಖರ್, ಪಲ್ಲವಿ, ನೌಕರರ ಸಂಘದ ಅಧ್ಯಕ್ಷ ಅಮೃತ್ರಾಜ್ ಮೊದಲಾದವರು ಉಪಸ್ಥಿತರಿದ್ದರು.