ಟೀಂ ಇಂಡಿಯಾ 6 ಕ್ರಿಕೆಟಿಗರು 2019ರ ಐಪಿಎಲ್ ಆಡಬಾರದು! ಯಾಕೆ?
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಎಂ.ಎಸ್ ಧೋನಿ ಸೇರಿದಂತೆ ಪ್ರಮುಖ 6 ಕ್ರಿಕೆಟಿಗರು ಈ 2019ರ ಐಪಿಎಲ್ ಟೂರ್ನಿಯಿಂದ ಹೊರಗುಳಿಯಬೇಕು ಅನ್ನೋ ಮಾತುಗಳು ಕೇಳಿಬಂದಿದೆ. ಅಷ್ಟಕ್ಕೂ ಐಪಿಎಲ್ನಿಂದ ಯಾಕೆ ಹೊರಗುಳಿಯಬೇಕು? ಇಲ್ಲಿದೆ.
ಬೆಂಗಳೂರು(ಅ.07): ಏಷ್ಯಾಕಪ್ ಟೂರ್ನಿ ಮುಗಿಸಿ ಇದೀಗ ವೆಸ್ಟ್ಇಂಡೀಸ್ ವಿರುದ್ದದ ಸರಣಿ ಆಡುತ್ತಿರುವ ಟೀಂ ಇಂಡಿಯಾ ಸತತ ಕ್ರೆಕೆಟ್ ಆಡುತ್ತಿದೆ. ವಿಂಡೀಸ್ ಸರಣಿ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಇಷ್ಟೇ ಆಸಿಸಿ ಸರಣಿ ಬಳಿಕ ನ್ಯೂಜಿಲೆಂಡ್ ವಿರುದ್ಧ ಸರಣಿ ಆಡಲಿದೆ.
ಕಿವೀಸ್ ವಿರುದ್ದದ ಸರಣಿ ಮುಗಿಯುತ್ತಿದ್ದಂತೆ, ಬಹುನಿರೀಕ್ಷಿತ ಐಪಿಎಲ್ ಟೂರ್ನಿ ಬರಲಿದೆ. ಈ ಬಾರಿ ಭಾರತದಲ್ಲಿ ಲೋಕಸಭಾ ಚುನಾವಣೆ ಇರೋದರಿಂದ ಬಹುಬೇಗನೆ ಐಪಿಎಲ್ ಆರಂಭಗೊಳ್ಳಲಿದೆ. ಇನ್ನು ಜೂನ್ ತಿಂಗಳಿಂದ ಪ್ರತಿಷ್ಠಿತ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ.
2019ರ ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾದ 6 ಕ್ರಿಕೆಟಿಗರು ಐಪಿಎಲ್ ಟೂರ್ನಿಯಿಂದ ದೂರ ಉಳಿಯುವುದು ಒಳಿತು. ಸತತ ಕ್ರಿಕೆಟ್ ಹಾಗೂ ಇಂಜುರಿ ಸಮಸ್ಯೆ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಸವಾಲೆಸೆಯಲಿದೆ.
6)ಕೇದಾರ್ ಜಾದವ್
ಸ್ಫೋಟಕ ಬ್ಯಾಟಿಂಗ್ ಹಾಗೂ ಪಾರ್ಟ್ ಸ್ಪಿನ್ನರ್ ಕೇದಾರ್ ಜಾದವ್ ಟೀಂ ಇಂಡಿಯಾ ಏಕದಿನ ತಂಡದ ಖಾಯಂ ಸದಸ್ಯ ಆದರೆ ಇಂಜುರಿ ಸಮಸ್ಯೆಯಿಂದ ಬಳಲುತ್ತಿರುವ ಕೇದಾರ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಜಾದವ್ ಐಪಿಎಲ್ನಿಂದ ದೂರ ಉಳಿಯುವುದು ಒಳಿತು.
5) ಹಾರ್ದಿಕ್ ಪಾಂಡ್ಯ
ಏಷ್ಯಾಕಪ್ ಟೂರ್ನಿಯಲ್ಲಿ ಇಂಜುರಿಗೆ ತುತ್ತಾದ ಹಾರ್ದಿಕ್ ಪಾಂಡ್ಯ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. 2019ರ ವಿಶ್ವಕಪ್ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವುದರಿಂದ ಫಾಸ್ಟ್ ಆಲೌಂಡರ್ ಅಗತ್ಯ ತಂಡಕ್ಕಿದೆ. ಆದರೆ ಪಾಂಡ್ಯ ಐಪಿಎಲ್ ಆಡಿದರೆ ಮತ್ತೆ ಇಂಜುರಿಯಾಗೋ ಸಾಧ್ಯತೆ ಇದೆ.
4)ಭುವನೇಶ್ವರ್ ಕುಮಾರ್
ಟೀಂ ಇಂಡಿಯಾ ವೇಗದ ಬೌಲಿಂಗ್ ಸಾರಥಿ ಭುವನೇಶ್ವರ್ ಕುಮಾರ್ ಸತತ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚೇತರಿಸಿಕೊಂಡು ಐಪಿಎಲ್ ಆಡಿದರೆ ಮತ್ತೆ ಸಮಸ್ಯೆ ಕಾಣಿಸಿಕೊಳ್ಳೋ ಸಾಧ್ಯತೆ ಇದೆ. ಟೀಂ ಇಂಡಿಯಾ ಪ್ರಮುಖ ವೇಗಿ ಹಾಗೂ ಇಂಗ್ಲೆಂಡ್ ಕಂಡೀಶನ್ನಲ್ಲಿ ಪರಿಣಾಮಕಾರಿಯಾಗಿರುವ ಭುವಿ, ಐಪಿಎಲ್ನಿಂದ ದೂರ ಉಳಿಯೋದೇ ಒಳಿತು.
3)ಜಸ್ಪ್ರೀತ್ ಬುಮ್ರಾ
ಏಕದಿನ ಬೌಲರ್ಗಳಲ್ಲಿ ಮೊದಲ ಸ್ಥಾನದಲ್ಲಿರುವ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾ ಫ್ರಂಟ್ ಲೈನ್ ಬೌಲರ್. ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಜೋಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹೀಗಾಗಿ ಬುಮ್ರಾ ಕೂಡ ಐಪಿಎಲ್ ಟೂರ್ನಿಯಿಂದ ಹೊರಗುಳಿದರೆ, 2019ರ ವಿಶ್ವಕಪ್ಗೆ ಸಹಕಾರಿಯಾಗಲಿದೆ.
2)ಎಂ.ಎಸ್ ಧೋನಿ
ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗ, ಮಾಜಿ ನಾಯಕ ಎಂ.ಎಸ್ ಧೋನಿ ಅನುಭವ ವಿಶ್ವಕಪ್ ಟೂರ್ನಿಯಲ್ಲಿ ತಂಡಕ್ಕೆ ಮುಖ್ಯವಾಗಿದೆ. 37 ವರ್ಷದ ಧೋನಿ ಸತತ ಐಪಿಎಲ್ ಪಂದ್ಯಗಳಿಂದ ಬಳಲಲಿದ್ದಾರೆ. ಹೀಗಾಗಿ ಧೋನಿ ಕೂಡ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವುದೇ ಸೂಕ್ತ.
1) ವಿರಾಟ್ ಕೊಹ್ಲಿ
2019ರಲ್ಲಿ ಟೀಂ ಇಂಡಿಯಾವನ್ನ ಯಶಸ್ವಿಯಾಗಿ ಮುನ್ನಡೆಸೋ ಜವಾಬ್ದಾರಿ ವಿರಾಟ್ ಕೊಹ್ಲಿ ಮೇಲಿದೆ. ವಿಂಡೀಸ್ ಸರಣಿಯಿಂದ ನ್ಯೂಜಿಲೆಂಡ್ ಸರಣಿವರೆಗೂ ಟೀಂ ಇಂಡಿಯಾವನ್ನ ಮುನ್ನಡೆಸುವ ಕೊಹ್ಲಿ ಬಳಿಕ, ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಮುನ್ನಡೆಸಬೇಕಿದೆ. ಇದರ ಬೆನ್ನಲ್ಲೇ ವಿಶ್ವಕಪ್ ಟೂರ್ನಿ ಇರೋದರಿಂದ ಕೊಹ್ಲಿ ಐಪಿಎಲ್ನಿಂದ ವಿಶ್ರಾಂತಿ ಪಡೆಯುವುದು ಸೂಕ್ತ.