ಕ್ರಿಕೆಟ್ ಎಂದಾಗ ನಟಿ ತಾಪ್ಸಿ ಪನ್ನು ಉರಿದುಬಿದ್ದಿದೇಕೆ?
ಕ್ರಿಕೆಟ್ ಅಂದರೆ ಎಲ್ಲಿರಿಗೂ ಇಷ್ಟ. ಆದರೆ ನಟಿ ತಾಪ್ಸಿ ಪನ್ನು ಕ್ರಿಕೆಟ್ ಅಂದರೆ ಮಾರುದ್ದ ದೂರ ಹೋಗ್ತಾರೆ. ಅಷ್ಟಕ್ಕೂ ತಾಪ್ಸಿಗೆ ಕ್ರಿಕೆಟ್ ಮೇಲೆ ಸಿಟ್ಟೇಕೆ? ಇಲ್ಲಿದೆ ವಿವರ.
ಮುಂಬೈ(ಜು.11): ಕ್ರಿಕೆಟ್ ಅನ್ನೋ ಮೂರಕ್ಷರ ಕಿವಿಗೆ ಬಿದ್ದರೆ ಸಾಕು ಎಲ್ಲರ ಕಿವಿ ಒಂದು ಕ್ಷಣ ನೆಟ್ಟಗಾಗುತ್ತೆ. ಇಡೀ ಭಾರತವೇ ಕ್ರಿಕೆಟ್ನಲ್ಲಿ ಮುಳುಗಿ ಹೋಗಿದೆ. ಆದರೆ ಬಾಲಿವುಡ್ ನಟಿ ತಾಪ್ಸಿ ಪನ್ನು ಕ್ರಿಕೆಟ್ ಅಂದರೆ ಗರಂ ಆಗುತ್ತಾರೆ.
ತಾಪ್ಸಿ ಕ್ರಿಕೆಟ್ ಮೇಲಿನ ಕೋಪಕ್ಕೆ ಕಾರಣವೂ ಇದೆ. ಭಾರತದಲ್ಲಿ ಕ್ರಿಕೆಟ್ನಿಂದ ಇತರ ಕ್ರೀಡೆ ಹಾಗು ಪ್ರತಿಭೆಗಳು ಬೆಳಕಿಗೆ ಬರುತ್ತಿಲ್ಲ ಎಂದು ತಾಪ್ಸಿ ಕ್ರಿಕೆಟ್ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ. ದಿ ಇಂಟರ್ನ್ಯಾಶನಲ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ತಾಪ್ಸಿ ತಮ್ಮ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ತಾಪ್ಸಿ ಪನ್ನು ಅಭಿನಯದ ಸೂರ್ಮಾ ಚಿತ್ರ ಇದೇ ಜುಲೈ 13 ರಂದು ತೆರೆಗೆ ಅಪ್ಪಳಿಸಲಿದೆ. ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ಜೀವನಾಧಾರಿತ ಈ ಚಿತ್ರದಲ್ಲಿ ತಾಪ್ಸಿ ನಾಯಕಿಯಾಗಿ ಕಾಣಿಸಿಕೊಂಡರೆ, ದಲ್ಜೀತ್ ದೋಸಾನ್ಜ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ರೈಲು ಪ್ರಯಾಣದ ವೇಳೆ ಭಾರತ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಇನ್ನೇನು ಸಂದೀಪ್ ಕತೆ ಮುಗಿಯಿತು ಎಂದು ಎಲ್ಲರು ಅಂದುಕೊಂಡಿದ್ದರು. ಆದರೆ ಸಂದೀಪ್ ಮತ್ತೆ ತಂಡ ಸೇರಿಕೊಂಡು ಇತಿಹಾಸ ರಚಿಸಿದರು. ಈ ನೈಜ ಘಟನೆ ಕ್ರಿಕೆಟ್ನಿಂದಾಗಿ ನನಗೆ ಗೊತ್ತೇ ಇರಲಿಲ್ಲ ಎಂದು ತಾಪ್ಸಿ ಹೇಳಿದ್ದಾರೆ.
ಇಂತಹ ಅದೆಷ್ಟೋ ಘಟನೆಗಳು, ಪ್ರತಿಭೆಗಳು ಬೆಳಕಿಗೆ ಬರುವ ಮುನ್ನವೇ ಮುದುಡಿ ಹೋದ ಊದಾಹರಣೆಗಳು ಸಾಕಷ್ಟಿವೆ. ಭಾರತದಲ್ಲಿ ಕ್ರಿಕೆಟ್ ಆವರಿಸಿಕೊಂಡಿದೆ. ಹೀಗಾಗಿ ಇತರ ಕ್ರೀಡೆಗಳಿಗೆ ಪ್ರಾಶಸ್ಥ್ಯ ಸಿಗುತ್ತಿಲ್ಲ ಎಂದು ತಾಪ್ಸಿ ಹೇಳಿದ್ದಾರೆ.