Asianet Suvarna News Asianet Suvarna News

ಕ್ರೀಡೆಗೆ ಒತ್ತು ನೀಡುವುದೇ ನಮ್ಮ ಮುಖ್ಯ ಧ್ಯೇಯ : ಶಾಸಕ ಕೃಷ್ಣ ಭೈರೇಗೌಡ

ಸಹಕಾರನಗರದಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ
"ನಮ್ಮ ಕ್ರೀಡಾ ಹಬ್ಬʼ ಉದ್ಘಾಟನೆ ಮಾಡಿದ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣ ಭೈರೇಗೌಡ
ಸರಕಾರಿ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಸ್ಕ್ವಾಷ್‌ ಕ್ರೀಡಾಂಗಣ ಕೂಡ ಲಭ್ಯ

Our main aim is focus on Sports development Says Byatarayanapura MLA Krishna Byre Gowda kvn
Author
First Published Oct 2, 2022, 1:43 PM IST

ಬೆಂಗಳೂರು(ಅ.02): ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ, ದೈಹಿಕ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ದೈಹಿಕ ವ್ಯಾಯಾಮ ಮತ್ತು ಕ್ರೀಡೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಆರೋಗ್ಯ ಭಾಗ್ಯ ದೊರೆಯುತ್ತದೆ. ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬ್ಯಾಟರಾಯನಪುರ ಕ್ಷೇತ್ರದ ಶಾಸಕರು, ಮಾಜಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಬ್ಯಾಟರಾನಯನಪುರದ ಸಹಕಾರನಗರದಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಒಳಾಂಗಣ ಕ್ರೀಡಾಂಗಣ ಹಾಗೂ "ನಮ್ಮ ಕ್ರೀಡಾ ಹಬ್ಬʼ ಉದ್ಘಾಟನೆ ಮಾಡಿ ಮಾತನಾಡಿದರು. ದೇಹವನ್ನು ದಂಡಿಸುವ ಮೂಲಕ, ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಬೆವರಿನ ಜತೆ ನಮ್ಮ ಒತ್ತಡ ಕೂಡ ಹೊರಟು ಹೋಗುತ್ತದೆ. ಎಲ್ಲರೂ ಹೆಚ್ಚು ಆರೋಗ್ಯಪೂರ್ಣವಾಗಿ ಇರಲಿ ಎಂಬ ಉದ್ದೇಶದಿಂದ ಈ ಬೃಹತ್‌ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಕೃಷ್ಣ ಭೈರೇಗೌಡ ಸಲಹೆ ನೀಡಿದರು.

ಮಕ್ಕಳು ಈಗ ವೀಡಿಯೋ, ಮೊಬೈಲ್‌ ಗೇಮ್‌ಗಳಲ್ಲಿ ಹೆಚ್ಚು ಮುಳುಗಿರುತ್ತಾರೆ. ಈ ಗೀಳನ್ನು ತಪ್ಪಿಸಿ ಮಕ್ಕಳನ್ನು ದೈಹಿಕವಾಗಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು, ಅತಿ ಕಡಿಮೆ ಶುಲ್ಕದಲ್ಲಿ ವಿವಿಧ ಕ್ರೀಡೆಯಲ್ಲಿ ಹಾಗೂ ದೈಹಿಕ ವ್ಯಾಯಾಮ ಮಾಡಲು ಅನುಕೂಲವಾಗಲೆಂದು ಈ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕರು ಹೇಳಿದರು.

ಈಗ ಎಲ್ಲೆಡೆ ನಾಡಹಬ್ಬ ದಸರಾ ಮುಗಿಲು ಮುಟ್ಟಿದೆ. ದಸರಾ ಎಂದರೆ ಹಿಂದಿನಂದಲೂ ಸಂಭ್ರಮ ಹೆಚ್ಚಾಗಿಯೇ ಇರುತ್ತದೆ. ದಸರಾ ಸಂದರ್ಭದಲ್ಲಿ ಮೊದಲಿನಿಂದಲೂ ಕ್ರೀಡೆ ಕೂಡ ನಡೆಯುತ್ತಿತ್ತು. ಇದರಂತೆ ನಾವು ಕೂಡ ಈ ನಾಡಹಬ್ಬ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ʼನಮ್ಮ ಕ್ರೀಡಾ ಹಬ್ಬʼ ಎರಡು ದಿನಗಳ ಕ್ರೀಡಾಕೂಟ ಆಯೋಜಿಸಿದ್ದೇವೆ ಎಂದು ತಿಳಿಸಿದರು.

ನಮ್ಮ ಸರಕಾರಿ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಸ್ಕ್ವಾಷ್‌ ಕ್ರೀಡಾಂಗಣ ಕೂಡ ಇಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಕೆಂಪಾಪುರದಲ್ಲಿ ಒಳಾಂಗಣ ಈಜುಕೊಳ ಕೂಡ ಉದ್ಘಾಟನೆ ಮಾಡಲಿದ್ದೇವೆ ಎಂದು ಶಾಸಕ ಕೃಷ್ಣ ಭೈರೇಗೌಡ ತಿಳಿಸಿದರು.

ನಂತರ ಸಂಸದ ಡಿವಿ ಸದಾನಂದಗೌಡ ಮಾತನಾಡಿ, ಎಲ್ಲದ್ದಕ್ಕೂ ಕಾಲ ಕೂಡಿಬರಬೇಕು. ಅದಕ್ಕಾಗಿಯೇ ಕೊರೊನಾ ನಂತರ ಈ ಬೃಹತ್‌ ಸೌಲಭ್ಯವುಳ್ಳ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಯಾಗುತ್ತಿದೆ. ಆರೋಗ್ಯ ಹೆಚ್ಚಿಸಿಕೊಳ್ಳಲು ಪೂರಕ ವ್ಯವಸ್ಥೆ ಕಲ್ಪಿಸಿಕೊಟ್ಟಿರುವ ಸಹಕಾರ ನಗರದ ಒಳಾಂಗಣ ನಿಜಕ್ಕೂ ಅದ್ಭುತವಾಗಿದೆ ಎಂದರು.

ಸರಕಾರಿ ಯೋಜನೆಗಳು ಉದ್ಘಾಟನೆವರೆಗೂ ಚೆನ್ನಾಗಿರುತ್ತದೆ. ಆ ನಂತರ ಅದನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ. ಆದರೆ ಈ ಸಹಕಾರನಗರ ಒಳಾಂಗಣ ಕ್ರೀಡಾಂಗಣದ ಉಸ್ತುವಾರಿಗಾಗಿಯೂ ಗುತ್ತಿಗೆದಾರರನ್ನು ನಿಯೋಜಿಸಲಾಗಿದೆ ಎಂದು ಶಾಸಕರು ತಿಳಿಸಿದಾಗ ನಿಜಕ್ಕೂ ಸಂತಸವಾಯಿತು. ಈ ರೀತಿಯ ವ್ಯವಸ್ಥೆ ಎಲ್ಲೆಡೆ ಸಿಗಬೇಕು. ಈ ಕ್ಷೇತ್ರದಲ್ಲಿ ಈ ಕ್ರೀಡಾಂಗಣ ಹಾಗೂ ನಮ್ಮ ಕ್ರೀಡಾ ಹಬ್ಬ ಆಯೋಜಿಸುವ ಮೂಲಕ ಶಾಸಕರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಸಂಸದ ಡಿವಿ ಸದಾನಂದ ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಕ್ರೀಡಾ ಹಬ್ಬದಲ್ಲಿ ಬ್ಯಾಡ್ಮಿಂಟನ್‌, ಸ್ಕ್ವಾಷ್‌, ವಾಲಿಬಾಲ್‌ ಸೇರಿದಂತೆ ವಿವಿಧ ಕ್ರೀಡಾ ಸ್ಫರ್ಧೆ ಆಯೋಜಿಸಲಾಗಿದೆ. ಸಮಾರಂಭದಲ್ಲಿ 1700 ಕ್ರೀಡಾಕಾರರು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಜಂಟಿ ಆಯುಕ್ತ ಪೂರ್ಣಿಮಾ, ಗಣ್ಯರು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Follow Us:
Download App:
  • android
  • ios