ಬಾಂಗ್ಲಾ ತಂಡ ಕೂಡಿಕೊಂಡ ಇಬ್ಬರು ಸ್ಟಾರ್ ಬ್ಯಾಟ್ಸ್’ಮನ್’ಗಳು
ತಮೀಮ್ ಇಕ್ಬಾಲ್ ಗಾಯಗೊಂಡಿದ್ದರಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದಾದ ಬೆನ್ನಲ್ಲೇ ಬಾಂಗ್ಲಾದೇಶದ ಅಗ್ರ ಕ್ರಮಾಂಕದ ಬ್ಯಾಟ್ಸ್’ಮನ್’ಗಳು ರನ್ ಕಲೆಹಾಕಲು ಒದ್ದಾಡುತ್ತಿದ್ದಾರೆ.
ದುಬೈ[ಸೆ.22]: ಸತತ ಎರಡು ಪಂದ್ಯಗಳಲ್ಲಿ ಸೋತು ಆಘಾತದಲ್ಲಿರುವ ಬಾಂಗ್ಲಾದೇಶ ತಂಡಕ್ಕೆ ಬಲ ತುಂಬಲು ಆರಂಭಿಕರಾದ ಸೌಮ್ಯ ಸರ್ಕಾರ್ ಹಾಗೂ ಇಮ್ರುಲ್ ಕೈಸ್ ತಂಡ ಕೂಡಿಕೊಂಡಿದ್ದಾರೆ.
ತಮೀಮ್ ಇಕ್ಬಾಲ್ ಗಾಯಗೊಂಡಿದ್ದರಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದಾದ ಬೆನ್ನಲ್ಲೇ ಬಾಂಗ್ಲಾದೇಶದ ಅಗ್ರ ಕ್ರಮಾಂಕದ ಬ್ಯಾಟ್ಸ್’ಮನ್’ಗಳು ರನ್ ಕಲೆಹಾಕಲು ಒದ್ದಾಡುತ್ತಿದ್ದಾರೆ. ಹೀಗಾಗಿ ಆಫ್ಘಾನಿಸ್ತಾನ ಹಾಗೂ ಭಾರತ ಎದುರು ಬಾಂಗ್ಲಾದೇಶ ಮುಗ್ಗರಿಸಿದೆ. ಅದರಲ್ಲೂ ಬಾಂಗ್ಲಾದೇಶವು ಸೂಪರ್ 4 ಹಂತದಲ್ಲಿ ಟೀಂ ಇಂಡಿಯಾ ಎದುರು ಕೇವಲ 173 ರನ್’ಗಳಿಗೆ ಸರ್ವಪತನ ಕಂಡಿತ್ತು. ಹೀಗಾಗಿ ಬಾಂಗ್ಲಾ ಕ್ರಿಕೆಟ್ ಮಂಡಳಿ ಸೌಮ್ಯ ಸರ್ಕಾರ್ ಹಾಗೂ ಇಮ್ರಾನ್ ಕೈಸ್ ಅವರನ್ನು ದುಬೈಗೆ ಕಳಿಸಿಕೊಟ್ಟಿದೆ.
ತಮೀಮ್ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶದ ಆರಂಭಿಕರಾಗಿ ಲಿಟನ್ ದಾಸ್ ಹಾಗೂ ನಜ್ಮುಲ್ ಹುಸೇನ್ ಕಣಕ್ಕಿಳಿಯುತ್ತಿದ್ದು, ತಂಡಕ್ಕೆ ಉತ್ತಮ ಆರಂಭ ಒದಗಿಸಲು ವಿಫಲರಾಗುತ್ತಿದ್ದಾರೆ. ಲಿಟನ್ ದಾಸ್ ಮೊದಲ ಮೂರು ಪಂದ್ಯಗಳಲ್ಲಿ 14 ರನ್ ಬಾರಿಸಿದ್ದರೆ, ನಜ್ಮುಲ್ ಹುಸೇನ್ ಎರಡು ಪಂದ್ಯಗಳಿಂದ ಕೇವಲ 14 ರನ್ ಬಾರಿಸಿದೆ.
ಇದೀಗ ಭಾನುವಾರ[ಸೆ.23] ನಡೆಯಲಿರುವ ಸೂಪರ್ 4 ಹಂತದ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವು ಅಸ್ಗರ್ ನೇತೃತ್ವದ ಆಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಏಷ್ಯಾಕಪ್’ನ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶವು ಶ್ರೀಲಂಕಾ ತಂಡವನ್ನು ಬಗ್ಗುಬಡಿದಿತ್ತು, ಅದಾದ ಬಳಿಕ ಗೆಲುವಿಗಾಗಿ ಕನವರಿಸುತ್ತಿದೆ.