ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಗೆ ಎದುರಾಯ್ತು ಮತ್ತೊಂದು ವಿಘ್ನ!
ಪಾಕಿಸ್ತಾನ ಸೂಪರ್ ಲೀಗ್ ಟಿ20 ಟೂರ್ನಿಗೆ ಮತ್ತೊಂದು ವಿಘ್ನ ಎದುರಾಗಿದೆ. ಆಟಗಾರರ ಉಳಿಸಿಕೊಳ್ಳುವಿಕೆಗೆ ಇನ್ನು 3 ದಿನ ಬಾಕಿ ಇರುವಗಾಲೇ ಪಾಕಿಸ್ತಾನ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಕರಾಚಿ(ನ.10): ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್) ಟಿ20 ಟೂರ್ನಿ ಆರಂಭಕ್ಕೆ ಕೆಲ ತಿಂಗಳು ಮಾತ್ರ ಬಾಕಿ. ಅಷ್ಟರಲ್ಲೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ತೆಗೆದುಕೊಂಡ ಕಠಿಣ ನಿರ್ಧಾರ ಟೂರ್ನಿ ಮೇಲೆ ದೊಡ್ಡ ಪರಿಣಾಮ ಬೀರಿದೆ.
ಬ್ಯಾಂಕ್ ಗ್ಯಾರೆಂಟಿ ಹಣ ನೀಡದ ಮುಲ್ತಾನ್ ಸುಲ್ತಾನ್ ತಂಡವನ್ನ ವಜಾಗೊಳಿಸಿದೆ. 2018ರಲ್ಲಿ ಮುಲ್ತಾನ್ ಸುಲ್ತಾನ್ ತಂಡ ಪಿಎಸ್ಎಲ್ ಟೂರ್ನಿದೆ ಪಾದಾರ್ಪಣೆ ಮಾಡಿತ್ತು. ಆದರೆ 37 ಕೋಟಿ ರೂಪಾಯಿ ಬ್ಯಾಂಕ್ ಗ್ಯಾರೆಂಟಿ ಹಣ ಬಾಕಿ ಉಳಿಸಿಕೊಂಡಿತ್ತು. ಹಲವು ಗಡುವಿನ ಬಳಿಕ ಮುಲ್ತಾನ್ ತಂಡ ಹಣ ಪಾವತಿಸಿರಲಿಲ್ಲ.
2019ರ ಪಿಎಸ್ಎಲ್ ಟೂರ್ನಿಗೆ ಸಿದ್ಧತೆ ನಡೆಯುತ್ತಿದೆ. ಆಟಗಾರರನ್ನ ಉಳಿಸಿಕೊಳ್ಳುವಿಕೆಗೆ(ರಿಟೆನ್ಶನ್) ಇನ್ನು 3 ದಿನ ಬಾಕಿ ಇರುವಾಗಲೇ ಪಿಸಿಬಿ ಕಠಿಣ ಕ್ರಮ ಕೈಗೊಂಡಿದೆ. ಹೀಗಾಗಿ ಪಿಎಸ್ಎಲ್ ಟೂರ್ನಿಯಲ್ಲಿ ಸ್ಟಾರ್ ಆಟಗಾರರನ್ನೊಳಗೊಂಡ ಪ್ರಮುಖ ತಂಡವೇ ಟೂರ್ನಿಯಿಂದ ಹೊರಗುಳಿಯುತ್ತಿದೆ.
ಮುಲ್ತಾನ್ ಸುಲ್ತಾನ್ ತಂಡದಲ್ಲಿ ಪಾಕಿಸ್ತಾನದ ಶೋಯೆಬ್ ಮಲಿಕ್, ಉಮರ್ ಗುಲ್, ಅಹಮ್ಮದ್ ಶೆಹಜಾದ್, ಶ್ರೀಲಂಕಾದ ಕುಮಾರ ಸಂಗಕ್ಕಾರ, ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್ ಸೇರಿದಂತೆ ಸ್ಟಾರ್ ಆಟಗಾರರನ್ನೊಳಗೊಂಡಿದೆ.