ಸಿಡಬ್ಲ್ಯೂಆರ್‌ಸಿ ಹಾಗೂ ಸಿಡಬ್ಲ್ಯೂಎಂಎನಲ್ಲಿ ಸರಿಯಾಗಿ ವಾದ ಮಂಡಿಸದ ಕರ್ನಾಟಕ ಸರ್ಕಾರ, ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಅಡವಿಟ್ಟು ಸೋತು ಬಂದಿದೆ. ವಕೀಲರ ವಾದ ಇಲ್ಲಿದೆ ನೋಡಿ..

ಬೆಂಗಳೂರು (ಸೆ.21): ಈಗಾಗಲೇ ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿ ಇದ್ದು, ಜಲಾಶಯಗಳು ಖಾಲಿ ಆಗಿದ್ದರೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣಾ ಸಮಿತಿಗಳು ತಮಿಳುನಾಡಿಗೆ ತಲಾ 5,000 ಕ್ಯೂಸೆಕ್‌ ನೀರು ಬಿಡಲು ಆದೇಶ ಹೊರಡಿಸಿದ್ದವು. ಆದರೆ, ಕಾವೇರಿ ಪ್ರಾಧಿಕಾರ ಮತ್ತು ಸಮಿತಿಗಳ ಮುಂದೆ ಸರಿಯಾಗಿ ವಾದ ಮಂಡಿಸದೇ ಸುಪ್ರೀಂ ಕೋರ್ಟ್‌ಗೆ ಕಾವೇರಿಯನ್ನು ಅಡಮಾನ ಇಟ್ಟ ಕರ್ನಾಟಕ ಸೋತು ಬಂದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ವಕೀಲರು ಏನು ವಾದ ಮಂಡಿಸಿದ್ದಾರೆಂಬ ಮಾಹಿತಿ ಇಲ್ಲಿದೆ ನೋಡಿ.

Add Asianetnews Kannada as a Preferred SourcegooglePreferred

ಕಾವೇರಿ ನೀರು ನಿಯಂತ್ರಣ ಸಮಿತಿ (CWRC) 6400 ಕ್ಯೂಸೆಕ್ ನೀರು ಬಿಡಬೇಕು ಎಂಬ ಬಗ್ಗೆ ಅಭಿಪ್ರಾಯ ಪಟ್ಟಿತ್ತು. ಆದರೆ ಶಿಫಾರಸಿನಲ್ಲಿ ಕೇವಲ 5,000ಕ್ಕೆ ನಿಗದಿ ಮಾಡಿದ್ದು ಏಕೆ? ಈ ಮೊದಲು ತಮಿಳುನಾಡಿಗೆ 7,200 ಕ್ಯೂಸೆಕ್ಸ್‌ ನೀರು ಹರಿಸಲು ಆದೇಶ ನೀಡಿರುವ ಹೇಳಿದ ಮೇಲೆ ಅದನ್ನು ತಗ್ಗಿಸುವುದಾದರೂ ಹೇಗೆ? ತಮಿಳುನಾಡಿನಲ್ಲಿ ನಮಗೆ ತುಂಬಾ ಕಡಿಮೆ ನೀರು ಸಿಗುತ್ತಿದೆ. ನೀರಿನ ಸಮಸ್ಯೆ ಎರಡು ರಾಜ್ಯದಲ್ಲಿ ಇದೆ. ಆದರೆ ನಮಗೆ ಸಿಗುತ್ತಿರುವುದು ತುಂಬಾ ಕಡಿಮೆಯಾಗಿದೆ ಎಂದು ತಮಿಳುನಾಡು ಪರ ವಕೀಲ ಮುಕುಲ್‌ ರೋಹ್ಟಗಿ ವಾದ ಮಂಡಿಸಿದರು.

ಕರ್ನಾಟಕಕ್ಕೆ ಮತ್ತೆ ಶಾಕ್‌ ಕೊಟ್ಟ ಸುಪ್ರೀಂ ಕೋರ್ಟ್‌! ಪ್ರತಿದಿನ 5000 ಕ್ಯೂಸೆಕ್ಸ್‌ ಕಾವೇರಿ ನೀರು ಬಿಡಲು ಆದೇಶ

ಸಂಕಷ್ಟವಿದೆಯೆಂದರೆ ನ್ಯಾಯಯುತ ಪಾಲು ಕೊಡಬಾರದೇ? 
ಮುಂದುವರೆದು ನಮಗೆ ಸರಾಸರಿ 6,400 ಕ್ಯೂಸೆಕ್ ನೀರು ಸಿಗಬೇಕು. ಆದರೆ ಯಾವುದೇ ಆಧಾರ ಇಲ್ಲದೆ ನಮಗೆ 5000 ಕ್ಯೂಸೆಕ್ ನಿಗದಿ ಮಾಡಿದ್ದಾರೆ. ಇದು ಅಕ್ಷಮ್ಯವಾದ ನಡೆಯಾಗಿದೆ. ಕರ್ನಾಟಕದಲ್ಲಿ ಸಂಕಷ್ಟ ವರ್ಷವಿದೆ ಎನ್ನುವುದು ನಮಗೆ ಅರ್ಥವಾಗುತ್ತದೆ. ಆದರೆ, ಕೆಳಭಾಗದ ರಾಜ್ಯಕ್ಕೆ ನ್ಯಾಯಯುತವಾದ ನೀರಿನ ಪಾಲು ಸಿಗಬೇಕಲ್ಲವೇ? ಕರ್ನಾಟಕದಲ್ಲಿ ಕಡಿಮೆ ಮಳೆಯಾಗಿರುವ ಪ್ರಮಾಣವನ್ನು ಪರಿಗಣಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ನಿಗದಿ ಮಾಡಬೇಕು ಎಂದು ತಮಿಳುನಾಡು ಪರ ವಕೀಲ ರೋಹ್ಟಗಿ ವಾದಿಸಿದರು.

ಕರ್ನಾಟಕ ಪರ ವಕೀಲ ಶ್ಯಾಮ್‌ ದಿವಾನ್‌ ವಾದವೇನು? 
ಈವರೆಗೆ ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣಾ ಸಮಿತಿಯ ಎಲ್ಲಾ ಅದೇಶಗಳನ್ನು ಪಾಲಿಸಿದ್ದೇವೆ. ಇನ್ನು ತಮಿಳುನಾಡು ಬೆಳೆಗಳನ್ನು ಬೆಳೆಯುವುದಕ್ಕೆ ನೀರಾವರಿ ಆದ್ಯತೆಗಾಗಿ ನೀರನ್ನು ಕೇಳುತ್ತಿದೆ. ಆದರೆ, ಕರ್ನಾಟಕದಲ್ಲಿ ಕುಡಿಯುವ ನೀರಿನ ಬಗ್ಗೆ ಚಿಂತಿತರಾಗಿದ್ದೇವೆ. ಹಿಂಗಾರು ಮಳೆ ನಮಗೆ ಇನ್ನೂ ಬರಬೇಕಿದೆ. ಸೌತ್ ವೆಸ್ಟ್ ಮಾನ್ಸೂನ್ ವಿಫಲ ಆಗಿದ್ದರೆ, ಈಶಾನ್ಯ ಮಳೆಯು ಕಡಿಮೆ ಇರುವ ಸಾಧ್ಯತೆಯಿದೆ ಎಂದು ಕರ್ನಾಟಕ ಪರ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರು. ಇನ್ನು ಮಂಡ್ಯದ ರೈತರು ಸಲ್ಲಿಕೆ ಮಾಡಿದ ಅರ್ಜಿಗಳ ವಿಚಾರಣೆಯನ್ನೇ ಮಾಡದ ನ್ಯಾಯಪೀಠ ನೇರವಾಗಿ ಆದೇಶವನ್ನು ಬರೆಸಲು ಮುಂದಾಯಿತು.

ದರ್ಶನ್‌ ಬೆನ್ನಲ್ಲಿಯೇ ಕಾವೇರಿ ಕದನಕ್ಕಿಳಿದ ಅಭಿನಯ ಚಕ್ರವರ್ತಿ ಸುದೀಪ್‌

ಸಂಕಷ್ಟ ಸೂತ್ರ, ರೈತರ ವಾದವನ್ನೇ ಆಲಿಸದೇ ಆದೇಶ ಕೊಟ್ಟ ಕೋರ್ಟ್‌: ಇನ್ನು ಆದೇಶ ಹೊರಡಿಸುವ ವೇಳೆ ಕರ್ನಾಟಕದಿಂದ ಮೇಕೆದಾಟು ಜಲಾಶಯ ನಿರ್ಮಾಣದ ಬಗ್ಗೆ ಪ್ರಸ್ತಾಪ ಮಾಡಿತು. ನಂತರ ವಕೀಲ ದುಷ್ಯಂತ ದವೇ ಅವರು ಕರ್ನಾಟಕದಲ್ಲಿ ಮಳೆ ಕೊರತೆಯಿದ್ದು, ಸಂಕಷ್ಟ ಸೂತ್ರದ ಅಗತ್ಯದ ಬಗ್ಗೆ ಪ್ರಸ್ತಾಪಿಸಿದರು. ಜೊತೆಗೆ, ರೈತರ ಪರವಾಗಿ ವಾದವನ್ನು ಮಂಡಿಸಲು ಮುಂದಾದರಾದರೂ, ಇದನ್ನ ನೋಡಲು ತಜ್ಞರ ಸಮಿತಿ ಇದೆಯಲ್ಲ ಎಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ತಿಳಿಸಿ ವಾದ ಮಂಡನೆಯನ್ನು ನಿಲ್ಲಿಸುವಂತೆ ತಿಳಿಸಿದರು. ನಂತರ, ಕರ್ನಾಟಕದ ಪರವಾಗಿ ಸದ್ಯ ವಾಸ್ತವ ಪರಿಸ್ಥಿತಿ ಅಧ್ಯಯನ ಮಾಡಲು ತಜ್ಞರು ಬರಬೇಕು ಎಂದ ವಕೀಲ ಮೋಹನ್ ಕಾತರಕಿ ಹೇಳಿದರಾದರೂ ಈ ಬಗ್ಗೆ ಗಮ ಹರಿಸದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು 15 ದಿನಗಳವರೆಗೆ ಮುಂದೂಡಿಕೆ ಮಾಡಿತು.