ಬೆಂಗಳೂರು: ಈರುಳ್ಳಿಗೆ ಚಿನ್ನದ ಬೆಲೆ, ಗೋಡೌನ್ ಮೇಲೆ ಲೋಕಾಯುಕ್ತ ದಾಳಿ
ಒಂದು ಗ್ರಾಂ ಚಿನ್ನ ಕೊಳ್ಳಬಹುದು. ಆದ್ರೆ ಒಂದು ಮೂಟೆ ಈರುಳ್ಳಿ ಕೊಳ್ಳೋದಕ್ಕೆ ಆಗಲ್ಲ. ಹೌದು, ಈ ಭಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಬೆಲೆ ಏರಿಕೆಯಿಂದ ಗ್ರಾಹಕರು ಹಾಗೂ ಚಿಲ್ಲರೆ ವ್ಯಾಪಾರಿಗಳು ಈರುಳ್ಳಿಕೊಳ್ಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಈರುಳ್ಳಿ ಗೋದಾಮಿನ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.
ಬೆಂಗಳೂರು, [ಡಿ.06]: ರಾಜ್ಯದಲ್ಲಿ ಈರುಳ್ಳಿ [ಉಳ್ಳಾಗಡ್ಡಿ] ಬೆಲೆ ಏರಿಕೆ ಪರ್ವ ಮುಂದುವರಿದಿದ್ದು,ಪ್ರತಿ ಕೆಜಿಗೆ150ರ ಗಡಿ ದಾಟಿದೆ. ಬೆಂಗಳೂರಿನ ಎಪಿಎಂಸಿ ಮಾರ್ಕೆಟ್ ಗೆ ಪ್ರತಿದಿನ ಒಂದೂವರೆ ಲಕ್ಷಕ್ಕೂ ಹೆಚ್ಚು ಈರುಳ್ಳಿ ಮೂಟೆಗಳು ಬರುತ್ತಿದ್ದವು .
ಆದ್ರೆ ಇದೀಗ ದಿನವೊಂದಕ್ಕೆ 30 ರಿಂದ 35 ಸಾವಿರ ಚೀಲಗಳಷ್ಟೇ ಈರುಳ್ಳಿ ಬರುತ್ತಿವೆ. ಹೀಗಾಗಿ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಕೆಜಿ ಮೇಲೆ 15 ರೂಪಾಯಿಗಳಷ್ಟು ಬೆಲೆ ಏರಿಕೆ ಕಾಣುತ್ತಿದ್ದು, ಜನರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ.
ಬಿರಿಯಾನಿ ಜೊತೆ ಈರುಳ್ಳಿ ಕೊಡದ್ದಕ್ಕೆ ಮಾರಾಮಾರಿ!
ಇದರ ನಡುವೆ ಅಕ್ರಮವಾಗಿ ಈರುಳ್ಳಿ ಶೇಖರಣೆ ಮಾಡಿದ ಹಿನ್ನೆಲೆಯಲ್ಲಿ ಯಶವಂತಪುರದ ಆರ್ಎಂಸಿ ಯಾರ್ಡ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಡಿಮ್ಯಾಂಡ್ ಹೆಚ್ಚು ಮಾಡಲು ಏಜೆಂಟ್ಗಳು ಈರುಳ್ಳಿ ಶೇಖರಣೆ ಮಾಡಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಖಚಿತ ಮಾಹಿತಿಯೊಂದಿಗೆ ದಾಳಿ ಮಾಡಿದ್ದಾರೆ.
ಒಂದು ವೇಳೆ ಈರುಳ್ಳಿಗೆ ನ್ಯಾಯಬದ್ಧ ಬೆಲೆ ನೀಡುವಲ್ಲಿ ತೊಂದರೆಯಾದರೆ ಕೂಡಲೇ ಮಾಹಿತಿ ನೀಡುವಂತೆ ಅಧಿಕಾರಿಗಳು ರೈತರಿಗೆ ಸೂಚಿಸಿದರು.
ಈ ಈರುಳ್ಳಿ ಯಾವ ಮಟ್ಟಿಗೆ ಹೋಗಿದೆ ಅಂದ್ರೆ, ಹೊಲದಲ್ಲಿ ಇರುವ ಈರುಳ್ಳಿಯನ್ನೇ ಕಳ್ಳತನ ಮಾಡಿಸುವಷ್ಟು ಡಿಮ್ಯಾಂಡ್ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಮಾರಾಮಾರಿಗೆ ಕಾರಣವಾಗಿದೆ.
ಮೆಣಸಿನಕಾಯಿ ಇಲ್ಲದ ಚಿತ್ರಾನ್ನ ಅರಗಿಸಿಕೊಳ್ಳಹುದು. ಶೇಂಗಾ ಇಲ್ಲದ ಚಿತ್ರಾನ್ನ ನುಂಗಿ ನೀರು ಕುಡಿಯಬಲ್ಲರು. ಆದರೆ, ನಾನ್ ವೆಜ್ ಊಟದ ಜತೆ ಈರುಳ್ಳಿ ಇಲ್ಲಂದ್ರೆ ಸಹಿಸಿಕೊಳ್ಳುತ್ತಾರೆಯೇ..? ನೋ ವೇ ಚಾನ್ಸೇ ಇಲ್ಲ.
ಬಿರಿಯಾನಿ ಜತೆ ಈರುಳ್ಳಿಗಾಗಿ ಹೊಟೇಲ್ ಹಾಗೂ ಗ್ರಾಹಕರ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆ ನಡೆದಿದ್ದು, ಬೆಳಗಾವಿಯಲ್ಲಿ.