ಏಷ್ಯಾಕಪ್ ಟೂರ್ನಿ ಬಹಿಷ್ಕರಿಸಲು ಸೂಚಿಸಿದ ಸೆಹ್ವಾಗ್!
ಏಷ್ಯಾಕಪ್ ಟೂರ್ನಿ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಅಭಿಮಾನಿಗಳು ಸಂತಸದಲ್ಲಿ ತೇಲಾಡಿದರು. ಕಾರಣ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ. ಆದರೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಏಷ್ಯಾಕಪ್ ಟೂರ್ನಿ ಬಹಿಷ್ಕರಿಸಲು ಸೂಚಿಸಿದ್ದಾರೆ. ಅಷ್ಟಕ್ಕೂ ಸೆಹ್ವಾಗ್ ಈ ಸೂಚನೆ ನೀಡಿದ್ದೇಕೆ?
ದೆಹಲಿ(ಜು.26): ಸೆಪ್ಟೆಂಬರ್ನಲ್ಲಿ ಆರಂಭಗೊಳ್ಳಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯೇ ಸರಣಿಯ ಕೇಂದ್ರ ಬಿಂದು. ಆದರೆ ಇದೀಗ ಏಷ್ಯಾಕಪ್ ಟೂರ್ನಿಯನ್ನ ಬಹಿಷ್ಕರಿಸುವಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸೂಚಿಸಿದ್ದಾರೆ.
ಏಷ್ಯಾಕಪ್ ಟೂರ್ನಿ ವೇಳಾ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಬಿಸಿಸಿಐ ಸೇರಿದಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ವೇಳಾ ಪಟ್ಟಿ ಪ್ರಕಾರ ಭಾರತ ಸತತ ಪಂದ್ಯ ಆಡಲಿದೆ. ಸೆಪ್ಟೆಂಬರ್ 18ರಂದು ಭಾರತ ಅರ್ಹತಾ ಸುತ್ತಿನಲ್ಲಿ ಆಯ್ಕೆಯಾಗೋ ತಂಡದ ವಿರುದ್ಧ ಮೊದಲ ಪಂದ್ಯ ಆಡಿದರೆ, ಮರುದಿನ(ಸೆ.19) ಭಾರತ ತಂಡ ಬದ್ಧವೈರಿ ಪಾಕಿಸ್ತಾನ ವಿರುದ್ದ ಹೋರಾಟ ನಡೆಸಬೇಕಾಗಿದೆ. ಹೀಗಾಗಿ ಸೆಹ್ವಾಗ್ ಏಷ್ಯಾ ಕಪ್ ಟೂರ್ನಿಯಿಂದಲೇ ಹಿಂದೆ ಸರಿಯುವಂತೆ ಸೂಚಿಸಿದ್ದಾರೆ.
ದುಬೈನಲ್ಲಿ ಆಯೋಜಿಸಲಾಗಿರುವ ಏಷ್ಯಾಕಪ್ ಟೂರ್ನಿ ವೇಳಾಪಟ್ಟಿ ಭಾರತಕ್ಕೆ ಪೂರಕವಾಗಿಲ್ಲ. ಸತತ ಪಂದ್ಯದಿಂದ ಟೀಂ ಇಂಡಿಯಾ ಕ್ರಿಕೆಟಿಗರು ಸುಸ್ತಾಗಲಿದ್ದಾರೆ. ಜೊತೆಗೆ ಮಹತ್ವದ ಪಾಕಿಸ್ತಾನ ವಿರುದ್ಧದದ ಪಂದ್ಯದಲ್ಲಿ ಭಾರತಕ್ಕೆ ಶೇಕಾಡ 100ರ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.
ಏಷ್ಯಾಕಪ್ ವೇಳಾ ಪಟ್ಟಿಗೆ ಬಿಸಿಸಿಐ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಆಯೋಜಕರಿಗೆ ಹಣ ವ್ಯಾಮೋಹ ಇರಬಹುದು. ಆದರೆ ಭಾರತಕ್ಕೆ ಮಹತ್ವದ ಪಂದ್ಯ. ಹೀಗಾಗಿ ಸತತ ಪಂದ್ಯ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ.