ನಾನು ಒಳ್ಳೆಯ ವಕೀಲರಾದ ಕಾರಣಕ್ಕೆ ಆರೋಪಿ ಹೆಸರಿಸಿರಲಿಲ್ಲ: ಸಿಟಿ ರವಿಗೆ ಸಿದ್ದು ಛಾಟಿ!
ಮಾಜಿ ಸಿಎಂ ಹಾಲಿ ಸಚಿವರ ನಡುವೆ ಟ್ವೀಟ್ ವಾರ್| ಸಾವರ್ಕರ್ಗೆ ಭಾರತ ರತ್ನ ನೀಡುವುದನ್ನು ವಿರೋಧಿಸಿದ್ದ ಸಿದ್ದರಾಮಯ್ಯ| ಸಿದ್ದರಾಮಯ್ಯ ವಕೀಲರಾಗಲು ನಾಲಾಯಕ್ ಎಂದ ಸಿ. ಟಿ ರವಿ| ಟೀಕಿಸಿದ ಸಚಿವರಿಗೆ ಸಿದ್ದರಾಮಯ್ಯ ಕೊಟ್ಟೇ ಬಿಟ್ರು ಮತ್ತೊಂದು ಏಟು
ಬೆಂಗಳೂರು[ಅ.20]: ವೀರ್ ಸಾವರ್ಕರ್ಗೆ ಭಾರತ ರತ್ನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಿ. ಟಿ. ರವಿ ನಡುವೆ ಆರಂಭವಾದ ಟ್ವೀಟ್ ವಾರ್ ಭಾನುವಾರವೂ ಮುಂದುವರೆದಿದೆ. ಸಾವರ್ಕರ್ಗೆ ಭಾರತ ರತ್ನ ನೀಡುವುದನ್ನು ವಿರೋಧಿಸಿದ್ದ ಸಿದ್ದರಾಮಯ್ಯ ವಿರುದ್ಧ ಸಿ. ಟಿ. ರವಿ ಕಿಡಿ ಕಾರಿದ್ದರು. ಈ ವಿಚಾರ ಅಪಘಾತ ಪ್ರಕರಣಕ್ಕೆ ತಳುಕು ಹಾಕಿದ್ದು, ಸಿದ್ದರಾಮಯ್ಯ ಇಂದು ತಿರುಗೇಟು ನೀಡಿದ್ದಾರೆ.
'ಸಾವರ್ಕರ್ಗೆ ಆಮೇಲೆ ಕೊಡುವಿರಂತೆ, ಮೊದಲು ಸಿದ್ದಗಂಗಾ ಶ್ರೀಗೆ ಭಾರತರತ್ನ ನೀಡಿ'
ಹೌದು ಗಾಂಧಿ ಹತ್ಯೆಗೆ ಸ್ಕೆಚ್ ಹಾಕಿದ್ದ ವೀರ್ ಸಾವರ್ಕರ್ಗೆ ಭಾರತ ರತ್ನ ನೀಡುತ್ತಾರೆ, ಹಾಗಾದ್ರೆ ಗಾಂಧಿ ಹತ್ಯೆಗೈದ ಗೋಡ್ಸೆಗೂ ಪ್ರಶಸ್ತಿ ನೀಡಿ ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದ ಸಚಿವ ಸಿ. ಟಿ. ರವಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಇತಿಹಾಸ ತಿಳಿದುಕೊಳ್ಳುವಂತೆ ಸಲಹೆ ನೀಡಿದ್ದರು. ಅಲ್ಲದೇ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆಂದು ಟೀಕಿಸಿದ್ದರು.
ಗೋಡ್ಸೆಗೂ ಭಾರತರತ್ನ ಕೊಡಿ: ಸಿದ್ದರಾಮಯ್ಯ ವಿವಾದ
ಆದರೆ ಈ ಟ್ವೀಟ್ ವಾರ್ ಇಲ್ಲಿಗೇ ನಿಲ್ಲದೇ, ಮತ್ತೆ ಮುಂದುವರೆದಿತ್ತು. ಸಚಿವರ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಮಾನಸಿಕ ಕಾಯಿಲೆಯಿಂದ ಬಳಲುವವರಷ್ಟೇ ಕುಡಿದು ಅಪಘಾತ ನಡೆಸಿ ಅಮಾಯಕರನ್ನು ಕೊಲ್ಲುತ್ತಾರೆ ಎಂದು ಸಿ. ಟಿ. ರವಿಗೆ ಪರೋಕ್ಷವಾಗಿ ತಿವಿದಿದ್ದರು. ಅಲ್ಲದೇ ಇತಿಹಾಸ ತಿಳಿದುಕೊಂಡೇ ಮಾತನಾಡುತ್ತಿದ್ದೇವೆ. ಗಾಂಧಿ ಹತ್ಯೆ ಸ್ಕೆಚ್ ಮಾಡಿದವರಿಗೆ ಭಾರತ ರತ್ನ ನೀಡುವುದಾದರೆ, ಕುಡಿದು ಅಪಘಾತ ಮಾಡಿ ಅಮಾಯಕರನ್ನು ಸಾಯಿಸಿದವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಛಾಟಿ ಬೀಸಿದ್ದರು.
ಆದರೆ ಸಿದ್ದರಾಮಯ್ಯರ ಈ ಟ್ವೀಟ್ಗೆ ಕೆರಳಿದ ಸಿ. ಟಿ. ರವಿ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅಂತ ಮಹಾ ಕ್ರೂರಿಗಳ ಇತಿಹಾಸ ಓದುವ ನಡುವೆ ವಿದೇಶದಲ್ಲಿ ಕುಡಿದು ಸತ್ತವರ ಕುರಿತ ಸತ್ಯವನ್ನು ಸಹ ನೀವು ತಿಳಿದು ಮಾತನಾಡುತ್ತೀರಿ ಎಂದು ನಂಬಿದ್ದೇನೆ ಎಂದು ಸಿದ್ದುಗೆ ವೈಯುಕ್ತಿಕವಾಗಿ ತಿವಿದಿದ್ದರು. ಅಲ್ಲದೇ ಕೊಲೆ ಹಾಗೂ ಅಪಘಾತದ ನಡುವಿನ ವ್ಯತರ್ಯಾಸ ತಿಳಿಯದ ಅವರು ನಾಲಾಯಕ್ ವಕೀಲರೆಂದು ಮೂದಲಿಸಿದ್ದರು.
ಇಷ್ಟೆಲ್ಲಾ ನಡೆದ ಬಳಿಕ ಸೈಲೆಂಟ್ ಆಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಭಾನುವಾರ ಸಚಿವ ಸಿ. ಟಿ. ರವಿ ಟ್ವೀಟ್ಗೆ ಪ್ರತಿಕ್ರಿಯಿಸುತ್ತಾ ಛಾಟಿ ಬೀಸಿದ್ದಾರೆ. ಕುಡಿದ ಮತ್ತಿನಲ್ಲಿ ಅಪಘಾತ ಮಾಡಿ ಸಾಯಿಸಿದವರ ಬಗ್ಗೆ ಹೇಳಿದರೆ, ಸಿ. ಟಿ. ರವಿ ಯಾಕೆ ಹೆಗಲು ಮುಟ್ಟಿನೋಡಿಕೊಳ್ತಿದ್ದಾರೆ ಎಂದು ಅರ್ಥವಾಗಿಲ್ಲ. ನಾನು ಒಳ್ಳೆಯ ವಕೀಲರಾಗಿರುವ ಕಾರಣಕ್ಕಾಗಿಯೇ ಆರೋಪಿಯನ್ನು ಹೆಸರಿಸಿಲ್ಲ. ಪ್ರತಿಕ್ರಿಯಿಸುವ ಮೊದಲು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವಿರಲಿ, ನೀವು ಆ ಖಾತೆಯ ಸಚಿವರು' ಎಂದು ಮಾತಿನ ಪೆಟ್ಟು ನೀಡಿದ್ದಾರೆ.
ಈ ಟ್ವೀಟ್ ವಾರ್ ಇಲ್ಲೇ ಕೊನೆಯಾಗುತ್ತಾ ಅಥವಾ ಸಚಿವರು ಇದಕ್ಕೆ ಪ್ರತಿಕ್ರಿಯಿಸಿ ಮುಂದುವರೆಯುತ್ತಾ ನೋಡಬೇಕಷ್ಟೇ.