’ನಟರ ಸ್ಮಾರಕ ನಿರ್ಮಿಸಲು ಸಿಎಂ ಬಳಿ ಹಣವಿದೆ, ರೈತರಿಗಾಗಿ ದುಡ್ಡಿಲ್ಲವೇ?'
ಸ್ಮಾರಕ ವಿವಾದ ಕರ್ನಾಟಕ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಬೆನ್ನು ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಅಂಬಿ ನಿಧನದ ಬೆನ್ನಲ್ಲೇ ವಿಷ್ಟಣುವರ್ಧನ್ ಸ್ಮಾರಕ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಈ ವಿವಾದ ಶಾಂತಗೊಳ್ಳುವ ಮೊದಲೇ ಇದೀಗ ಸಿಎಂ ಕುಮಾರಸ್ವಾಮಿ ರೈತರ ಆಕ್ರೋಶ ಎದುರಿಸಬೇಕಾದ ಅನಿವಾರ್ಯತೆ ಬಂದೊದಗಿದೆ.
ಮೈಸೂರು[ಡಿ.07]: ಅಂಬರೀಶ್ ನಿಧನದ ಬೆನ್ನಲ್ಲೇ ಸಾಹಸ ಸಿಂಹ ನಟ ವಿಷ್ಣುವರ್ಧನ್ ಸ್ಮಾರಕ ವಿಚಾರ ಭಾರೀ ವಿವಾದ ಹುಟ್ಟು ಹಾಕಿತ್ತು. ವಿಷ್ಣು ಸ್ಮಾರಕದ ಕೂಗು ತಣ್ಣಗಾಯ್ತು ಎನ್ನುವಷ್ಟರಲ್ಲಿ ಸಿಎಂ ವಿರುದ್ಧ ರೈತರು ಗರಂ ಆಗಿದ್ದಾರೆ.
ಡಾ.ರಾಜ್ ರೀತಿಯಲ್ಲೇ ಅಂಬಿ ಸ್ಮಾರಕ
ಸ್ಮಾರಕ ನಿರ್ಮಾಣದ ಕುರಿತಾಗಿ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿರುವ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬರು ಶಾಂತಕುಮಾರ್ 'ಚಿತ್ರ ನಟರಿಗೆ ನಮ್ಮ ತೆರಿಗೆ ಹಣದಲ್ಲಿ ಸ್ಮಾರಕಮಾಡಲು ಮುಂದಾಗಿದ್ದಾರೆ. ಆದರೆ ರೈತರ ಮುಖಂಡರ ಸ್ಮಾರಕ ಯಾಕೆ ಮಾಡುತ್ತಿಲ್ಲ. ಚಿತ್ರ ನಟರಷ್ಟೇ ನಾಯಕರಾ? ರೈತ ಮುಖಂಡರು ನಾಯಕರಲ್ಲವೇ?' ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ 'ರೈತ ಮುಖಂಡರ ಸ್ಮಾರಕ ಮಾಡದಿದ್ದರೆ ಕಾನೂನು ಹೋರಾಟದ ಜೊತೆಗೆ ಬೇರೆ ರೀತಿಯ ಹೋರಾಟ ಮಾಡುತ್ತೇವೆ' ಎನ್ನುವ ಮೂಲಕ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ.
ವಿಷ್ಣು ಸ್ಮಾರಕ ಮೈಸೂರಲ್ಲೇ ನಿರ್ಮಾಣ?
ಸದ್ಯ ಅಂಬಿ, ವಿಷ್ಣು ಸ್ಮಾರಕದ ವಿವಾದದ ಬೆನ್ನಲ್ಲೇ ಮತ್ತೊಂದು ಸ್ಮಾರಕದ ಕೂಗು ಕೇಳಿ ಬಂದಿರುವುದು ಸಿಎಂ ಕುಮಾರಸ್ವಾಮಿಗೆ ಮತ್ತೊಂದು ತಲೆ ನೋವಾಗಿದೆ. ಈಗಾಗಲೇ ನಟರ ಕುಟುಂಬಸ್ಥರನ್ನು ಓಲೈಸಲು ಹರಸಾಹಸಪಡುತ್ತಿರುವ ಸಿಎಂ ರೈತ ನಾಯಕರನ್ನು ಮಾತುಕತೆ ಮೂಲಕವೇ ಸಮಾಧಾನಪಡಿಸುತ್ತಾರಾ? ರೈತ ನಾಯಕರ ಬೇಡಿಕೆಯಂತೆ ಸ್ಮಾರಕ ನಿರ್ಮಿಸುತ್ತಾರಾ ಎಂಬುವುದನ್ನು ಕಾದು ನೋಡಬೇಕಷ್ಟೇ.